ಮಂಗಳೂರು ವಿವಿಯಲ್ಲಿ ಕನಕ ಜಯಂತಿ ಪ್ರಯುಕ್ತ ಕನಕ ತತ್ವಚಿಂತನ ಕಾರ್ಯಕ್ರಮ

ಕೊಣಾಜೆ, ನ. 28: ಭಕ್ತಿ ಪರಂಪರೆ ಒಂದು ಒಳಗೊಳ್ಳುವಿಕೆಯ ಪರಂಪರೆಯಾಗಿದೆ. ಶ್ರೇಣೀಕೃತ ಸಮಾಜದ ವ್ಯವಸ್ಥೆಯನ್ನು ಖಂಡಿಸಿ ಅದನ್ನು ದೂರಗೊಳಿಸುವ ಪ್ರಯತ್ನಗಳು ಭಕ್ತಿಪರಂಪರೆಯ ಕಾಲಘಟ್ಟದಲ್ಲಿ ನಡೆದಿತ್ತು ಎಂದು ಖ್ಯಾತ ಚಿಂತಕ ಪ್ರೊ. ಬಸವರಾಜ ಕಲ್ಗುಡಿ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕನಕ ಜಯಂತಿ ಪ್ರಯುಕ್ತ ಬುಧವಾರ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಕನಕ ತತ್ವಚಿಂತನ ಮತ್ತು ಕನಕಗಂಗೋತ್ರಿ ಕಾರ್ಯಕ್ರಮದಲ್ಲಿ `ಭಕ್ತಿಪರಂಪರೆಯ ಲೋಕಯಾನ ಮತ್ತು ಕನಕದಾಸರು: ಸಮಕಾಲೀನ ಸಂವಾದ' ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಭಕ್ತಿ ಪರಂಪರೆಯ ಒಳಗೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿಯನ್ನು ಯಾವುದೇ ಜಾತಿ ಧರ್ಮದಲ್ಲಿ ನೋಡದೆ ಆತನನ್ನು ಅಂತಸತ್ವದ ಮೂಲಕ ವ್ಯಕ್ತಿಯನ್ನಾಗಿ ನೋಡುವ ದೃಷ್ಟಿಕೋನವನ್ನು ಇಟ್ಟುಕೊಂಡಿತ್ತು. ಪರಂಪರಾಗತ ಶೇಣೀಕೃತ ಸಮಾಜ ವ್ಯವಸ್ಥೆಯನ್ನು ವಿರೋದಿಸಿದ ಮೊದಲ ಪರಂಪರೆ ಅದು ಭಕ್ತಿಪರಂಪರೆಯಾಗಿದೆ. ಭಕ್ತಿ ಪರಂಪರೆಯಲ್ಲಿ ಕನಕದಾಸರಿಗೆ ಬಹು ದೊಡ್ಡ ಹೆಸರು ಇದೆ. ಕನಕ ಭಕ್ತ ಮಾತ್ರವಲ್ಲ ಒಂದು ದೊಡ್ಡ ಕವಿ ಹೃದಯವುಳ್ಳ ದಾರ್ಶನಿಕನೂ ಹೌದು. ಸಾಮಾಜಿಕ ವ್ಯವಸ್ಥೆಯ ಬಗ್ಗೆ ಚಿಂತನೆ, ಧೋರಣೆಗಳನನ್ನು ಕನಕನ ಕೀರ್ತನೆಗಳಲ್ಲಿಯೇ ನಾವು ಕಾಣಬಹುದು. ಕೇವಲ ಸೀಮಿತ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಕೃಷ್ಣನನ್ನು ನಾಲ್ಕುಗೋಡೆಗಳ ನಡುವಿನಿಂದ ಹೊರೆಗೆ ತಂದು ಇಡೀ ಲೋಕಕ್ಕೆ ಪರಿಚಯಿಸುದರೊಂದಿಗೆ ಸಮಾನತೆಯ ಸಮಾಜ ನಿರ್ಮಾಣದ ಕಾರ್ಯದಲ್ಲಿ ಕನಕನ ಪಾತ್ರವು ಮಹತ್ವಪೂರ್ಣವಾದುದು ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿರು ಕನಕದಾಸ ಸಂಶೋಧನಾ ಕೇಂದ್ರವು ಹತ್ತು ಹಲವಾರು ಕಾರ್ಯಕ್ರಮಗಳೊಂದಿಗೆ ಕನಕನ ಚಿಂತನೆಗಳನ್ನು ಜನರಿಗೆ ತಲುಪಿಸುವ ಉತ್ತಮ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿ.ಎಲ್.ಧರ್ಮ ಅವರು, ಕನಕನಲ್ಲಿ ನಾವು ಸಾಮಾಜಿಕ ಸಮಾನತೆ, ಪ್ರಜಾಪ್ರಭುತ್ವದ ನೆಲೆ ಹಾಗೂ ಬಹುತ್ವದ ಚಿಂತನೆಯನ್ನು ಕಾಣಲು ಸಾಧ್ಯವಿದೆ. ಆದರೆ ಕನಕನ ತತ್ವ ಚಿಂತನೆಗಳು ಇಂದು ಕಾರ್ಯರೂಪಕ್ಕೆ ಬರುತ್ತಿಲ್ಲ. ನಮ್ಮೊಳಗಿರುವ ಅಹಂನ್ನು ನಾವು ದೂರಗೊಳಿದಿದ್ದರೆ ಕನಕನ ಚಿಂತನೆಗಳನ್ನು ಕೂಡಾ ನಾವು ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಈಶ್ವರ ಪಿ ಅವರು ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನಕ ಚಿಂತನ ಕೃತಿಗಳ ಎರಡನೇ ಆವೃತ್ತಿಯನ್ನು ಬಿಡುಗೊಡೆಸಲಾಯಿತು. ಹಾಗೈ 2017-18ನೇ ಸಾಲಿನ ಕನಕ ಪುರಸ್ಕಾರವನ್ನು ಸಾಧಕರಿಗೆ ನೀಡಿ ಗೌರವಿಸಲಾಯಿತು.
ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರಾದ ಪ್ರೊ.ಬಿ.ಶಿವರಾಮ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಶೋಧನಾ ಸಹಾಯಕ ರಮೇಶ್ ಆರ್ ವಂದಿಸಿದರು. ವಿದ್ಯಾರ್ಥಿನಿ ಅರ್ಪಿತ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕನಕಗಂಗೋತ್ರಿ ಕೀರ್ತನ ಗಾಯನ ಕಾರ್ಯಕ್ರಮವು ನಡೆಯಿತು.







