ಹಿರಿಯ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಷ್ ಇನ್ನಿಲ್ಲ

ಬೆಂಗಳೂರು, ನ. 24: ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ರನಟ ಅಂಬರೀಷ್(66), ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೇ 29, 1952 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಜನಿಸಿದ್ದ ಮಳವಳ್ಳಿ ಹುಚ್ಚೇಗೌಡ ಅಮರನಾಥ್, 1975 ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಕನ್ನಡ ಚಲನಚಿತ್ರ ಪ್ರವೇಶಿಸಿ ಅಂಬರೀಷ್ ಆಗಿದ್ದು, ಅಪಾರ ಜನಮನ್ನಣೆಗೆ ಪಾತ್ರವಾಗಿ ಜನಪ್ರಿಯ ನಟರಾಗಿದ್ದರು.
ಖ್ಯಾತ ಪಿಟೀಲು ವಾದಕರಾದ ಪಿಟೀಲು ಚೌಡಯ್ಯನವರ ಮೊಮ್ಮಗ, ಹುಚ್ಚೇಗೌಡ ಮತ್ತು ಪದ್ಮಮ್ಮನವರ ಮಗ ಅಂಬರೀಷ್, ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಎಂದೇ ಹೆಸರಾಗಿದ್ದರು. ಶಾಸಕ, ಸಂಸದ, ವಸತಿ ಸಚಿವ, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ಅಂಬರೀಷ್, ಕೊಡುಗೈ ದಾನಿ ಎಂದು ಹೆಸರು ಗಳಿಸಿದ್ದರು. ಮಂಡ್ಯದ ಜನರ ಕಣ್ಮಣಿಯಾಗಿ ಮಂಡ್ಯದ ಗಂಡು ಎಂದೇ ಹೆಸರಾಗಿದ್ದರು. ಅಂಬರೀಷ್ ನಿಧನದ ಸುದ್ದಿ ತಿಳಿದು ಆಸ್ಪತ್ರೆಗೆ ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ನಿಧನದ ಸುದ್ದಿಯಿಂದ ದಿಗ್ಭ್ರಾಂತರಾಗಿರುವ ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿ ಬರುತ್ತಿರುವುದರಿಂದ ನಗರದ ವಿಕ್ರಂ ಆಸ್ಪತ್ರೆಯ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಎಂದೇ ಪ್ರಸಿದ್ಧರಾಗಿದ್ದ ಅಂಬರೀಷ್ ಮೊದಲು ಬಣ್ಣ ಹಚ್ಚಿದ್ದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿ. ಆ ಚಿತ್ರದಲ್ಲಿ ಅವರ ‘ಜಲೀಲ’ ಪಾತ್ರವನ್ನು ಇಂದಿಗೂ ಜನರು ಇಷ್ಟಪಡುತ್ತಾರೆ.
ನಂತರದ ದಿನಗಳಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಅಂಬರೀಷ್ ನಾಗಕನ್ಯೆ, ಮಾಗಿಯ ಕನಸು, ಮುಯ್ಯಿಗೆ ಮುಯ್ಯಿ, ಕಿಲಾಡಿ ಜೋಡಿ, ಪ್ರೇಮಲೋಕ, ಏಳು ಸುತ್ತಿನ ಕೋಟೆ, ಆಪರೇಷನ್ ಅಂತ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.
ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರುವಾಗಿದ್ದ ಹುಚ್ಚೇಗೌಡ ಅಮರ್ ನಾಥ್ ಮಂಡ್ಯ ಜಿಲೆಯ ಮದ್ದೂರು ತಾ ದೊಡರಸಿನಕೆರೆ ಗ್ರಾಮದವರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಓದಿ ಬೆಳೆದ ಅಂಬರೀಷ್, ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ನಾಗರಹಾವು ಸಿನಿಮಾದ ಮೂಲಕ ಖಳ ನಾಯಕನಾಗಿ ಬೆಳ್ಳಿ ತೆರೆ ಪ್ರವೇಶಿಸಿ ಜನ ಮಾನಸ ಗೆದ್ದವರು. ಇದಕ್ಕೆ ತಾತ ಪಿಟೀಲು ಚೌಡಯ್ಯನವರಿಂದ ಬಳವಳಿಯಾಗಿ ಬಂದ ಕಲೆಯು ಕಾರಣವಾಗಿತ್ತು. ನಂತರ ರಂಗನಾಯಕಿ, ಮಸಣದ ಹೂ, ಶುಭ ಮಂಗಳ ಸಿನಿಮಾದ ಮೂಲಕ ನಾಯಕ ನಟರಾಗಿಯೂ ಖ್ಯಾತರಾದ ಅಂಬಿ ಕಲಿಯುಗ ಕರ್ಣ ಎಂದು ರಾಜ್ಯದ್ಯಾಂತ ಮನೆಮಾತಾದರು.
ಕನ್ನಡ ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಷ್ ಅವರಿಗೆ 2013 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ರಾಜಕೀಯ ಕ್ಷೇತ್ರ:
ಕನ್ನಡ ಚಿತ್ರರಂಗದಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ರೆಬೆಲ್ ಸ್ಟಾರ್ ಅಂಬರೀಷ್ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡು ರಾಜಕೀಯ ರಂಗವನ್ನು ಪ್ರವೇಶ ಮಾಡಿದರು. ಇವರು ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ, ರಾಜಕೀಯ ಕ್ಷೇತ್ರದಲ್ಲೂ ಸಹ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂಬರೀಷ್ ಅವರು ಸಂಸದರು, ರಾಜ್ಯ ಸಚಿವರಾಗಿ ಆಯ್ಕೆ ಆಗಿದ್ದರು.
1998-99: 12ನೇ ಲೋಕಸಭಾ ಸದಸ್ಯರು.
1999-04: 13ನೇ ಲೋಕಸಭಾ ಸದಸ್ಯರು.
2004-09: 14ನೇ ಲೋಕಸಭಾ ಸದಸ್ಯರು.
2006-08: ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು.
2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
2012: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು.
2013 ರ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ರಾಜ್ಯ ವಸತಿ ಸಚಿವರಾದರು.
ಲಭಿಸಿದ ಪ್ರಶಸ್ತಿಗಳು:
ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ಯುತ್ತಮ ನಟ - 1982.
ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ಯುತ್ತಮ ಸಹಾಯ ನಟ - ಮಸಣದ ಹೂವು(1985-86)
ಫಿಲ್ಮ್ ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಒಲವಿನ ಉಡುಗೊರೆ.
ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ - 2005.
ಜೀವಮಾನ ಫಿಲ್ಮ್ ಫೇರ್ ಪ್ರಶಸ್ತಿ - 2009.
ನಂದಿ ಪ್ರಶಸ್ತಿ( ಆಂದ್ರ ಸರ್ಕಾರ) - 2009.
ಟಿವಿ9 ಸ್ಯಾಂಡಲ್ ವುಡ್ ಸ್ಟಾರ್ ಪ್ರಶಸ್ತಿ - 2012.
ವಿಷ್ಣುವರ್ದನ್ ಪ್ರಶಸ್ತಿ (ಕರ್ನಾಟಕ ಸರ್ಕಾರ) - 2011.
ಗೌರವ ಡಾಕ್ಟರೇಟ್ (ಕರ್ನಾಟಕ ವಿವಿ) - 2013.







