ಬೆಂಗಳೂರು: ದಂಡ ವಿಧಿಸುತ್ತಿದ್ದರೂ ಕಡಿಮೆಯಾಗದ ಕಸದ ಸಮಸ್ಯೆ
ಬೆಂಗಳೂರು, ನ.27: ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಿ, ಕೇಸು ದಾಖಲಿಸುತ್ತಿದ್ದರೂ ಫುಟ್ಪಾತ್, ರಸ್ತೆ ಬದಿಗಳಲ್ಲಿ ಕಸದ ರಾಶಿ ಕಡಿಮೆಯಾಗುತ್ತಿಲ್ಲ.
ಬೀದಿಯಲ್ಲಿ ಕಸ ಹಾಕಬೇಡಿ ಎಂದು ಗೋಡೆಗಳ ಮೇಲೆ ಬರೆಯಲಾಗಿದೆ. ಕಸದ ಗಾಡಿಗೆ ತ್ಯಾಜ್ಯ ಹಾಕುವಂತೆ ಮನವಿ ಮಾಡಲಾಗುತ್ತಿದೆ. ಬಿಬಿಎಂಪಿ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲವರು ರಾತ್ರಿ ವೇಳೆ ಹಾಗೂ ಮುಂಜಾನೆ ವೇಳೆಯಲ್ಲಿ ಕವರ್ಗಳಲ್ಲಿ ತಂದು ಬಿಸಾಡಿ ಹೋಗುತ್ತಿದ್ದಾರೆ.
ಹೈಕೋರ್ಟ್ ಎಚ್ಚರಿಕೆ ನೀಡಿದ ಬಳಿಕ ಬಿಬಿಎಂಪಿಯು ಕಸ ಎಸೆಯುವವರ ಮೇಲೆ ನಿಗಾ ಇಡಲು ಮಾರ್ಷಲ್ಗಳನ್ನೂ ನೇಮಕ ಮಾಡಿದೆ. ರಸ್ತೆಗಳಲ್ಲಿ ಬಿದ್ದಿದ್ದ ಕಸವನ್ನು ತೆರವು ಮಾಡಿ, ರಂಗೋಲಿ ಅಭಿಯಾನ ಮಾಡಿದೆ. ಆದರೆ, ಪಾಲಿಕೆಯಿಂದ ಸಂಪೂರ್ಣವಾಗಿ ರಸ್ತೆ ಬದಿಗಳಲ್ಲಿ ಕಸ ಎಸೆಯುವುದನ್ನು ತಡೆಯಲು ಸಾಧ್ಯವಾಗಿಲ್ಲ. ಮಾರ್ಷಲ್ಗಳು ಕಾರು, ಬೈಕ್ಗಳ ಮೂಲಕ ಬಂದು ರಸ್ತೆ ಬದಿ, ಚರಂಡಿ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಕಸ ಎಸೆಯುವವರನ್ನು ಹಿಡಿದು ದಂಡ ವಿಧಿಸಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ 2364 ವಾಹನಗಳು ಹಾಗೂ 2802 ಸಾರ್ವಜನಿಕರಿಗೆ ದಂಡ ವಿಧಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ 8 ವಲಯಗಳಿಗೆ ತಲಾ ಒಂದೊಂದು ಪ್ರಹರಿ ವಾಹನಗಳನ್ನು ನಿಯೋಜಿಸಲಾಗಿದ್ದು, ಪ್ರತಿ ವಾಹನದಲ್ಲಿ 3-4 ಮಂದಿ ಮಾರ್ಷಲ್ಗಳು ಹಗಲು ರಾತ್ರಿ ಗಸ್ತು ತಿರುಗಿಸುವ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ರಮವಾಗಿ ಕಸ ಎಸೆಯುವವರು ಕಂಡ ಕೂಡಲೇ ದಂಡ ವಿಧಿಸುತ್ತಿದ್ದಾರೆ.
ತಾಳ್ಮೆ ಇಲ್ಲ: ಬಿಬಿಎಂಪಿ ಕಡೆಯಿಂದ ಬರುವ ತ್ಯಾಜ್ಯ ವಾಹನಗಳಿಗೆ ಕಸ ಹಾಕುವ ವ್ಯವಧಾನ ಜನರಿಗೆ ಇಲ್ಲ. ಕತ್ತಲು ಕವಿದ ಬಳಿಕ ಕಸ ತುಂಬಿದ ಕವರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುತ್ತಾರೆ. ಇದಲ್ಲದೆ, ಕಟ್ಟಡದ ಅವಶೇಷ, ಕೋಳಿ ಮಾಂಸ ತ್ಯಾಜ್ಯವನ್ನು ಟ್ರಾಕ್ಟರ್, ಲಾರಿಗಳಲ್ಲಿ ತುಂಬಿಕೊಂಡು ಬಂದು ರಾಜಕಾಲುವೆ, ಖಾಲಿ ನಿವೇಶನಗಳಲ್ಲಿ ಸುರಿಯುತ್ತಾರೆ. ಇವರಿಗೆಲ್ಲರಿಗೂ ಮಾರ್ಷಲ್ಗಳು ಬಿಸಿ ಮುಟ್ಟಿಸುತ್ತಿದ್ದಾರೆ.