ಸಕಲ ಸರಕಾರಿ ಗೌರವಗಳೊಂದಿಗೆ ಜಾಫರ್ ಶರೀಫ್ ಅಂತ್ಯಕ್ರಿಯೆ
![ಸಕಲ ಸರಕಾರಿ ಗೌರವಗಳೊಂದಿಗೆ ಜಾಫರ್ ಶರೀಫ್ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಜಾಫರ್ ಶರೀಫ್ ಅಂತ್ಯಕ್ರಿಯೆ](https://www.varthabharati.in/h-upload/uid/public://filefield_paths/26BNP (17).jpg.jpg)
ಬೆಂಗಳೂರು, ನ.26: ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್(85) ಅವರ ಅಂತ್ಯಕ್ರಿಯೆಯನ್ನು ನಗರದ ಖುದ್ದೂಸ್ ಸಾಹೇಬ್ ಖಬರಸ್ಥಾನದಲ್ಲಿ ಸೋಮವಾರ ಮಧ್ಯಾಹ್ನ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಕೋಲ್ಸ್ಪಾರ್ಕ್ನಲ್ಲಿರುವ ಜಾಫರ್ ಶರೀಫ್ ನಿವಾಸದಿಂದ ಅವರ ಪಾರ್ಥಿವ ಶರೀರವನ್ನು ನಗರದ ಕ್ವೀನ್ಸ್ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ತರಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮೇಯರ್ ಗಂಗಾಂಬಿಕೆ, ಸಚಿವ ಯು.ಟಿ.ಖಾದರ್, ಶಾಸಕ ಎನ್.ಎ.ಹಾರೀಸ್, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಇನ್ನಿತರ ಮುಖಂಡರು ಗೌರವ ಸಲ್ಲಿಸಿದರು.
ಆನಂತರ, ಪಾರ್ಥಿವ ಶರೀರವನ್ನು ಬೆನ್ಸನ್ಟೌನ್ನಲ್ಲಿರುವ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಪೊಲೀಸ್ ಬ್ಯಾಂಡ್ ವತಿಯಿಂದ ಮೂರು ಸುತ್ತು ಕುಶಾಲ ತೋಪು ಹಾರಿಸಿ ಜಾಫರ್ ಶರೀಫ್ ಅವರಿಗೆ ಸರಕಾರಿ ಗೌರವ ಸಲ್ಲಿಸಲಾಯಿತು.
ಬಳಿಕ ಸಾವಿರಾರು ಜನರ ಸಮ್ಮುಖದಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಜನಾಝ ನಮಾಝ್ ನೆರವೇರಿಸಿದರು. ಜುಮಾ ಮಸ್ಜಿದ್ನ ಖತೀಬ್ ಮೌಲಾನ ಅಬ್ದುಲ್ ಖಾದರ್ ಶಾ ವಾಜಿದ್ ದುಆ ಮಾಡಿದರು.
ಮಾಜಿ ಕೇಂದ್ರ ಸಚಿವ ಡಾ.ಕೆ.ರಹ್ಮಾನ್ ಖಾನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವರಾದ ರೋಷನ್ ಬೇಗ್, ಎಸ್.ಆರ್.ಪಾಟೀಲ್, ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಸೀರ್ ಹುಸೇನ್, ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಇಬ್ರಾಹೀಂ, ನಸೀರ್ ಅಹ್ಮದ್, ರಿಝ್ವಾನ್ ಅರ್ಶದ್ ಸೇರಿದಂತೆ ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಜನಾಝ ನಮಾಝ್ ಬಳಿಕ ಜಾಫರ್ ಶರೀಫ್ ಅವರ ಪಾರ್ಥಿವ ಶರೀರವನ್ನು ಜಯಮಹಲ್ನ ನಂದಿದುರ್ಗ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಖಬರಸ್ಥಾನ್ಗೆ ತಂದು ಕುಟುಂಬ ಸದಸ್ಯರು, ರಾಜಕೀಯ ಕ್ಷೇತ್ರದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು, ಹಿತೈಷಿಗಳ ಸಮ್ಮುಖದಲ್ಲಿ ಸಂಪ್ರದಾಯದಂತೆ ದಫನ್ ಮಾಡಲಾಯಿತು.
