ರಾಹುಲ್ ದತ್ತಾತ್ರೇಯ ಗೋತ್ರವನ್ನು ಪಾರಂಪರ್ಯವಾಗಿ ಪಡೆದಿಲ್ಲ
ಕೇಂದ್ರ ಸಚಿವ ಹರ್ಷವರ್ಧನ್ ಹೊಸ ವ್ಯಾಖ್ಯಾನ
ಹೊಸದಿಲ್ಲಿ, ನ.29: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಗೋತ್ರದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಹೊಸ ವ್ಯಾಖ್ಯಾನ ಸೇರಿಸಿರುವ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್, ರಾಹುಲ್ ಖಂಡಿತಾ ದತ್ತಾತ್ರೇಯ ಗೋತ್ರದವರಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಜವಾಹರಲಾಲ್ ನೆಹರೂ ಅವರ ಗೋತ್ರ ದತ್ತಾತ್ರೇಯ. ಅವರ ಪುತ್ರರೂ ಈ ಗೋತ್ರಕ್ಕೆ ಸೇರುತ್ತಾರೆ. ಆದರೆ ಇಂದಿರಾಗಾಂಧಿ ತನ್ನ ತಂದೆಯ ಗೋತ್ರವನ್ನು ಪಾರಂಪರ್ಯವಾಗಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪಾರ್ಸಿ (ಫಿರೋಝ್ ಗಾಂಧಿ)ಯ ಮಗನಾಗಿರುವ ರಾಜೀವ್ ಗಾಂಧಿ ದತ್ತಾತ್ರೇಯ ಗೋತ್ರದವರಲ್ಲ ಎಂದು ಸಚಿವರು ಹೇಳಿದ್ದಾರೆ.
ರಾಹುಲ್ ಗಾಂಧಿ ಕುಟುಂಬದ ಗೋತ್ರದ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ಯಾರೊಬ್ಬರೂ ಹುಟ್ಟಿನಿಂದಲೇ ಬ್ರಾಹ್ಮಣನಾಗಿರುವುದಿಲ್ಲ ಎಂದು ವೇದಗಳಲ್ಲೇ ಹೇಳಿದೆ. ಆದರೆ ನಿಮ್ಮ ಮೂಲವನ್ನೇ ಸುಳ್ಳಿನ ಆಧಾರದಲ್ಲಿ ಕಟ್ಟಿದರೆ, ಆಗ ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತೀರಿ. ಜನತೆ ನಿಮ್ಮ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ಗಮನಿಸುತ್ತಾರೆ, ನಿಮ್ಮ ಜಾತಿ ಅಥವಾ ಧರ್ಮವನ್ನಲ್ಲ ಎಂದು ಹರ್ಷವರ್ಧನ್ ಹೇಳಿದ್ದಾರೆ.
ಸಚಿವರ ಈ ಹೇಳಿಕೆ ಟ್ವಿಟರ್ನಲ್ಲಿ ಭಾರೀ ಟ್ರೋಲ್ ಆಗಿದೆ.