ಬಂಟ್ವಾಳ: ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ವತಿಯಿಂದ ಸೀರತ್ ಅಭಿಯಾನ

ಬಂಟ್ವಾಳ, ನ. 24: ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಶಾಖೆಯ ವತಿಯಿಂದ ಪ್ರವಾದಿ ಮುಹಮ್ಮದ್ (ಸ): ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಎಂಬ ರಾಜ್ಯವ್ಯಾಪಿ ಸೀರತ್ ಅಭಿಯಾನದ ಅಂಗವಾಗಿ ಎರಡು ದಿನಗಳ ಸೀರತ್ ಸಾರ್ವಜನಿಕ ಸಭೆಯ ಸಮಾರೋಪ ಮೆಲ್ಕಾರ್ ಜಂಕ್ಷನ್ನಲ್ಲಿ ಶನಿವಾರ ರಾತ್ರಿ ನಡೆಯಿತು.
ಸಾಂಧೀಪಿನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಈ ಸಮಾಜ ಯಾಂತ್ರಿಕ ಯುಗದಲ್ಲಿ ಬದುಕುತ್ತಿದ್ದು, ಇಲ್ಲಿ ಮಾನವೀಯ ಸಂಸ್ಕೃತಿ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ವಿಷಾದವ್ಯಕ್ತಪಡಿಸಿದರು.
ನಮ್ಮ ಮಕ್ಕಳಿಗೆ ಕೃಷಿ ಆಧಾರಿತವಾದ ಸಂಸ್ಕೃತಿಯನ್ನು ಕಲಿಸಿಕೊಡಬೇಕಾಗಿದೆ. ಮಾರುಕಟ್ಟೆ ಅವಲಂಬಿತ ಜೀವನದಿಂದ ದೂರ ಸರಿದು ಕೃಷಿ ಪ್ರದೇಶದತ್ತ ಮುಖ ಮಾಡಬೇಕಾಗಿದೆ ಎಂದು ಸಲಹೆ ನೀಡಿದ ಅವರು, ಧರ್ಮ ಆತ್ಮಶಕ್ತಿಯನ್ನು ತುಂಬುವ ಕೆಲಸ ಮಾಡುತ್ತಿದೆ. ಆದರೆ, ಯುವ ಜನತೆ ಕೆಟ್ಟ ಚಟಗಳಿಗೆ ಸಿಲುಕಿ, ತಮ್ಮ ಆತ್ಮಶಕ್ತಿಯ ಕೊರತೆಯಿಂದ ಆತ್ಮಹತ್ಯೆಯಂತಹ ದುಷ್ಕøತ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳಿಗೆ ಡಾ. ಅಬ್ದುಲ್ ಕಲಾಂ ಅವರ ದೇಶಭಕ್ತಿ ಹಾಗೂ ಅಬ್ರಹಂ ಲಿಂಕನ್ ಅವರ ಮಾತೃ ಪ್ರೇಮವನ್ನು ಕಲಿಸಕೊಡಬೇಕಾಗಿದೆ ಎಂದ ಅವರು, ತಮ್ಮ ಮನಸಿನಲ್ಲಿರುವ ಋಣಾತ್ಮಕ ಚಿಂತನೆಗಳಿಗೆ ಆಸ್ಪದ ನೀಡದೇ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಆದರ್ಶ ಜೀವನ ನಡೆಸಲು ಸಾಧ್ಯ ಎಂದರು.
