ಕಬ್ಬು ಬೆಳೆಯುವ ರೈತರ ಹಿತ ಕಾಪಾಡುವುದು ರಾಜ್ಯ ಸರಕಾರದ ಕರ್ತವ್ಯ: ಕುಮಾರಸ್ವಾಮಿ
ಸಮಸ್ಯೆ ಬಗೆಹರಿಸಲು ಸಕ್ಕರೆ ಕಾರ್ಖಾನೆಗಳ ಮಾಲಕರಿಗೆ ಮುಖ್ಯಮಂತ್ರಿ ತಾಕೀತು

ಬೆಂಗಳೂರು, ನ. 22: ‘ಯಾವುದೇ ಗೊಂದಲಕ್ಕೆ ಎಡೆ ಮಾಡದಂತೆ ರೈತರೊಂದಿಗೆ ಚರ್ಚಿಸಿ, ಸಮಸ್ಯೆಯನ್ನು ಬಗೆಹರಿಸಬೇಕು. ಈಗಾಗಲೇ ಕಟಾವಿಗೆ ಸಿದ್ದವಿರುವ ಕಬ್ಬನ್ನು ಅರೆಯಲು ರೈತರೊಂದಿಗೆ ಕ್ರಮಬದ್ಧ ಒಪ್ಪಂದ ಮಾಡಿಕೊಳ್ಳಬೇಕು’ ಎಂದು ಸಿಎಂ ಕುಮಾರಸ್ವಾಮಿ, ಸಕ್ಕರೆ ಕಾರ್ಖಾನೆಗಳ ಮಾಲಕರಿಗೆ ನಿರ್ದೇಶನ ನೀಡಿದ್ದಾರೆ.
ಗುರುವಾರ ಸಿಎಂ ಗೃಹ ಕಚೇರಿಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲಕರೊಂದಿಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಯುವ ರೈತರ ಹಿತ ಕಾಪಾಡುವುದು ರಾಜ್ಯ ಸರಕಾರದ ಕರ್ತವ್ಯ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಸಕ್ತ ಹಂಗಾಮಿನಲ್ಲಿ ಯಾವುದೇ ಗೊಂದಲವಾಗದಂತೆ ಎಚ್ಚರ ವಹಿಸಲು ಸಕ್ಕರೆ ಕಾರ್ಖಾನೆಗಳ ಮಾಲಕರಿಗೆ ಸೂಚಿಸಿದ ಕುಮಾರಸ್ವಾಮಿ, ಎಲ್ಲ ಸಕ್ಕರೆ ಕಾರ್ಖಾನೆ ಮಾಲಕರು ಕಡ್ಡಾಯವಾಗಿ ಎಫ್ಆರ್ಪಿ ದರ ಪಾವತಿಸಬೇಕು. ಇದಕ್ಕೆ ಸರಕಾರದ ಮಾರ್ಗಸೂಚಿಗಳಂತೆ ಪ್ರತಿ ರೈತನೊಂದಿಗೆ ಕಡ್ಡಾಯವಾಗಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಅನಂತರ ಕಬ್ಬು ನಿಯಂತ್ರಣ ಮಂಡಳಿಯ ನಿರ್ಣಯಗಳಂತೆ ಆದಾಯ ಹಂಚಿಕೆ ಸೂತ್ರ ಜಾರಿಗೊಳಿಸಬೇಕು. ಅಲ್ಲದೆ ರೈತರಿಗೆ ತೂಕ ಹಾಗೂ ಇಳುವರಿ ಪ್ರಮಾಣ ನಿಗದಿಯಲ್ಲಿ ಪಾರದರ್ಶಕತೆ ತರಲು ಸರಕಾರ ಹೊರಡಿಸುವ ಸುತ್ತೋಲೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಸ್ಥಿರತೆ ನಿಧಿ ಸ್ಥಾಪಿಸಲು ಮನವಿ: ದೇಶದಲ್ಲಿ ಪ್ರಸ್ತುತ 230ಲಕ್ಷ ಟನ್ ಸಕ್ಕರೆ ದಾಸ್ತಾನಿದೆ. ಹೆಚ್ಚುವರಿ ಉತ್ಪಾದನೆ ಸಮಸ್ಯೆಯನ್ನು ಸರಿಪಡಿಸಲು ಕೇಂದ್ರ ಸರಕಾರ ಕಬ್ಬಿನಿಂದ ಇಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೆ, ಎಫ್ಆರ್ಪಿ ಪಾವತಿ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸಿದ ಸಂದರ್ಭದಲ್ಲಿ ನೆರವಾಗಲು ಸಕ್ಕರೆ ಸ್ಥಿರತೆಯ ನಿಧಿ ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಕ್ಕರೆ ಕಾರ್ಖಾನೆ ಮಾಲಕರು ತಿಳಿಸಿದರು.
