ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿರುವ ಎಲ್ಲರ ಸುರಕ್ಷತೆಯ ಹೊಣೆ ಕೇಂದ್ರ ಸರಕಾರದ್ದು: ಸಿದ್ಧಾರ್ಥ್ ವರದರಾಜನ್
![ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿರುವ ಎಲ್ಲರ ಸುರಕ್ಷತೆಯ ಹೊಣೆ ಕೇಂದ್ರ ಸರಕಾರದ್ದು: ಸಿದ್ಧಾರ್ಥ್ ವರದರಾಜನ್ ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿರುವ ಎಲ್ಲರ ಸುರಕ್ಷತೆಯ ಹೊಣೆ ಕೇಂದ್ರ ಸರಕಾರದ್ದು: ಸಿದ್ಧಾರ್ಥ್ ವರದರಾಜನ್](https://www.varthabharati.in/sites/default/files/images/articles/2018/11/24/164762.jpg)
ಹೊಸದಿಲ್ಲಿ , ನ. 24: ಗೌರಿ ಲಂಕೇಶ್ ಕೊಲೆ ಆರೋಪಿಗಳ ಹಿಟ್ ಲಿಸ್ಟ್ ನಲ್ಲಿ ಇದ್ದ ಎಲ್ಲ 26 ಮಂದಿಯ ರಕ್ಷಣೆಯ ಹೊಣೆ ಕೇಂದ್ರ ಸರಕಾರದ್ದು ಎಂದು ಹಿರಿಯ ಪತ್ರಕರ್ತ, ದಿ ವೈರ್ ಸುದ್ದಿ ತಾಣದ ಸಂಪಾದಕ ಸಿದ್ಧಾರ್ಥ್ ವರದರಾಜನ್ ಹೇಳಿದ್ದಾರೆ.
ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿ ಸಿದ್ಧಾರ್ಥ್ ವರದರಾಜನ್ ಸಹಿತ 26 ಮಂದಿ ಪತ್ರಕರ್ತರು, ಚಿಂತಕರು ಇದ್ದರೆಂದು ವಿಶೇಷ ತನಿಖಾ ತಂಡ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿರುವುದರ ಬಗ್ಗೆ ವಾರ್ತಾಭಾರತಿ ಸಿದ್ಧಾರ್ಥ್ ವರದರಾಜನ್ ಅವರ ಪ್ರತಿಕ್ರಿಯೆ ಕೇಳಿದಾಗ ಅವರು ಈ ಹೇಳಿಕೆ ನೀಡಿದ್ದಾರೆ.
ಹಿಟ್ ಲಿಸ್ಟ್ ನಲ್ಲಿರುವ ಎಲ್ಲ 26 ಮಂದಿಯ ರಕ್ಷಣೆಯ ಹೊಣೆ ಕೇಂದ್ರ ಸರಕಾರ, ಸಂಬಂಧಿತ ರಾಜ್ಯ ಸರಕಾರಗಳು ಹಾಗು ಅವುಗಳ ಪೊಲೀಸ್ ಹಾಗು ಬೇಹು ಇಲಾಖೆಗಳ ಮೇಲಿದೆ. ಇಂತಹ ಮೂಲಭೂತವಾದಿ ಗುಂಪುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಪೊಲೀಸರ ಮೇಲಿದೆ. ಇಂತಹ ಸಂಘಟನೆಗಳಿಂದ ಯಾವ ರೀತಿಯ ಅಪಾಯವಿದೆ ಎಂದು ಸಂಬಂಧಪಟ್ಟವರಿಗೆ ಸರಿಯಾಗಿ ಮಾಹಿತಿ ನೀಡಿ ಅವರು ಅದಕ್ಕೆ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸಹಕರಿಸುವ ಕೆಲಸ ಪೊಲೀಸ್ ಇಲಾಖೆಯಿಂದ ಸರಿಯಾಗಿ ನಡೆಯುತ್ತಿಲ್ಲ ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ಕೆಲವು ತಿಂಗಳುಗಳ ಹಿಂದೆಯೇ ಈ ಬಗ್ಗೆ ನನಗೆ ಮಾಹಿತಿ ಇತ್ತು. ಎರಡು ತಿಂಗಳ ಹಿಂದೆ ದೆಹಲಿ ಪೋಲೀಸರ ವಿಶೇಷ ಘಟಕದವರು ನನ್ನನ್ನು ಭೇಟಿಯಾಗಿ ಸುರಕ್ಷತೆಗೆ ಪೊಲೀಸ್ ಸಿಬ್ಬಂದಿ ತೆಗೆದುಕೊಳ್ಳಲು ಹೇಳಿದರು. ಆದರೆ ಎಲ್ಲಿಂದ ಯಾವ ರೀತಿಯ ಅಪಾಯವಿದೆ ಎಂದು ಸಮರ್ಪಕ ಮಾಹಿತಿ ನನಗೆ ನೀಡದೆ ಇದ್ದರೆ ನಾನು ಸುರಕ್ಷತಾ ಸಿಬ್ಬಂದಿ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಿದ್ದೇನೆ ಎಂದು ಸಿದ್ಧಾರ್ಥ್ ವಾರ್ತಾಭಾರತಿಗೆ ತಿಳಿಸಿದರು.