ಜಾಫರ್ ಶರೀಫ್ ನಿಧನದಿಂದಾಗಿ ಕೇವಲ ಕರ್ನಾಟಕವಷ್ಟೇ ಅಲ್ಲ, ಇಡೀ ದೇಶಕ್ಕೆ ನಷ್ಟವಾಗಿದೆ. ದೇಶದೆಲ್ಲೆಡೆ ಅಲ್ಪಸಂಖ್ಯಾತರ ಪರವಾದ ಧ್ವನಿಯಾಗಿದ್ದರು. ಆದರೆ, ಇಂದು ಆ ಧ್ವನಿ ನಮ್ಮೊಂದಿಗಿಲ್ಲ. ಇಂತಹ ನಾಯಕರು ಸಮುದಾಯದ ಸೇವೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬರಲಿ.
-ನಸೀರ್ ಅಹ್ಮದ್, ವಿಧಾನಪರಿಷತ್ ಸದಸ್ಯ
ಜಾಫರ್ ಶರೀಫ್ ತಮ್ಮ ಇಡೀ ಜೀವನ ಸಮುದಾಯದ ಸೇವೆಗಾಗಿ ಮೀಸಲಿಟ್ಟಿದ್ದರು. ಸಂಸದ, ಕೇಂದ್ರ ಸಚಿವರಾಗಿ ರಾಜ್ಯ ಹಾಗೂ ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರ ಸೇವೆಗಳು ಸದಾ ಸ್ಮರಣೀಯವಾಗಿರುತ್ತದೆ. ಅವರ ನೆನಪಿನಲ್ಲಿ ಯಾವುದಾದರೂ ಒಂದು ಯೋಜನೆ ಜಾರಿಗೆ ತರುವಂತೆ ಸರಕಾರದ ಜೊತೆ ಚರ್ಚೆ ಮಾಡಲಾಗುವುದು. ರಾಜಕೀಯ ಭಿನ್ನಾಭಿಪ್ರಾಯ ಹಾಗೂ ಮಾನವೀಯ ಸಂಬಂಧಗಳು ಬೇರೆ ಬೇರೆ. ಅವರ ಅಗಲಿಕೆಯಿಂದ ರಾಜ್ಯ ಹಾಗೂ ದೇಶಕ್ಕೆ ದೊಡ್ಡ ನಷ್ಟವಾಗಿದೆ.
-ಡಾ.ಕೆ.ರಹ್ಮಾನ್ ಖಾನ್, ಮಾಜಿ ಕೇಂದ್ರ ಸಚಿವ
ಜಾಫರ್ ಶರೀಫ್ ಅವರ ಹೆಸರನ್ನು ರಾಜ್ಯದಲ್ಲಿ ಚಿರಸ್ಥಾಯಿಗೊಳಿಸಲು ಒಂದು ವಿಶೇಷವಾದ ಕಾರ್ಯಕ್ರಮ ಅಥವಾ ಯೋಜನೆಯನ್ನು ಜಾರಿಗೆ ತರುವಂತೆ ರಾಜ್ಯ ಸರಕಾರ ಹಾಗೂ ವಿಶೇಷವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮನವಿ ಮಾಡುತ್ತೇನೆ. ಸಮುದಾಯಕ್ಕೆ ಸೇವೆ ಸಲ್ಲಿಸಿದವರ ಹೆಸರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ.
-ಸಿ.ಎಂ.ಇಬ್ರಾಹೀಂ, ವಿಧಾನಪರಿಷತ್ ಸದಸ್ಯ