ಜಾಫರ್ ಶರೀಫ್ ನಿಧನಕ್ಕೆ ಸಿಎಂ ಸೇರಿ ಗಣ್ಯರ ಕಂಬನಿ
![ಜಾಫರ್ ಶರೀಫ್ ನಿಧನಕ್ಕೆ ಸಿಎಂ ಸೇರಿ ಗಣ್ಯರ ಕಂಬನಿ ಜಾಫರ್ ಶರೀಫ್ ನಿಧನಕ್ಕೆ ಸಿಎಂ ಸೇರಿ ಗಣ್ಯರ ಕಂಬನಿ](https://www.varthabharati.in/sites/default/files/images/articles/2018/11/25/164928.gif)
ಬೆಂಗಳೂರು, ನ. 25: ಹಿರಿಯ ರಾಜಕೀಯ ಮುತ್ಸದ್ಧಿ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಶರೀಫ್ ಕೊಡುಗೆ ಅನನ್ಯ: ‘ನಮ್ಮ ಕುಟುಂಬದೊಂದಿಗೆ ಜಾಫರ್ ಶರೀಫ್ ಅವರು ಆತ್ಮೀಯ ಸಂಬಂಧ ಹೊಂದಿದ್ದರು. ಕೇಂದ್ರ ಸಚಿವರಾಗಿ ಅವರು ನಾಡಿಗೆ, ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ರೈಲ್ವೆ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಅತ್ಯಂತ ಶ್ಲಾಘನೀಯ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಮರಿಸಿದ್ದಾರೆ.
‘ರೈಲ್ವೆ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಅತಿಹೆಚ್ಚು ಕೊಡುಗೆ ನೀಡಿದವರಲ್ಲಿ ಜಾಫರ್ ಶರೀಫರು ಅಗ್ರಗಣ್ಯರು. ರಾಷ್ಟ್ರಾದ್ಯಂತ ಮೀಟರ್ ಗೇಜ್ ಹಳಿಗಳನ್ನು ಬ್ರಾಡ್ಗೇಜ್ಗೆ ಪರಿವರ್ತಿಸಿ ಶ್ರೇಯಸ್ಸು ಇವರದ್ದು’ ಎಂದು ಕುಮಾರಸ್ವಾಮಿ ನೆನಪು ಮಾಡಿಕೊಂಡಿದ್ದಾರೆ.
'ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕರುಣಿಸಲಿ’ ಎಂದು ಕುಮಾರಸ್ವಾಮಿ ಪ್ರಕಟಣೆಯಲ್ಲಿ ಪ್ರಾರ್ಥಿಸಿದ್ದಾರೆ.
ಸ್ವಪ್ರಯತ್ನದಿಂದ ಬೆಳೆದ ವ್ಯಕ್ತಿ: ಹಿರಿಯ ರಾಜಕೀಯ ಹಿರಿಯ ಮುತ್ಸದಿ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಸ್ವಪ್ರಯತ್ನದಿಂದ ರಾಷ್ಟ್ರರಾಜಕಾರಣದ ಪ್ರಮುಖ ನಾಯಕರಾಗಿ ಶರೀಫ್ ಬೆಳೆದಿದ್ದರು ಎಂದು ಸ್ಮರಿಸಿದ್ದಾರೆ.
ರೈಲ್ವೆ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಜಾಫರ್ ಶರೀಫ್ ಅವರ ಕೊಡುಗೆ ಸದಾ ಸ್ಮರಣೀಯ. ಅವರ ಕುಟುಂಬಸ್ಥರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಅಭಿವೃದ್ಧಿಪರ ರಾಜಕಾರಣಿ: ‘ಜಾಫರ್ ಶರೀಫ್ ಅವರ ಅಗಲಿಕೆಯಿಂದ ಒಬ್ಬ ಹಿರಿಯ ಮುತ್ಸದ್ಧಿ ಮತ್ತು ಅಭಿವೃದ್ಧಿ ಪರ ರಾಜಕಾರಣಿಯನ್ನು ಕಳೆದುಕೊಂಡಿದ್ದು, ಅವರ ಸಾವು ನನಗೆ ಅತೀವು ನೋವು ತಂದಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ದೇಶದಾದ್ಯಂತ ಮೀಟರ್ ಗೇಜ್ ಹಳಿಗಳನ್ನು ಬ್ರಾಡ್ಗೇಜ್ಗೆ ಪರಿವರ್ತಿಸುವಲ್ಲಿ ಜಾಫರ್ ಶರೀಫ್ ಅವರ ಪಾತ್ರ ಮುಖ್ಯವಾದುದ್ದು. ಈ ಹಳಿಗಳ ಬದಲಾವಣೆ ಕಾರ್ಯದಿಂದ ದೇಶದ ಎಲ್ಲ ನಗರ ಮತ್ತು ಊರುಗಳು ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಯಿತು. ಇದರ ಜೊತೆಗೆ ಬೆಂಗಳೂರಿನಿಂದ ದೇಶದ ದೊಡ್ಡ ನಗರಗಳಿಗೆ ರೈಲುಗಳ ಸಂಚಾರ ಪ್ರಾರಂಭಿಸಿದ್ದ ಶರೀಫ್, ಬೆಂಗಳೂರು ನಗರಕ್ಕೆ ಅಚ್ಚು ಮತ್ತು ಗಾಲಿ ಕಾರ್ಖಾನೆ ತಂದದ್ದು ಒಂದು ದೊಡ್ಡ ಸಾಧನೆ. ಅವರ ಕುಟುಂಬಕ್ಕೆ ಜಾಫರ್ ಶರೀಫ್ ಅವರ ಸಾವಿನ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ’ ಎಂದು ಯಡಿಯೂರಪ್ಪ ಪ್ರಾರ್ಥಿಸಿದ್ದಾರೆ.
