ಅಂಬರೀಶ್ ಅಂತ್ಯಕ್ರಿಯೆ ಹಿನ್ನಲೆ: ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು, ನ.25: ಕೇಂದ್ರದ ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ಅವರ ಅಂತ್ಯಕ್ರಿಯೆ ಇಲ್ಲಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುವ ಹಿನ್ನಲೆ, ಈ ವ್ಯಾಪ್ತಿಯ ಸಂಚಾರ ಮಾರ್ಗಗಳನ್ನು ಸೋಮವಾರ(ನ.26) ಮಾತ್ರಕ್ಕೆ ಬದಲಾವಣೆ ಮಾಡಲಾಗಿದೆ.
ನಗರದ ಹೊರವರ್ತುಲ ರಸ್ತೆ ಸುಮ್ಮನಹಳ್ಳಿ ಜಂಕ್ಷನ್ನಿಂದ ಗೊರಗುಂಟೆಪಾಳ್ಯ ಕಡೆಗೆ ಹಾದು ಹೋಗುವ ಬಾರೀ ವಾಹನಗಳ ಸಂಚಾರ ಮಾರ್ಗ ಬದಲಾಯಿ ಸಲಾಗಿದೆ.ಈ ವ್ಯಾಪ್ತಿಯ ವಾಹನ ಸವಾರರು, ಮಾಗಡಿ ರಸ್ತೆ ಕಾಮಾಕ್ಷಿ ಪಾಳ್ಯ- ಹೌಸಿಂಗ್ ಬೋರ್ಡ್- ಮಾಗಡಿ ರಸ್ತೆ ಟೋಲ್ ಗೇಟ್ ಮೂಲಕ ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಸಂಚಾರಿಸಬಹುದು.
ತುಮಕೂರು ರಸ್ತೆ ಗೊರಗುಂಟೆಪಾಳ್ಯ ಜಂಕ್ಷನ್ ನಿಂದ ಸುಮ್ಮನಳ್ಳಿ ಕಡೆಗೆ ಹಾದು ಹೋಗುವವರು, ಎಂಇಐ ಜಂಕ್ಷನ್-ಆರ್ಎಂಸಿ ಯಾರ್ಡ್-ಮಾರಪ್ಪನಪಾಳ್ಯ- ರಸ್ತೆಗೆ ಹಾದು ಹೋಗಬಹುದಾಗಿದೆ.
ಅದೇ ರೀತಿ, ಸ್ಯಾಂಕಿ ರಸ್ತೆ-ಮಾರಮ್ಮ ವೃತ್ತ-ಯಶವಂತಪುರ ಮೂಲಕ ತುಮಕೂರು ರಸ್ತೆ ಕಡೆಗೆ ಹಾದು ಹೋಗುವ ಸವಾರರು, ಮೇಕ್ರಿ ವೃತ್ತ-ಎಡತಿರುವು ಸಿವಿ ರಾಮನ್ ರಸ್ತೆ-ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಬಲತಿರುವು- ಬಿಎಎಲ್ ರಸ್ತೆ-ಕುವೆಂಪು ವೃತ್ತ ಎಡತಿರುವು ಪಡೆದು ಬಿಇಎಲ್ ವೃತ್ತ, ಬಲತಿರುವು-ಗಂಗಮ್ಮ ವೃತ್ತ ಎಡ ತಿರುವು ಪಡೆದು ತುಮಕೂರು ರಸ್ತೆ ಸೇರಬಹುದು ಎಂದು ಪ್ರಕಟನೆ ತಿಳಿಸಿದೆ.







