"ಮೃತ ತಂದೆಯನ್ನೇಕೆ ರಾಜಕೀಯಕ್ಕೆ ಎಳೆಯುತ್ತೀರಿ?"
![ಮೃತ ತಂದೆಯನ್ನೇಕೆ ರಾಜಕೀಯಕ್ಕೆ ಎಳೆಯುತ್ತೀರಿ? ಮೃತ ತಂದೆಯನ್ನೇಕೆ ರಾಜಕೀಯಕ್ಕೆ ಎಳೆಯುತ್ತೀರಿ?](https://www.varthabharati.in/sites/default/files/images/articles/2018/11/26/165029.gif)
ಹೊಸದಿಲ್ಲಿ, ನ.26: ವಿವಾದಾತ್ಮಕ ಹೇಳಿಕೆಗಳಿಂದಾಗಿ ಕಾಂಗ್ರೆಸ್ ಮುಖಂಡರಾದ ರಾಜ್ಬಬ್ಬರ್ ಮತ್ತು ಸಿ.ಪಿ.ಜೋಶಿ ಮುಖಭಂಗ ಅನುಭವಿಸಿರುವ ನಡುವೆಯೇ, "ಪ್ರಧಾನಿ ಮೋದಿಯವರ ತಂದೆಯ ಹೆಸರು ಏನೆಂದು ಯಾರಿಗೂ ಗೊತ್ತಿಲ್ಲ" ಎಂಬ ಹೇಳಿಕೆ ನೀಡಿದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ವಿಲಾಸ್ ಮುಟ್ಟೇಂವಾರ್ ಕೂಡಾ ಅದೇ ಹಾದಿಯಲ್ಲಿ ಮುಂದುವರಿದಿದ್ದಾರೆ.
ಕಾಂಗ್ರೆಸ್ ಮುಖಂಡನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, "ಕಾಂಗ್ರೆಸ್ ಪಕ್ಷ ನನ್ನ ತಂದೆ, ತಾಯಿಯನ್ನೂ ಚುನಾವಣಾ ರಾಜಕೀಯಕ್ಕೆ ಎಳೆಯುತ್ತಿದೆ" ಎಂದು ಆಪಾದಿಸಿದ್ದಾರೆ. ಜತೆಗೆ ರಾಹುಲ್ ಗಾಂಧಿ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಮೋದಿ, "ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ನನ್ನ ತಾಯಿಯನ್ನು ರಾಜಕೀಯಕ್ಕೆ ಎಳೆದಿದ್ದರು. ಅವರಿಗೆ ರಾಜನೀತಿಯ 'ಆರ್' ಕೂಡ ಗೊತ್ತಿಲ್ಲ. ಇದು ಬೇಕಿತ್ತೇ? ಇದರ ವಿರುದ್ಧ ವ್ಯಕ್ತವಾದ ಆಕ್ರೋಶವೇ ಕಾಂಗ್ರೆಸ್ಗೆ ಪಾಠ ಕಲಿಸುತ್ತದೆ ಎಂದುಕೊಂಡಿದ್ದೆ. ಆದರೆ ಈಗ ನನ್ನ ಮೃತ ತಂದೆಯನ್ನು ಎಳೆದು ತಂದಿದ್ದಾರೆ. ಅವರು 30 ವರ್ಷಗಳ ಹಿಂದಯೇ ಗತಿಸಿದ್ದಾರೆ. ನನ್ನ ಕುಟುಂಬದ ಯಾರಿಗೂ ರಾಜಕೀಯದ ಜತೆ ಸಂಬಂಧವಿಲ್ಲ. ನನ್ನ ತಂದೆಯನ್ನೇಕೆ ಎಳೆದು ತರುತ್ತೀರಿ" ಎಂದು ವಿದಿಶಾದಲ್ಲಿ ಪ್ರಚಾರದಲ್ಲಿ ತೊಡಗಿರುವ ಅವರು ಪ್ರಶ್ನಿಸಿದರು.
ರಾಹುಲ್ ಅವರ ಹೆಸರು ಪ್ರಸ್ತಾಪಿಸದೇ, ಇಂಥ ಕೆಟ್ಟ ಭಾಷೆಯನ್ನು ಪಕ್ಷದ ಹಿರಿಯ ಮುಖಂಡರು ಉತ್ತೇಜಿಸುತ್ತಿದ್ದಾರೆ ಎಂದು ದೂರಿದರು.