ಪ್ರತಿಯೊಂದು ಧರ್ಮವು ಕಲಿಸುವುದು ಶಾಂತಿಯನ್ನ, ಹಿಂಸೆಯಿಂದ ಶಾಂತಿ ಸಿಗುವುದಿಲ್ಲ. ಶಾಂತಿಯುತ ಸಮಾಜಕ್ಕೆ ಪ್ರತಿಯೊಬ್ಬರು ಕೈಜೋಡಿಸ ಬೇಕಾಗಿದೆ ಎಂದರು. ಸದ್ಭಾವನಾ ವೇದಿಕೆ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಅವರು "ಕೆಡುಕು ಮುಕ್ತ ಸಮಾಜ ಕುರಾನಿನ ಬೆಳಕಿನಲ್ಲಿ" ಎಂಬ ವಿಷಯದಲ್ಲಿ ಮಾತನಾಡಿ, ಹಿಂದಿನ ಕಾಲದಲ್ಲಿ ಮದ್ಯವನ್ನು ಕದ್ದುಮುಚ್ಚಿ ಹಾಗೂ ನಾಚಿಕೆಯಿಂದ ಪಾನ ಮಾಡುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಮದ್ಯಪಾನ ಉದ್ಯೋಗವಾಗಿಯೂ ಹಾಗೂ ಫ್ಯಾಷನ್ ಆಗಿ ಬೆಳೆದು ನಿಂತಿರುವುದು ಖೇದಕರ. ಮದ್ಯ ವ್ಯಸನಗಳೆಲ್ಲವೂ ಪ್ರತಿಯೊಂದು ಕೆಡುಕಿನ ಕೀಲಿ ಕೈ ಆಗಿದೆ. ಸರಕಾರವು ಮದ್ಯಪಾನಕ್ಕೆ ಸಹಕಾರ ನೀಡುತ್ತಿದ್ದು, ಇದರಿಂದ ರಾಜ್ಯಕ್ಕೆ ಗರಿಷ್ಠ ಆದಾಯ ಲಭಿಸುತ್ತಿದೆ ಎಂದು ಹೇಳುತ್ತಿರುವುದು ವಿಷಾಧನೀಯ ಎಂದರು.
ಇಸ್ಲಾಂನಲ್ಲಿ ಅಮಲು ಭರಿಸುವ ಎಲ್ಲಾ ಪದಾರ್ಥಗಳನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಇತರ ಧರ್ಮದ ಮುಖಂಡರು ಜವಾಬ್ದಾರಿ ವಹಿಸಿ, ಮದ್ಯಪಾನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ. ಇದಕ್ಕೆ ಸರಕಾರವು ಸಹಕಾರವೂ ಅಗತ್ಯ ಎಂದು ಹೇಳಿದರು.
ದೇವಭಯ, ಪ್ರವಾದಿ ಸಂದೇಶ ಪರಿಪಾಲನೆ ಹಾಗೂ ಮರಣ ನಂತರದ ಜೀವನದ ನೆನಪು ಮಾಡಿದಾಗ ಆದರ್ಶ ಜೀವನ ನಡೆಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಯಹ್ಯಾ ತಂಙಳ್ ಮದನಿ, ಧಾರ್ಮಿಕ ಮುಂದಾಳು ಕೈಯೂರು ನಾರಾಯಣ ಭಟ್,
ಗಾಣಿಗ ಸೇವಾ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ರಘು ಸಪಲ್ಯ ಹಾಗೂ ಎಂ.ಎಚ್ ಇಕ್ಬಾಲ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ರಿಝ್ವಾನ್ ಅಝ್ಹರಿ ಕಿರಾಅತ್ ಪಠಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಪಾಣೆ ಮಂಗಳೂರು ಸ್ಥಾನೀಯ ಸಂಚಾಲಕ ಮುಖ್ತಾರ್ ಅಹ್ಮದ್ ಬೋಳಂಗಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಮುಸ್ತಫಾ ಎಂ.ಎಚ್. ವಂದಿಸಿದರು.
ಮಾಧ್ಯಮ ಕಾರ್ಯದರ್ಶಿ ಸಲೀಂ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿದರು.ಸಂಘದ ಕಾರ್ಯದರ್ಶಿ ಇಬ್ರಾಹಿಂ, ಇರ್ಷಾದ್ ವೇಣೂರು ಸಹಕರಿಸಿದರು.
ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ಶ್ರೇಷ್ಠ ಮಾರ್ಗ ದರ್ಶಕ ಎಂಬ ವಿಷಯದಲ್ಲಿ ಶಾಂತಿ ಪ್ರಕಾಶನ ಮಂಗಳೂರು ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಭಾಷಣ ಮಾಡಿದರು. ಹಿದಾಯ ಫೌಂಡೇಶನ್ ಮಂಗಳೂರು ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಶ್ರೀದೇವಿ ಬಯಲಾಟ ಸಮಿತಿ ಸದಸ್ಯ ದಾಮೋದರ್ ಮೆಲ್ಕಾರ್ ಉಪಸ್ಥಿತರಿದ್ದರು.