ಕಸದ ಸಮಸ್ಯೆ ನಿವಾರಣೆಗೆ ಜನರ ಸಹಕಾರ ಅವಶ್ಯಕ: ಡಿಸಿಎಂ ಡಾ.ಜಿ.ಪರಮೇಶ್ವರ್
ಬಿಬಿಎಂಪಿ ಪೂರ್ವ ವಲಯ ‘ಜನಸ್ಪಂದನ’ ಕಾರ್ಯಕ್ರಮ
![ಕಸದ ಸಮಸ್ಯೆ ನಿವಾರಣೆಗೆ ಜನರ ಸಹಕಾರ ಅವಶ್ಯಕ: ಡಿಸಿಎಂ ಡಾ.ಜಿ.ಪರಮೇಶ್ವರ್ ಕಸದ ಸಮಸ್ಯೆ ನಿವಾರಣೆಗೆ ಜನರ ಸಹಕಾರ ಅವಶ್ಯಕ: ಡಿಸಿಎಂ ಡಾ.ಜಿ.ಪರಮೇಶ್ವರ್](/images/placeholder.jpg)
ಬೆಂಗಳೂರು, ನ.24: ನಗರದಲ್ಲಿ ಕಸ ಸಮಸ್ಯೆ ನಿವಾರಣೆ ಸೇರಿದಂತೆ ಸರಕಾರದ ಪ್ರತಿಯೊಂದು ನಿರ್ಧಾರಕ್ಕೆ ಸಾರ್ವಜನಿಕರ ಸಹಕಾರ ಇದ್ದರೆ ಮಾತ್ರ ಎಲ್ಲ ಸಮಸ್ಯೆ ಪರಿಹರಿಸಲು ಸಾಧ್ಯ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಶನಿವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಬಿಬಿಎಂಪಿ ಪೂರ್ವ ವಲಯದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು, ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸಲು ಸರಕಾರಕ್ಕೆ ಇಂತಹ ಒಂದು ವೇದಿಕೆಯ ಅಗತ್ಯವಿದೆ ಎಂದರು.
ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿದೆ. ಮೊದಲು ಇದ್ದ ನಗರಕ್ಕಿಂತ ನಾಲ್ಕು ಪಟ್ಟು ಜಾಸ್ತಿಯಾಗಿದೆ. ನಗರ ಬೆಳೆದಿದ್ದರೂ ರಸ್ತೆ ಬೆಳೆದಿಲ್ಲ. ಹೀಗಾಗಿ ಸಾಕಷ್ಟು ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಬೆಂಗಳೂರಿನಲ್ಲಿರುವ ಕೆಲ ಪ್ರದೇಶಕ್ಕೆ ಹೋದರೆ ವಾಪಸ್ ಬರಲು ಸಾಧ್ಯವಿಲ್ಲ, ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಕಸದ ಸಮಸ್ಯೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಯಾಗಿತ್ತು. ಸರಕಾರದಿಂದ ಈಗಾಗಲೇ ಸಾಕಷ್ಟು ಯೋಜನೆಗಳು ಜಾರಿಯಲ್ಲಿದೆ. ರಸ್ತೆ ಗುಡಿಸುವ 17 ಕ್ಲೀನಿಂಗ್ ಮಷಿನ್ಗಳ ಖರೀದಿಗೆ ಒಪ್ಪಿಗೆ ನೀಡಿದ್ದೇನೆ. ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ಬಾಕಿ ಹಣ 165 ಕೋಟಿ ರೂ.ನೀಡಲೂ ಒಪ್ಪಲಾಗಿದೆ. ಆದರೆ, ಮೂರು ತಿಂಗಳೊಳಗಾಗಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಬೇಕೆಂದು ಗಡುವು ನೀಡಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿಗೆ ನೀರಿನ ಸಮಸ್ಯೆ ತಲೆದೋರಿದೆ. ಭವಿಷ್ಯದಲ್ಲಿ ಬೆಂಗಳೂರು ನೀರಿನ ವಿಚಾರದಲ್ಲಿ ಕಷ್ಟಕ್ಕೆ ಸಿಲುಕಲಿದೆ. ಕಾವೇರಿಯ 5ನೇ ಹಂತದ ಯೋಜನೆ ತರಲಾಗುತ್ತಿದ್ದು, ಇದೇ ಕೊನೆಯ ಹಂತವಾಗಲಿದೆ. ಇದಕ್ಕೂ ಮೀರಿದ ಹಂತದಲ್ಲಿ ನೀರು ಪೂರೈಕೆ ಅಸಾಧ್ಯ. ಹೀಗಾಗಿ ಇದಕ್ಕೆ ಬೇರೆ ಮಾರ್ಗವನ್ನು ಈಗಿನಿಂದಲೇ ಹುಡುಕಿಕೊಳ್ಳಬೇಕು. ನೀರು ಮರುಬಳಕೆಯನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದು ಅವರು ಹೇಳಿದರು.