ಮತ್ತೊಂದು ಆಘಾತ: ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ಅವರ ಸಾವಿನ ಸುದ್ದಿಯಿಂದ ಹೊರ ಬರುವ ಮುನ್ನವೇ ಮತ್ತೊಂದು ಆಘಾತವಾಗಿದೆ. ಕೇಂದ್ರದ ಮಾಜಿ ಸಚಿವ ಜಾಫರ್ ಶರೀಫ್ ಅವರು ನಮ್ಮನ್ನು ಅಗಲಿದ ಸುದ್ದಿ ಕೇಳಿ ಆಘಾತವಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನ ಹಿರಿಯ ಚೇತನ, ರಾಜಕೀಯದಲ್ಲಿ ಹೆಚ್ಚು ಅನುಭವವಿದ್ದ ಜಾಫರ್ ಶರೀಫ್ ಅವರನ್ನು ನಮ್ಮನ್ನು ಅಗಲಿದ್ದು ದುಃಖ ತರಿಸಿದೆ. ಭಾರತೀಯ ರೈಲ್ವೆಗೆ ಆಧುನಿಕ ಸ್ಪರ್ಶ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು, ಕರ್ನಾಟಕಕ್ಕೆ ಹಲವು ಹೊಸ ರೈಲ್ವೆ ಯೋಜನೆಗಳನ್ನು ತಂದಿದ್ದರು ಎಂದು ಪರಮೇಶ್ವರ್ ಸ್ಮರಿಸಿದ್ದಾರೆ.
ಕೊಡುಗೆ ಅಭೂತಪೂರ್ವ: ಜಾಫರ್ ಶರೀಫ್ ಅವರ ರೈಲ್ವೆ ಸಚಿವರಾಗಿ ಆ ಇಲಾಖೆಯಲ್ಲಿ ತಂದ ಸುಧಾರಣೆ ಮತ್ತು ಕರ್ನಾಟಕಕ್ಕೆ ನೀಡಿದ ಕೊಡುಗೆ ಅಭೂತಪೂರ್ವ ಮತ್ತು ಕ್ರಾಂತಿಕಾರಕವಾದವು ಎಂದು ಸಚಿವ ಆರ್.ವಿ.ದೇಶಪಾಂಡೆ ನೆನಪು ಮಾಡಿಕೊಂಡಿದ್ದಾರೆ.
ಚಿತ್ರದುರ್ಗಕ್ಕೆ ರೈಲ್ವೆ ಯೋಜನೆ: ಮುರುಘ ಮಠದೊಂದಿಗೆ ನಿಕಟಸಂಪರ್ಕ ಇಟ್ಟುಕೊಂಡಿದ್ದ ಜಾಫರ್ ಶರೀಫ್ ಅವರಿಗೆ ಶ್ರೀಮಠದಿಂದ ಕಳೆದ ವರ್ಷವಷ್ಟೇ ‘ಮುರುಘಾಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. ಇವರು ಕೇಂದ್ರ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಚಿತ್ರದುರ್ಗ ಭಾಗಕ್ಕೆ ರೈಲ್ವೆ ಯೋಜನೆಯನ್ನು ಜಾರಿಗೊಳಿಸಿದ್ದರು ಎಂದು ಮುರುಘ ಮಠದ ಶಿವಮೂರ್ತಿ ಮುರುಘ ಶರಣರು ಸಂತಾಪ ಸೂಚಿಸಿದ್ದಾರೆ.