ಪೊಲೀಸ್ ಕಸ್ಟಡಿಯಲ್ಲಿ ಯುವಕನ ಸಾವು; ಆಗ್ರಾ ಠಾಣೆಯ ಎಲ್ಲ ಪೊಲೀಸರ ವಿರುದ್ಧ ಪ್ರಕರಣ ದಾಖಲು
![ಪೊಲೀಸ್ ಕಸ್ಟಡಿಯಲ್ಲಿ ಯುವಕನ ಸಾವು; ಆಗ್ರಾ ಠಾಣೆಯ ಎಲ್ಲ ಪೊಲೀಸರ ವಿರುದ್ಧ ಪ್ರಕರಣ ದಾಖಲು ಪೊಲೀಸ್ ಕಸ್ಟಡಿಯಲ್ಲಿ ಯುವಕನ ಸಾವು; ಆಗ್ರಾ ಠಾಣೆಯ ಎಲ್ಲ ಪೊಲೀಸರ ವಿರುದ್ಧ ಪ್ರಕರಣ ದಾಖಲು](https://www.varthabharati.in/sites/default/files/images/articles/2018/11/24/164760.jpg)
ಆಗ್ರಾ, ನ.24: ತಾಯಿಯ ಎದುರಿನಲ್ಲೇ ಮಗನಿಗೆ ದೌರ್ಜನ್ಯ ನಡೆಸಿ ಆತನ ಸಾವಿಗೆ ಕಾರಣವಾದ ಆರೋಪದಲ್ಲಿ ಆಗ್ರಾ ನಗರದ ಸಿಕಂದರ್ ಪೊಲೀಸ್ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ 32ರ ಹರೆಯದ ಹೇಮಂತ ಕುಮಾರ್ ಅಲಿಯಾಸ್ ರಾಜು ಗುಪ್ತಾ ಎಂಬಾತನನ್ನು ವಿಚಾರಣೆಗೆ ಕರೆ ತಂದಿದ್ದ ಪೊಲೀಸರು ಆತನ ತಾಯಿ ಎದುರಿನಲ್ಲೇ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ನೆರೆಮನೆಯಲ್ಲಿ ಬುಧವಾರ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಗೈಲಾನ ರಸ್ತೆಯ ಪಕ್ಕದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹೇಮಂತ್ ಕುಮಾರ್ ನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆ ತಂದಿದ್ದರು.
ಹೇಮಂತ ಕುಮಾರ್ ಅಲಿಯಾಸ್ ರಾಜು ಗುಪ್ತಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಮ್ಯಾನೇಜರ್ ಓಂ ಪ್ರಕಾಶ್ ಗುಪ್ತಾ ಎಂಬವರ ಪುತ್ರ. ಓಂ ಪ್ರಕಾಶ್ ಗುಪ್ತಾ 2001ರಲ್ಲಿ ನಿಧನರಾಗಿದ್ದರು. ಬಳಿಕ ತಾಯಿ ರೀನು ಲತಾ ಎಂಬವರ ಜೊತೆ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದನು.
ಅನ್ಶುಲ್ ಕೆಮಿಕಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಹೇಮಂತ ಕುಮಾರ್ ಮಾನಸಿಕವಾಗಿ ದುರ್ಬಲ ವ್ಯಕ್ತಿ. ಆತನ ವಿರುದ್ಧ ನೆರೆಮನೆಯ ವ್ಯಕ್ತಿ ಕಳ್ಳತನದ ಆರೋಪ ಹೊರಿಸಿದ್ದರು. ಅದರಂತೆ ಪೊಲೀಸರು ಆತನನ್ನು ಗುರುವಾರ ಬೆಳಗ್ಗೆ ವಿಚಾರಣೆಗೆ ಕರೆ ತಂದಿದ್ದರು. ತನ್ನ ಎದುರಿನಲ್ಲೇ ಪೊಲೀಸರು ಆತನ ಮೇಲೆ ದೌರ್ಜನ್ಯ ನಡೆಸಿದ್ದರು ಎಂದು ಮೃತನ ತಾಯಿ ರೀನು ಲತಾ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸಿಕಂದರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಿಷಿಪಾಲ್ ಮತ್ತು ಪಿಎಸ್ ಐಗಳಾದ ಅಂಜು ಸಿರೋಹ್ ಮತ್ತು ತೇಜ್ ವೀರ್ ಸಿಂಗ್ ಎಂಬವರನ್ನು ಅಮಾನತು ಮಾಡಲಾಗಿದೆ. ಹಾಗೂ ಪೊಲೀಸ್ ಠಾಣೆಯ ಎಲ್ಲ ಪೊಲೀಸರ ವಿರುದ್ಧ, ಹೇಮಂತ್ ಕುಮಾರ್ ನೆರೆಮನೆಯ ನಿವಾಸಿಗಳಾದ ಅನ್ಶುಲ್ ಪ್ರತಾಪ್ ಸಿಂಗ್ ಮತ್ತು ವಿವೇಕ್ ವಿರುದ್ಧ ಪ್ರಕರಣ ದಾಖಲಾಗಿದೆ.