ಎತ್ತಿನಹೊಳೆ ಯೋಜನೆಯಡಿ 2.5 ಟಿಎಂಸಿ ಮಾತ್ರ ಬೆಂಗಳೂರಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನಗೊಳಿಸಿ, ಅಲ್ಲಿ ನೀರು ಶೇಖರಿಸಲು ತೀರ್ಮಾನಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಣ್ಣಿಡಲು 167 ಜಂಕ್ಷನ್ಗಳಲ್ಲಿ ಸಿಸಿ ಕ್ಯಾಮರಾ ಹಾಕಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದಿಂದ ಇನ್ನೂ 5 ಸಾವಿರ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಬೀದಿ ಬದಿ ವಿದ್ಯುತ್ ಕಂಬಗಳಿಗೆ ಎಲ್ಇಡಿ ಬಲ್ಬ್ ಹಾಕಲು ನಿರ್ಧರಿಸಲಾಗಿದ್ದು, ಇದರ ನಿರ್ವಹಣೆಗೆ ಕಂಟ್ರೋಲ್ ರೂಂ ತೆರೆಯಲಾಗುವುದು. ಇದಕ್ಕೆ ಸಚಿವ ಸಂಪುಟದಲ್ಲಿ ಶೀಘ್ರವೇ ಒಪ್ಪಿಗೆ ಪಡೆಯಲಾಗುವುದು. ಈ ಬಲ್ಬ್ ಹಾಕುವುದರಿಂದ ಶೇ.80ರಷ್ಟು ವಿದ್ಯುತ್ ಉಳಿತಾಯವಾಗಲಿದೆ ಎಂದು ಅವರು ಹೇಳಿದರು.
ಬಿಬಿಎಂಪಿ ವ್ಯಾಪ್ತಿ ಮೂಲ ಸಮಸ್ಯೆ ನಿವಾರಣೆಗೆ ಸರಕಾರದಿಂದ ಸಾಕಷ್ಟು ಅನುದಾನ ನೀಡಲಾಗಿದೆ. ತೆರಿಗೆ ಹಣ ಸೇರಿ ಮೂರು ವರ್ಷದಲ್ಲಿ 21 ಸಾವಿರ ಕೋಟಿ ಹಣ ವೆಚ್ಚ ಮಾಡಲಾಗುತ್ತದೆ. ಈ ಹಣ ಸಮರ್ಪಕ ಬಳಕೆಯಾಗುತ್ತಿದೆಯೇ ಎಂದು ಖುದ್ದು ನಾನೇ ಇಲಾಖೆಗಳ ಪರಿಶೀಲನೆ ಮಾಡುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಮೈಕ್ರೋಸಾಫ್ಟ್ದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಬಿಬಿಎಂಪಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಲಾಗುತ್ತಿದೆ. ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ತಡೆಯುವ ಸಂಬಂಧ ಈಗಾಗಲೇ ಕ್ರಮಕೈಗೊಂಡಿದ್ದೇನೆ. ಆದರೆ, ಅಲ್ಲಿರುವ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳ ನೀಡಿ ಅವರನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಟ್ರೇಡಿಂಗ್ ಲೈಸೆನ್ಸ್ ಇಲ್ಲದ ಅಂಗಡಿಗಳನ್ನು ಮುಚ್ಚಲು ಸೂಚಿಸಿದ್ದೇನೆ. ಇನ್ನು ಮುಂದೆ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದ ಅಂಗಡಿಗಳ ಟ್ರೇಡಿಂಗ್ ಲೈಸೆನ್ಸ್ ರದ್ದುಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಗರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಪರಮೇಶ್ವರ್ ಹೇಳಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಆಯುಕ್ತ ಮಂಜುನಾಥ್ ಪ್ರಸಾದ್, ಶಾಸಕ ಭೈರತಿ ಸುರೇಶ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರಮೇಶ್ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.