ಆದೇಶ ಹಿಂದೆಗೆಯಲು ಸಭಾಪತಿ ನೇತೃತ್ವದ ನಿಯೋಗದಿಂದ ಗೋವಾ ಸಚಿವರ ಭೇಟಿ: ಮನವಿ
ಕರ್ನಾಟಕದ ಮೀನಿಗೆ ಗೋವಾದಲ್ಲಿ ನಿಷೇಧ
ಉಡುಪಿ, ನ.20: ಮೀನುಗಳ ತಾಜಾತನ ಉಳಿಯಲು ಕ್ಯಾನ್ಸರ್ಕಾರಕ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗುತ್ತಿದೆ ಎಂಬ ಗುಮಾನಿಯ ಮೇಲೆ ಗೋವಾ ಸರಕಾರ, ಕರ್ನಾಟಕದ ಮೀನಿಗೆ ಹೇರಿರುವ ಸಂಪೂರ್ಣ ನಿಷೇಧವನ್ನು ಹಿಂದಕ್ಕೆ ಪಡೆಯುವಂತೆ ಮಾಜಿ ಶಾಸಕ ಯು.ಆರ್.ಸಭಾಪತಿ ನೇತೃತ್ವದಲ್ಲಿ ಕರ್ನಾಟಕ ಮೀನುಗಾರರ ನಿಯೋಗವೊಂದು ಸೋಮವಾರ ಗೋವಾದ ಪಣಜಿಗೆ ತೆರಳಿ ಸರಕಾರವನ್ನು ಒತ್ತಾಯಿಸಿದೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಯು.ಆರ್.ಸಭಾಪತಿ ಈ ವಿಷಯ ತಿಳಿಸಿದರು.
ಗೋವಾ ಸರಕಾರ ನ.12ರಿಂದ ಅಧಿಕೃತವಾಗಿ ಹೇರಿರುವ ಈ ನಿಷೇಧದಿಂದ ಕರ್ನಾಟಕದ ಮೀನುಗಾರರು, ಅದರಲ್ಲೂ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರು ಅತೀವ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದೊಂದು ತಪ್ಪು ಪ್ರಚಾರದಿಂದ ಆದ ಅನಾಹುತ. ಸುಮಾರು 300ಕಿ.ಮೀ.. ದೂರದಲ್ಲಿರುವ ಗೋವಾಕ್ಕೆ ತಾವು ಹಿಡಿದ ಮೀನನ್ನು ಕಳುಹಿಸಲು ಯಾವುದೇ ಕಾರಣಕ್ಕೂ ರಾಸಾಯನಿಕಗಳನ್ನು ಮಿಶ್ರಣಗೊಳಿಸುವ ಅಗತ್ಯ ಕರ್ನಾಟಕದ ಮೀನುಗಾರ ರಿಗೆ ಇರುವುದಿಲ್ಲ. ಸಣ್ಣ ಸಣ್ಣ ಲಾರಿಗಳಲ್ಲಿ ಮಂಜುಗಡ್ಡೆಯೊಂದಿಗೆ ಮೀನನ್ನು ತುಂಬಿ ಅವರು ಕಳುಹಿಸುತಿದ್ದಾರೆ ಎಂದು ಸಭಾಪತಿ ತಿಳಿಸಿದರು.
ಗೋವಾ ಸರಕಾರ ಮಾಡಿರುವ ಈ ಆದೇಶದಿಂದ ಎರಡೂ ರಾಜ್ಯಗಳ ಮೀನುಗಾರರಿಗೆ ತೊಂದರೆಯಾಗಿದ್ದು, ಗೋವಾ ಸರಕಾರ ತಕ್ಷಣವೇ ಈ ಆದೇಶ ವನ್ನು ಹಿಂದಕ್ಕೆ ಪಡೆಯುವಂತೆ ಮೀನುಗಾರರ ನಿಯೋಗ ಗೋವಾದ ಮೀನುಗಾರಿಕಾ ಸಚಿವ ವಿನೋದ ದತ್ತಾರಾಮ ಪಾಲ್ಯಂಕರ್ ಹಾಗೂ ಆರೋಗ್ಯ ಸಚಿವ ಬಿಸ್ವಜಿತ್ ರಾಣೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದೆ ಎಂದು ಸಭಾಪತಿ ವಿವರಿಸಿದರು.
ನಿಯೋಗದ ಮನವಿಗೆ ಉತ್ತರಿಸಿದ ಸಚಿವರು, ಗೋವಾ ಸರಕಾರ, ಕರ್ನಾಟಕದ ಮೀನಿಗೆ ಯಾವುದೇ ನಿಷೇಧ ಹೇರಿಲ್ಲ. ಆದರೆ ಮೀನು ಸರಬರಾಜು ಮಾಡಲು ಕೆಲವು ನಿರ್ದಿಷ್ಟವಾದ ನಿಯಮಗಳನ್ನು ಪಾಲಿಸುವ ಆದೇಶವನ್ನು ಮಾಡಿದ್ದೇವೆ. ಇದರಂತೆ ಕಾನೂನುಬದ್ಧವಾಗಿ ಬರುವ ಮೀನು ಗಳನ್ನು ಕೊಳ್ಳಲು ಸರಕಾರ ಯಾವುದೇ ತಕರಾರು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಎಂದರು.
ಆದರೆ ಕರ್ನಾಟಕದಿಂದ ಬರುವ ಮೀನುಗಳನ್ನು ಕರ್ನಾಟಕ-ಗೋವಾ ಗಡಿ ಯಲ್ಲಿರುವ ತಪಾಸಣಾ ಅಧಿಕಾರಿಗಳು ತಡೆದು ಹಿಂದಕ್ಕೆ ಕಳುಹಿಸುತ್ತಿರುವುದನ್ನು ಅವರ ಗಮನಕ್ಕೆ ತಂದಾಗ, ಈ ಬಗ್ಗೆ ಅಧಿಕಾರಿಗಳಿಗೆ ತಿಳುವಳಿಕೆ ನೀಡುವುದಾಗಿ ಹಾಗೂ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಅಲ್ಲದೇ ವಿಷಯವನ್ನು ಕರ್ನಾಟಕದ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡರ ಗಮನಕ್ಕೂ ತಂದಿದ್ದು, ಅವರು ಕೂಡಲೇ ಗೋವಾ ಸಚಿವ ರೊಂದಿಗೆ ಮಾತನಾಡುವ ಭರವಸೆ ನೀಡಿದ್ದಾರೆ.ಅಲ್ಲದೇ ರಾಜ್ಯದಿಂದ ರಾಸಾಯನಿಕ ಮಿಶ್ರಣದ ಮೀನನ್ನು ಸಾಗಿಸುವ ಲಾರಿಗಳಿದ್ದರೆ ಅವುಗಳ ವಿರುದ್ಧ ತೀಕ್ಷ್ಣ ಕ್ರಮಕೈಗೊಳ್ಳುವ ಆಶ್ವಾಸನೆಯನ್ನು ನೀಡಿದ್ದಾರೆ ಎಂದರು.
ಎರಡೂ ರಾಜ್ಯಗಳ ನಡುವೆ ಹಲವು ದಶಕಗಳಿಂದ ಸಾಗಿಬಂದ ಈ ವ್ಯವಹಾರವನ್ನು ಈಗ ಭಂಗಗೊಳಿಸುವುದರಿಂದ ರಾಜ್ಯದ ನಡುವಿದ್ದ ಸೌಹಾರ್ದತೆಯ ವಾತಾವರಣ ಹಾಳಾಗಿ, ಮನಸ್ತಾಪಕ್ಕೆ ಕಾರಣವಾಗಬಹುದು. ಈಗಾಗಲೇ ಕಾರವಾರದಲ್ಲಿ ಶನಿವಾರ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿ ಹೆದ್ದಾರಿ ಬಂದ್ ನಡೆಸಿದ್ದಾರೆ ಎಂದರು.
ಎಫ್ಡಿಎ ಸರ್ಟಿಫಿಕೇಷನ್ ಇಲ್ಲದ ಮೀನುಗಳನ್ನು ಗೋವಾ ಪ್ರವೇಶಿಸಲು ಬಿಡುವುದಿಲ್ಲ ಎಂಬ ಸಚಿವ ರಾಣೆಯವರ ಹೇಳಿಕೆಯತ್ತ ಅವರ ಗಮನ ಸೆಳೆದಾಗ, ಇಲ್ಲಿಂದ 30 ಮಂದಿ ಮೀನುಗಾರರ ಎಫ್ಡಿಎ ಅಡಿ ಅರ್ಜಿ ಹಾಕಿದ್ದರೂ, ಎಲ್ಲವನ್ನೂ ಗೋವಾ ತಿರಸ್ಕರಿಸಿದೆ ಎಂದರು.
ಗೋವಾದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೀರು ಎಂ.ಸಾಬ್, ರಾ.ಕಾರ್ಯದರ್ಶಿ ಕಿರಣ್ಕುಮಾರ್, ಸದಸ್ಯ ಜೋಸೆಫ್ ವಾಜ್, ರಾಜ್ಯ ಉಪಾಧ್ಯಕ್ಷ ಪ್ಯಾರು ಸಾಬ್, ಉ.ಕ.ಮೀನುಗಾರರ ಫೆಡರೇಷನ್ ಅಧ್ಯಕ್ಷ ಗಣಪತಿ ಮಾಂಗರೆ, ಉಡುಪಿ ಜಿಲ್ಲಾ ಉಪಾಧ್ಯಕ್ಷ ರಮೇಶ್ ತಿಂಗಳಾಯ, ಪ್ರವೀಣ್ ಜಾವಕರ್, ನರಸಿಂಹ ಆಚಾರಿ ಉಪಸ್ಥಿತರಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಪೀರು ಸಾಬ್, ಕಿರಣ್ಕುಮಾರ್, ರಮೇಶ್ ತಿಂಗಳಾಯ, ಉಪೇಂದ್ರ ಮೆಂಡನ್, ಅಕ್ರಂ ಅಲಿ ಉಪಸ್ಥಿತರಿದ್ದರು.