ಸರಕಾರಿ ನೌಕರರ ಪಿಂಚಣಿ ಷೇರು ಮಾರುಕಟ್ಟೆಗೆ: ಪ್ರೊ.ಬರಗೂರು ರಾಮಚಂದ್ರಪ್ಪ
ದಿನಗೂಲಿ ನೌಕರರ ಸಮಸ್ಯೆ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ
![ಸರಕಾರಿ ನೌಕರರ ಪಿಂಚಣಿ ಷೇರು ಮಾರುಕಟ್ಟೆಗೆ: ಪ್ರೊ.ಬರಗೂರು ರಾಮಚಂದ್ರಪ್ಪ ಸರಕಾರಿ ನೌಕರರ ಪಿಂಚಣಿ ಷೇರು ಮಾರುಕಟ್ಟೆಗೆ: ಪ್ರೊ.ಬರಗೂರು ರಾಮಚಂದ್ರಪ್ಪ](https://www.varthabharati.in/sites/default/files/images/articles/2018/11/26/165093.jpg)
ಬೆಂಗಳೂರು, ನ.26: ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ಸರಕಾರಿ ನೌಕರರ ಪಿಂಚಣಿ ಹಣವನ್ನು ಕೇಂದ್ರ ಸರಕಾರ ಷೇರು ಮಾರುಕಟ್ಟೆಗೆ ಹಾಕುವ ಮೂಲಕ ನೂತನ ಪಿಂಚಣಿ ಯೋಜನೆ(ಎನ್ಪಿಎಸ್) ಜಾರಿಗೆ ಮುಂದಾಗಿದ್ದಾರೆ ಎಂದು ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ಸೋಮವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ ಆಯೋಜಿಸಿದ್ದ, ಎನ್ಪಿಎಸ್ ರದ್ದತಿ ಮತ್ತು ಹೊರಗುತ್ತಿಗೆ/ದಿನಗೂಲಿ ನೌಕರರ ಸಮಸ್ಯೆ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ನೌಕರರ ವೇತನದಿಂದ ಕಡಿತಗೊಂಡ, ಶೇ.10ರಷ್ಟು ಪಿಂಚಣಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಇಡಲಾಗುತ್ತಿದ್ದು, ಸರಕಾರ ಇದಕ್ಕೆ ಸಮಾನವಾದ ಹಣವನ್ನು ಫಂಡ್ ಮ್ಯಾನೇಜರ್ಗಳ ಮೂಲಕ ವಿವಿಧ ಖಾಸಗಿ ಹಣಕಾಸಿನ ಸಮಸ್ಯೆಗಳಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ನೀಡಲಾಗುತ್ತದೆ. ಹೀಗಾಗಿ, ಅದನ್ನು ನಾವು ವಿರೋಧ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಅದರಿಂದ ಬಂದ ಲಾಭದಲ್ಲಿ 30-35 ವರ್ಷಗಳ ನಂತರ ಈ ಹಣವನ್ನು ಉಪಯೋಗಿಸಿದ ಕಂಪನಿಗಳು ನೌಕರರಿಗೆ ಪಿಂಚಣಿಯನ್ನು ಮಂಜೂರು ಮಾಡುವುದು ಸರಿಯಲ್ಲ ಹಾಗೂ ಖಾಯಂ ನೌಕರರು, ಹೊರ ಗುತ್ತಿಗೆ ನೌಕರರ ಬಗ್ಗೆ ಅಂತಃಕರಣ ಇಟ್ಟುಕೊಳ್ಳಬೇಕು. ಉದ್ಯೋಗ ಸಮಸ್ಯೆ ಬಗೆಹರಿಸುವ ಜೊತೆಗೆ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಲು ಹೋರಾಟ ಮುಂದುವರೆಸಬೇಕಿದೆ ಎಂದು ಬರಗೂರು ರಾಮಚಂದ್ರಪ್ಪಹೇಳಿದರು.
ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಮಾತನಾಡಿ, ಆರನೇ ವೇತನ ಆಯೋಗದ 2ನೇ ವರದಿಯಲ್ಲಿನ ನೌಕರ ವಿರೋಧಿ ಶಿಫಾರಸ್ಸುಗಳನ್ನು ಕೈಬಿಡಬೇಕು. ಜೊತೆಗೆ, ದಿನಗೂಲಿ ಹೊರಗುತ್ತಿಗೆ ನೌಕರರನ್ನು ನಿಯಮಾನುಸಾರ ಖಾಯಂಗೊಳಿಸುವುದು ಮತ್ತು ಇನ್ನು ಮುಂದೆ ರಾಜ್ಯ ಮತ್ತು ಕೇಂದ್ರ ಸರಕಾರದ ಇಲಾಖೆಗಳಲ್ಲಿ ಹೊರಗುತ್ತಿಗೆ ಉದ್ಯೋಗಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್.ರೇಣುಕಾರಾಧ್ಯ, ರಾಷ್ಟ್ರೀಯ ಉಪಾಧ್ಯಕ್ಷ ಡಿ.ಶಿವಶಂಕರ್, ಕಾರ್ಯಾಧ್ಯಕ್ಷ ಎನ್.ಇ.ನಟರಾಜ್ ಸೇರಿದಂತೆ ಪ್ರಮುಖರಿದ್ದರು.
ದೇಶದಲ್ಲಿ ಆರ್ಥಿಕ ಭ್ರಷ್ಟತೆ ಮಾತ್ರವಲ್ಲ, ಬೌದ್ಧಿಕ ಭ್ರಷ್ಟತೆಯೂ ಇದ್ದು, ಈ ವಲಯದ ಭ್ರಷ್ಟತೆಯಲ್ಲಿ ಯಾವುದು ಸತ್ಯ, ಯಾವುದು ಅಸತ್ಯ ಎಂದು ನೋಡದೆ ಬೌದ್ಧಿಕ ಭ್ರಷ್ಟತೆ ತಾಂಡವವಾಡುತ್ತಿದೆ.
-ಬರೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