ಕೊಡಗು: ಜಗನ್ಮೋಹನ ನಾಟ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಯುವಜನೋತ್ಸವಕ್ಕೆ ಆಯ್ಕೆ
ಕೊಡಗು,ನ.21: ಪೊನ್ನಂಪೇಟೆಯಲ್ಲಿ ಇತ್ತೀಚೆಗೆ ನಡೆದ ಕೊಡಗು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ಕೆ.ಟಿ. ರಾಜೇಶ್ ಆಚಾರ್ಯರವರ ವಿದ್ಯಾರ್ಥಿಗಳಾದ ಕು.ನಮಿತಾ ಶೆಣೈ ಬಿ.ಎಂ., ಕೂಚುಪುಡಿ ಹಾಗೂ ಒಡಿಸ್ಸಿ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಕಥಕ್ ವಿಭಾಗದಲ್ಲಿ ಗಾನವಿ ರಮೇಶ್ರವರು ಮೊದಲ ಸ್ಥಾನವನ್ನು ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜಗನ್ಮೋಹನ ನಾಟ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಯುವಜನೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತುಮಕೂರಿನಲ್ಲಿ ನವೆಂಬರ್ 30ರಿಂದ ಡಿಸೆಂಬರ್ 2ರವರೆಗೆ ರಾಜ್ಯ ಮಟ್ಟದ ಯುವಜನೋತ್ಸವ ನಡೆಯಲಿದೆ.
ಕು.ನಮಿತಾ ಶೆಣೈ ವಿರಾಜಪೇಟೆಯ ಬಿ.ಎನ್. ಮನುಶೆಣೈ ಹಾಗೂ ಸುಮಾ ಶೆಣೈ ದಂಪತಿಗಳ ಪುತ್ರಿಯಾಗಿದ್ದು, ವಿರಾಜಪೇಟೆಯ ಸೆಂಟ್ ಏನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾರೆ.
ಗಾನವಿ ರಮೇಶ್ ವಿರಾಜಪೇಟೆಯ ದಿ.ರಮೇಶ್ ಹಾಗೂ ಪುಷ್ಪರವರ ಪುತ್ರಿಯಾಗಿದ್ದು, ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದಾರೆ.