ಸಾಮಾಜಿಕ-ಆರ್ಥಿಕ ಅಸಮಾನತೆ ಹೋಗಲಾಡಿಸಲು ಶಿಕ್ಷಣವೇ ಮಂತ್ರ: ಪ್ರಣವ್ ಮುಖರ್ಜಿ
![ಸಾಮಾಜಿಕ-ಆರ್ಥಿಕ ಅಸಮಾನತೆ ಹೋಗಲಾಡಿಸಲು ಶಿಕ್ಷಣವೇ ಮಂತ್ರ: ಪ್ರಣವ್ ಮುಖರ್ಜಿ ಸಾಮಾಜಿಕ-ಆರ್ಥಿಕ ಅಸಮಾನತೆ ಹೋಗಲಾಡಿಸಲು ಶಿಕ್ಷಣವೇ ಮಂತ್ರ: ಪ್ರಣವ್ ಮುಖರ್ಜಿ](/images/placeholder.jpg)
ಬೆಂಗಳೂರು, ನ.28: ಸಾಮಾಜಿಕ ಮತ್ತು ವೃತ್ತಿಪರ ಸ್ಥಾನಮಾನದಲ್ಲಿ ಕೆಳಮಟ್ಟದಲ್ಲಿದ್ದವರಿಗೆ ಮೇಲೇರಲು ಶಿಕ್ಷಣ ಏಣಿಯಿದ್ದಂತೆ. ನಮ್ಮ ಆರ್ಥಿಕ ಸ್ಥಿತಿಯನ್ನು ಬದಲಾಯಿಸಲು ಮತ್ತು ಸಮಾಜದಲ್ಲಿ ಅಸಮಾನತೆಗೆ ಕಾರಣವಾದ ಅಂತರವನ್ನು ಹೋಗಲಾಡಿಸಲು ಶಿಕ್ಷಣವೊಂದೇ ಮಂತ್ರ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟರು.
ಬುಧವಾರ ನಗರದ ವರ್ತೂರಿನಲ್ಲಿ ಇರುವ ಗ್ರೀನ್ವುಡ್ ಹೈ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಆಯೋಜಿಸಲಾಗಿದ್ದ ಶಿಕ್ಷಣದ ಮೌಲ್ಯಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಶೈಕ್ಷಣಿಕ ಸಂಸ್ಥೆಗಳು, ದೇಶದ ಭವಿಷ್ಯದ ದೃಷ್ಟಿಯಿಂದ ಅತೀ ಮುಖ್ಯವಾಗಿ ಮೌಲ್ಯಗಳನ್ನು ತಿಳಿಸುವ ಮೂಲಕ ಯುವಜನತೆಯನ್ನು ಬೆಳೆಸುವ ಹೊಣೆಗಾರಿಕೆಯನ್ನು ಹೊಂದಿವೆ, ಇವುಗಳಲ್ಲಿ ನಮ್ಮ ವಿಭಿನ್ನ ಸಂಸ್ಕೃತಿಗಳನ್ನು ಒಂದೆಡೆ ತರುವ ಸಮಾನತೆ, ಸಹಾನುಭೂತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳೂ ಸೇರಿವೆ ಎಂದು ಅವರು ಹೇಳಿದರು.
ಭಾರತದ ಉನ್ನತ ಆರ್ಥಿಕಾಭಿವೃದ್ಧಿಯ ತಂತ್ರಗಾರಿಕೆ ಬಡತನವನ್ನು ಮೀರಿ ಬೆಳೆಯುವುದು ಮತ್ತು ಎಲ್ಲರ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳುವುದನ್ನು ಗುರಿಯನ್ನಾಗಿಸಿಕೊಂಡಿದೆ. ನಾವು ಆರ್ಥಿಕಾಭಿವೃದ್ಧಿಯನ್ನು ನಮ್ಮ ಜನರಿಗೆ ವಿಶೇಷವಾಗಿ ಸಾಮಾಜಿಕ-ಆರ್ಥಿಕ ಪಿರಾಮಿಡ್ನ ಬುಡದಲ್ಲಿರುವವರಿಗೆ ಪ್ರಸ್ತುತವನ್ನಾಗಿಸ ಬೇಕಾಗಿದೆ ಎಂದು ಪ್ರಣವ್ ಮುಖರ್ಜಿ ಕರೆ ನೀಡಿದರು. ಪ್ರಜಾಪ್ರಭುತ್ವ ರಾಜಕೀಯದ ಉನ್ನತ ಗುರಿಯಾಗಿ ನ್ಯಾಯದ ಹಂಚಿಕೆಯನ್ನು ಕೇವಲ ಉತ್ತಮ ಶೈಕ್ಷಣಿಕ ವ್ಯವಸ್ಥೆಯಿಂದ ಮಾತ್ರ ಸಾಧಿಸಬಹುದು. ರಾಜಕೀಯಕ್ಕೆ ಸೇರುವ ಮೊದಲು ಶಿಕ್ಷಕನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಬಗ್ಗೆ ತಿಳಿಸಿದ ಅವರು, ದೃಢ ವ್ಯಕ್ತಿತ್ವವನ್ನು ಬೆಳೆಸಲು ಸಾಧ್ಯವಾಗದಿದ್ದರೆ, ಅಂತಹ ಸಾಹಿತ್ಯಿಕ ಶಿಕ್ಷಣಕ್ಕೆ ಯಾವುದೇ ಬೆಲೆಯಿಲ್ಲ ಎಂಬ ಮಹಾತ್ಮ ಗಾಂಧೀಜಿಯವರ ಮಾತನ್ನು ಉಲ್ಲೇಖಿಸಿದರು. ಜೀವನದಲ್ಲಿ ನೀವು ಬೆಳೆದಂತೆ, ಶಿಕ್ಷಣಕ್ಕೆ ಮತ್ತು ಕಲಿಕೆಗೆ ಕೊನೆಯಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ವ್ಯಾಪ್ತಿಯನ್ನು ವಿಶಾಲವಾಗಿಸಿಕೊಳ್ಳಿ ಮತ್ತು ಹೊಸ ಎತ್ತರವನ್ನು ತಲುಪಿ ನೀವು ಪ್ರಾಮಾಣಿಕವಾಗಿ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡಿದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು ಮತ್ತು ಒಳ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಗ್ರೀನ್ವುಡ್ ಹೈ ಟ್ರಸ್ಟ್ ಮಂಡಳಿಯ ಅಧ್ಯಕ್ಷ ಬಿಜಾಯ್ ಕುಮಾರ್ ಅಗರ್ವಾಲ್ ಮಾತನಾಡಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಮ್ಮ ಮೌಲ್ಯಯುತ ಸಮಯವನ್ನು ನಮ್ಮ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರ ಮೂಲಕ ಕಳೆದಿರುವುದು ನಮ್ಮ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಗ್ರೀನ್ವುಡ್ ಹೈ ಶಾಲೆಯ ಪ್ರಾಂಶುಪಾಲ ಅಲೋಷಿಯಸ್ ಡಿ’ಮೆಲ್ಲೊ ಸೇಂದಂತೆ ಇನ್ನಿತರರು ಉಪಸ್ಥಿತರಿದ್ದರು.