ದಕ್ಷಿಣ ಗೆಲ್ಲಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಶಬರಿಮಲೆ ವ್ಯೂಹ !
![ದಕ್ಷಿಣ ಗೆಲ್ಲಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಶಬರಿಮಲೆ ವ್ಯೂಹ ! ದಕ್ಷಿಣ ಗೆಲ್ಲಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಶಬರಿಮಲೆ ವ್ಯೂಹ !](https://www.varthabharati.in/sites/default/files/images/articles/2018/11/22/164433.jpg)
ಶಬರಿಮಲೆ, ನ.22: ದಕ್ಷಿಣವನ್ನು ಗೆಲ್ಲಲು ಹೊರಟಿರುವ ಬಿಜೆಪಿಯು ಶಬರಿಮಲೆಯ ವಿವಾದವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಿದ ವಿಚಾರ ಬೆಳಕಿಗೆ ಬಂದಿದೆ.
ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರನ್ನು ತನ್ನತ್ತ ಸೆಳೆಯುವ ಉದ್ದೇಶಕ್ಕಾಗಿ ಶಬರಿಮಲೆ ಕಾಂತ್ರಿಗೆ ಮುಂದಾಗಿದೆ. ಇದೇ ಉದ್ದೇಶಕ್ಕಾಗಿ ಡಿ.10ರಂದು ಪಂಪಾದಲ್ಲಿ ಗುರುಸ್ವಾಮಿಗಳ ಸಮಾವೇಶವನ್ನು ನಡೆಲು ಬಿಜೆಪಿ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಗುರುಸ್ವಾಮಿಗಳನ್ನು ತನ್ನತ್ತ ಸೆಳೆದರೆ ಅಯ್ಯಪ್ಪ ಭಕ್ತರ ಮನ ಗೆಲ್ಲಲು ಸಾಧ್ಯ ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ನ.14ರಂದು ಮಂಗಳೂರಿನಲ್ಲಿ ನಡೆದ ಆರ್ ಎಸ್ ಎಸ್ನ ಬೈಠಕ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ದಕ್ಷಿಣ ಭಾರತದಲ್ಲಿ ಬಿಜೆಪಿ ಗೆಲ್ಲಲು ಯೋಜನೆ ರೂಪಿಸಿದ್ದಾರೆ. ಶಬರಿಮಲೆ ವಿಷಯವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯು ಉತ್ತರವನ್ನು ಗೆಲ್ಲಲು ಶ್ರೀರಾಮನ ಮತ್ತು ದಕ್ಷಿಣವನ್ನು ಗೆಲ್ಲಲು ಅಯ್ಯಪ್ಪನ ಮೊರೆ ಹೋಗಿದೆ. ಕೇರಳದ ಉಸ್ತುವಾರಿ ಮತ್ತುಮಂಗಳೂರಿನ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಶಬರಿಮಲೆಗೆ ತೆರಳಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆದರೆ ನಳೀನ್ ಕುಮಾರ್ ಕಟೀಲ್ ಶಬರಿಮಲೆಗೆ ಚಪ್ಪಲಿ ಧರಿಸಿ ತೆರಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ನಳೀನ್ ಕುಮಾರ್ ಕಟೀಲ್ ಶಬರಿಮಲೆಯ ಸಂಪ್ರದಾಯವನ್ನು ಉಲ್ಲಂಘಿಸಿರುವುದು ಅಯ್ಯಪ್ಪ ಭಕ್ತರನ್ನು ಕೆರಳಿಸಿದೆ .
ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಕೇರಳ ಸರಕಾರ ಈ ತೀರ್ಪಿನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದೆ ತೀರ್ಪನ್ನು ಅನುಷ್ಠಾನಗೊಳಿಸಲು ಹೆಜ್ಜೆ ಇರಿಸಿರುವ ವಿಚಾರವನ್ನು ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ಕೇರಳದಲ್ಲಿ 2 ಲೋಕಸಭೆ ಮತ್ತು 5 ವಿಧಾನ ಸಭಾ ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿಯ ಮೊದಲ ಯೋಜನೆಯಾಗಿದೆ ಎಂದು ತಿಳಿದು ಬಂದಿದೆ.