ಕಾಂಗ್ರೆಸ್ 25 ಲಕ್ಷ ರೂ. ಆಮಿಷ ಒಡ್ಡಿತ್ತು: ಅಸಾದುದ್ದೀನ್ ಓವೈಸಿ ಆರೋಪ
ಹೊಸದಿಲ್ಲಿ, ನ. 20: ತೆಲಂಗಾಣ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಲಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ರದ್ದುಗೊಳಿಸಲು ಕಾಂಗ್ರೆಸ್ ಪಕ್ಷ 25 ಲಕ್ಷ ರೂ. ಆಮಿಷ ಒಡ್ಡಿತ್ತು ಎಂದು ಅಖಿಲ ಭಾರತ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಂಗಳವಾರ ಪ್ರತಿಪಾದಿಸಿದ್ದಾರೆ.
ಹೈದರಾಬಾದ್ನಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಓವೈಸಿ, ತನ್ನ ಪ್ರತಿಪಾದನೆ ಸಾಬೀತುಪಡಿಸಲು ಅಡಿಯೋ ರೆಕಾರ್ಡಿಂಗ್ ಇದೆ ಎಂದಿದ್ದಾರೆ. ನಿರ್ಮಲಾದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರ್ಯಾಲಿ ರದ್ದುಗೊಳಿಸಿದರೆ ಪಕ್ಷದ ನಿಧಿಗೆ 25 ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್ ಆಮಿಷ ಒಡ್ಡಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಈ ರೀತಿ ಆಮಿಷ ಒಡ್ಡುವುದು ಅದರ ದರ್ಪವನ್ನು ತೋರಿಸುತ್ತದೆ. ಕೆಲವರು ಇದನ್ನು ನಿರಾಕರಿಸಲು ಪ್ರಯತ್ನಿಸುವರು. ಆದರೆ, ನಮ್ಮಲ್ಲಿ ದಾಖಲೆಗಳಿವೆ ಎಂದು ಅವರು ಹೇಳಿದ್ದಾರೆ. ತಾನು ಅವರಂತೆ ಅಲ್ಲ. ತಾನು ತನ್ನ ಭರವಸೆಯನ್ನು ಮಾರಾಟ ಮಾರಲಾರೆ. ಯಾರೊಬ್ಬರೂ ತನ್ನನ್ನು ಖರೀದಿಸಲು ಸಾಧ್ಯವಿಲ್ಲ. ತಮ್ಮ ಬಾವುಟ ದೇಶದ ಮೂಲೆ ಮೂಲೆಯಲ್ಲಿ ಹಾರಾಡುವುದನ್ನು ನೋಡಲು ತಾನು ಬಯಸುತ್ತೇನೆ ಎಂದು ಅವರು ಹೇಳಿದರು. ತನ್ನನ್ನು ಭೇಟಿಯಾಗಲು ಇಲ್ಲಿಗೆ ಆಗಮಿಸಿದ ಸಾವಿರಾರು ಯುವ ಜನರಿಗೆ ಸೆಲ್ಯೂಟ್ ಮಾಡುತ್ತೇನೆ ಎಂದು ಓವೈಸಿ ಹೇಳಿದರು.