ನಿಪಾಹ್ ಬಗ್ಗೆ ಎಚ್ಚರ ವಹಿಸುವಂತೆ ಕೇರಳ ಸರಕಾರದಿಂದ ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸುತ್ತೋಲೆ
![ನಿಪಾಹ್ ಬಗ್ಗೆ ಎಚ್ಚರ ವಹಿಸುವಂತೆ ಕೇರಳ ಸರಕಾರದಿಂದ ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸುತ್ತೋಲೆ ನಿಪಾಹ್ ಬಗ್ಗೆ ಎಚ್ಚರ ವಹಿಸುವಂತೆ ಕೇರಳ ಸರಕಾರದಿಂದ ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸುತ್ತೋಲೆ](https://www.varthabharati.in/sites/default/files/images/articles/2018/11/30/165780.jpg)
ತಿರುವನಂತಪುರಂ,ನ.30 : ಈ ವರ್ಷದ ಮೇ ತಿಂಗಳಲ್ಲಿ ಕೇರಳದ ಕೊಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಪಾಹ್ ವೈರಾಣು ಸೋಂಕಿನಿಂದ 17 ಜನರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸರಕಾರ ಆದೇಶಿಸಿದೆ ಎಂದು ಹೆಚ್ಚುವರಿ ನಿರ್ದೇಶಕಿ (ಸಾರ್ವಜನಿಕ ಆರೋಗ್ಯ) ಡಾ. ವಿ ಮೀನಾಕ್ಷಿ ಹೇಳಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ( ಆರೋಗ್ಯ) ರಾಜೀವ್ ಸದಾನಂದನ್ ಅವರು ಹೊರಡಿಸಿದ 'ನಿಪಾಹ್' ಎಚ್ಚರಿಕೆ ಸುತ್ತೋಲೆಯ ಪ್ರಕಾರ ಎಲ್ಲಾ ಸರಕಾರಿ ಆಸ್ಪತ್ರೆಗಳು ಕಡ್ಡಾಯವಾಗಿ 'ಕೆಮ್ಮು ಚಿಕಿತ್ಸಾ ವಿಭಾಗಗಳನ್ನು'(ಕಫ್ ಕಾರ್ನರ್ಸ್) ಹೊಂದಬೇಕಿದೆ.
"ಶ್ವಾಸಕೋಶದ ತೀವ್ರ ಸೋಂಕಿಗೆ ಒಳದಗಾದವರಿಗೆ ಮುಖಗವಸು ಅಥವಾ ಮಾಸ್ಕ್ ಒದಗಿಸಬೇಕು ಹಾಗೂ ಮಾಸ್ಕ್ ಗಳು ಹಾಗೂ ಅವುಗಳನ್ನು ಧರಿಸುವ ಅಗತ್ಯವನ್ನು ಮನಗಾಣಿಸಲು ಸಿಬ್ಬಂದಿಯನ್ನು ನೇಮಿಸಬೇಕು,'' ಎಂದೂ ಸುತ್ತೋಲೆ ತಿಳಿಸಿದೆ.
ಈ ವರ್ಷದ ಮೇ ತಿಂಗಳಲ್ಲಿ ನಿಪಾಹ್ ವೈರಸ್ ಕೊಝಿಕ್ಕೊಡ್ನಲ್ಲಿ 14 ಹಾಗೂ ನೆರೆಯ ಮಲಪ್ಪುರಂನಲ್ಲಿ ಮೂರು, ಹೀಗೆ ಒಟ್ಟು 17 ಜೀವಗಳನ್ನು ಬಲಿ ಪಡೆದಿದೆ ಎಂದು ಸರಕಾರಿ ಅಂಕಿಅಂಶಗಳು ತಿಳಿಸುತ್ತವೆ.
ನಿಪಾಹ್ ಒಟ್ಟು 21 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಂತರಾಷ್ಟ್ರೀಯ ಮೆಡಿಕಲ್ ಜರ್ನಲ್ ಒಂದು ಇತ್ತೀಚೆಗೆ ವರದಿ ಮಾಡಿದ ಹಿನ್ನೆಲೆಯಲ್ಲಿ ನಿಪಾಹ್ ಎಷ್ಟು ಜನರನ್ನು ಬಲಿ ಪಡೆದಿದೆ ಎಂಬ ವಿಚಾರದಲ್ಲಿ ವಿವಾದವೇರ್ಪಟ್ಟಿತ್ತು.