ಹನೂರು: ನಾಗಮಣಿ ಎಂದು ವಂಚಿಸಿ ಮಾರಾಟಕ್ಕೆ ಯತ್ನ; ಆರೋಪಿ ಬಂಧನ

ಹನೂರು,ನ.27: ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಣಿ ತೋರಿಸಿ ನಾಗಮಣಿ ಎಂದು ವಂಚಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಜಿಲ್ಲಾ ಅಪರಾಧ ಪೋಲಿಸ್ ಠಾಣೆಯ ಪೋಲಿಸರು ಬಂಧಿಸಿದ್ದಾರೆ.
ತಾಲೂಕಿನ ಎಂ.ಜಿ ದೊಡ್ಡಿ ಗ್ರಾಮದ ಹಳ್ಳಿಮುತ್ತು (50) ಬಂಧಿತ ಆರೋಪಿ. ಇವರು ಹನೂರು ಸಮೀಪದ ಆಂಜನೇಯಸ್ವಾಮಿ ದೇಗುಲದ ಬಳಿ ಅವರೆಕಾಳು ಗಾತ್ರದ ಕಿತ್ತಳೆ ಬಣ್ಣದಿಂದ ಕೂಡಿದ ಮಣಿಯನ್ನು ಅಲ್ಲಿದ್ದ ಕೆಲವರಿಗೆ ತೋರಿಸಿ, ನಾಗರಹಾವಿನ ಹೆಡೆಯಲ್ಲಿ ಈ ನಾಗಮಣಿ ದೊರಕಿದ್ದು, ಇದನ್ನು ಹೊಂದಿರುವವರಿಗೆ ಅದೃಷ್ಟ ಹಾಗೂ ಕೆಲಸ ಕಾರ್ಯಗಳು ಕೈಗೂಡಲಿದೆ. ಇದರ ಬೆಲೆ 2 ಲಕ್ಷ ರೂ. ಎಂದು ತಿಳಿಸುತ್ತಿದ್ದರು.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ಪತ್ತೆದಳದ ಪೋಲಿಸ್ ಇನ್ಸ್ಪೆಕ್ಟರ್ ರವೀಂದ್ರ ಹಾಗೂ ಸಿಬ್ಬಂದಿಗಳ ತಂಡ ಅವರು ಖಾಸಗಿ ಕಾರಿನಲ್ಲಿ ಆರೋಪಿಯ ಬಳಿ ತೆರಳಿದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ನಾಗಮಣಿ ಎಂದು ವಂಚಿಸುತ್ತಿರುವುದು ದೃಢಪಟ್ಟಿದೆ. ಬಳಿಕ ಆರೋಪಿಯನ್ನು ಹನೂರು ಪೋಲಿಸ್ ಠಾಣೆಗೆ ಒಪ್ಪಿಸಲಾಯಿತು. ಈ ಸಂಬಂಧ ಹನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಎಎಸೈ ಜಯಸುಂದ್ರ, ಮಹದೇವಪ್ಪ, ಮುಖ್ಯಪೇದೆಗಳಾದ ಸಿದ್ದಮಲ್ಲಶೆಟ್ಟಿ, ಸ್ವಾಮಿ ಭಾಗವಹಿಸಿದ್ದರು.







