ಪಡುಬಿದ್ರಿ: ಟೋಲ್ ಆರಂಭಿಸಿದರೆ ನ. 27ರಂದು ಬಂದ್ ಎಚ್ಚರಿಕೆ
ಪಡುಬಿದ್ರಿ, ನ. 23: ನವಯುಗ ಟೋಲ್ ಪ್ಲಾಝಾಗಳಲ್ಲಿ ನ. 26ರಂದು ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಗೊಂಡಲ್ಲಿ ನ. 27ರಂದು ಉಭಯ ಜಿಲ್ಲೆಗಳ ವಿವಿಧ ಸಂಘಟನೆಗಳು, ವಿವಿಧ ಪಕ್ಷಗಳ ಬೆಂಬಲಗಳೊಂದಿಗೆ ನ. 27ರಂದು ಉಭಯ ಜಿಲ್ಲೆಯಲ್ಲೂ ಬಂದ್ಗೆ ಕರೆ ನೀಡುವುದಲ್ಲದೇ ಅನಿವಾರ್ಯವಾಗಿ ನವಯುಗ ಕಂಪೆನಿ ವಿರುದ್ಧ ತೀವ್ರ ಹೋರಾಟವನ್ನೂ ಪಕ್ಷಾತೀತವಾಗಿ ನಡೆಸಲಾಗುವುದೆಂದು ಉಭಯ ಜಿಲ್ಲಾ ಟೋಲ್ ವಿರುದ್ಧದ ಹೋರಾಟಗಾರರ ಸಮಿತಿಯ ಉಪಾಧ್ಯಕ್ಷ ಗುಲಾಂ ಮಹಮ್ಮದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ಇತರ ಸಮಸ್ಯೆಗಳತ್ತ ಗಮನ ಹರಿಸದೇ ಕೇವಲ ನವಯುಗ ಕಂಪೆನಿಯು ಜನರ ಸುಲಿಗೆ ಗೈಯ್ಯಲು ಬೇಕಾಗಿರುವ ಬೆಂಬಲವನ್ನು ನೀಡುತ್ತಿರುವುದು ಸರಿಯಲ್ಲ. ಜಿಲ್ಲೆಯ ಅಲ್ಲಲ್ಲಿ ಈಗಲೂ ನವಯುಗ ನಿರ್ಮಾಣ ಕಂಪೆನಿಯ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗಿಲ್ಲ. ಪಡುಬಿದ್ರಿಯಲ್ಲೂ ಮರಣ ಗುಂಡಿಯನ್ನು ತೋಡಿ ಕಣ್ಮುಚ್ಚಿ ಕೂತಿರುವ ನವಯುಗ ನಿರ್ಮಾಣ ಕಂಪೆನಿ ಅದೆಷ್ಟೋ ಹೆದ್ದಾರಿ ಸಾವಿಗೂ ಕಾರಣವೆನಿಸಿದೆ. ಜಿಲ್ಲೆಯಾದ್ಯಂತ ಅರೆಬರೆ ಕಾಮಗಾರಿಗಳನ್ನು ನಡೆಸಿರುವ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಹೆಜಮಾಡಿಯಲ್ಲಿ ಸ್ಕೈ ವಾಕ್ ಹಾಗೂ ಸರ್ವೀಸ್ ರಸ್ತೆಗಳನ್ನೂ ನಿರ್ಮಿಸಿ ಕೊಡುವ ಮಾತನ್ನೂ ತಪ್ಪಿರುವ ನಾಚಿಕೆಗೆಟ್ಟ ಕಂಪೆನಿಗೇ ಜಿಲ್ಲಾಡಳಿತವು ಬೆಂಬಲಿಸುತ್ತಿರುವುದು ಅಸಮಂಜಸ ಮತ್ತು ಹಾಸ್ಯಾಸ್ಪದವೆಂದು ಗುಲಾಂ ಮಹಮ್ಮದ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.