ಸಕ್ಕರೆ ಕಾರ್ಖಾನೆ ಮಾಲಕರು ರೈತರೊಂದಿಗೆ ವಿಶ್ವಾಸದ ಮೇಲೆ ಮಾಡಿಕೊಂಡಿರುವ ಒಪ್ಪಂದ. ಆದುದರಿಂದ ಈ ಮೊತ್ತ ಪಾವತಿಸುವುದು ನಿಮ್ಮ ಬದ್ಧತೆ. ಕಾರ್ಖಾನೆ ಮಾಲಕರು ವ್ಯವಹಾರದಲ್ಲಿ ಆಗುವ ಏರುಪೇರುಗಳನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ಆದರೆ, ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೆ ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ರೈತರ ಹಿತರಕ್ಷಣೆ ಸರಕಾರದ ಕರ್ತವ್ಯವಾಗಿರುವುದರಿಂದ ರೈತರಿಗೆ ಒಪ್ಪಿಗೆ ಸೂಚಿಸಿದಂತೆ ಸೂಕ್ತ ದರ ನೀಡುವಂತೆ ಸಿಎಂ ಕುಮಾರಸ್ವಾಮಿ ಇದೇ ವೇಳೆ ಕಾರ್ಖಾನೆ ಮಾಲಕರಿಗೆ ಸೂಚಿಸಿದರು.
2017-18ನೆ ಸಾಲಿನಲ್ಲಿ ಸಕ್ಕರೆ ದರ ಏಕಾಏಕಿ ಕುಸಿದಿದ್ದರಿಂದ ಹಾಗೂ ಇನ್ನಿತರ ಕಾರಣದಿಂದ ಸಮಸ್ಯೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ 2,900 ರೂ.ಸಾರಿಗೆ ಮತ್ತು ಕಟಾವು ವೆಚ್ಚ 650ರೂ. ಕಡಿತಗೊಳಿಸಿ, ಪ್ರತಿ ಟನ್ಗೆ 2,250 ರೂ.ದರದಲ್ಲಿ ರೈತರಿಗೆ ನೀಡಲು ಒಪ್ಪಿಕೊಂಡಿದ್ದೇವೆ ಎಂದು ಕಾರ್ಖಾನೆ ಮಾಲಕರು ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಕಾರ್ಖಾನೆಗಳು ಎಫ್ಆರ್ಪಿ ದರಕ್ಕಿಂತ ಹೆಚ್ಚುವರಿ ಹಣವನ್ನು ನೀಡಿವೆ. ಉಳಿದ 9 ಸಕ್ಕರೆ ಕಾರ್ಖಾನೆಗಳ ಮಾಲಕರು ಸಮ್ಮತಿಸಿದ ಮೊತ್ತ ನೀಡದಿದ್ದರೂ, ಎಫ್ಆರ್ಪಿ ದರಕ್ಕಿಂತ ಹೆಚ್ಚಿಗೆ ದರ ಪಾವತಿಸಿದ್ದೇವೆ ಎಂದು ಮಾಲಕರು ತಿಳಿಸಿದರು. ಆ ಹಿನ್ನೆಲೆಯಲ್ಲಿ ರೈತರೊಂದಿಗೆ ಚರ್ಚಿಸಿ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವಂತೆ ಸಿಎಂ ಸೂಚಿಸಿದರು.
ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಎಸ್.ಆರ್.ಪಾಟೀಲ, ಸತೀಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿ 31ಸಕ್ಕರೆ ಕಾರ್ಖಾನೆಗಳ ಮಾಲಕರು ಪಾಲ್ಗೊಂಡಿದ್ದರು.
‘ಪ್ರತಿಟನ್ ಕಬ್ಬಿಗೆ ಎಫ್ಆರ್ಪಿ ದರದ ಮೇಲೆ ಸರಕಾರ-150 ರೂ. ಹಾಗೂ ಸಕ್ಕರೆ ಕಾರ್ಖಾನೆ ಮಾಲಕರು-150 ರೂ. ಸೇರಿದಂತೆ ಒಟ್ಟು 300ರೂ. ಎಕ್ಸ್ ಫೀಲ್ಡ್ಗೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಬೆಳಗಾವಿ ಚಳಿಗಾಲದ ಅಧಿವೇಶನದ ಒಳಗೆ ಸಮಸ್ಯೆ ಬಗೆಹರಿಸಬೇಕೆಂದು ರಾಜ್ಯ ಸರಕಾರ ಗಡುವು ನೀಡಿದೆ’







