ಇಚ್ಛಾಶಕ್ತಿಯಿದ್ದರೆ ಉದ್ದಿಮೆದಾರರಾಗಲು ಸಾಧ್ಯ: ಅನಂತ್ ಕುಮಾರ್ ಹೆಗಡೆ
"ಸಬ್ಸಿಡಿ, ಗ್ರಾಂಟ್ಗಳ ಹಿಂದೆ ಹೋಗುವವರು ಉದ್ಯಮಿಗಳಾಗುವುದಿಲ್ಲ"
ಬೆಂಗಳೂರು, ನ.30: ಸ್ವಂತಿಕೆ, ಶ್ರದ್ಧೆ ಹಾಗೂ ಇಚ್ಛಾಶಕ್ತಿಯಿದ್ದವರು ಉದ್ದಿಮೆದಾರರಾಗಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ಕುಮಾರ್ ಹೆಗಡೆ ಹೇಳಿದ್ದಾರೆ.
ಶನಿವಾರ ನಗರದ ಎಫ್ಕೆಸಿಸಿಐನ ಯುವ ಘಟಕ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೂ ರೆಡಿಮೇಡ್ ಆಗಿ ಸೃಷ್ಟಿಯಾಗುವುದಿಲ್ಲ. ನಾವು ಅಮೆರಿಕ, ಚೀನಾ, ಯುರೋಪ್ ದೇಶಗಳನ್ನು ಮಾದರಿ ಎನ್ನುತ್ತೇವೆ. ಆದರೆ, ಅವರ ಅಪಾರ ಶ್ರದ್ಧೆ ಹಾಗೂ ಇಚ್ಛಾಶಕ್ತಿಯಿಂದ ಅಭಿವೃದ್ಧಿಯಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ ಅಪಾರವಾದ ಸಂಪನ್ಮೂಲವಿದೆ. ಚೀನಾದ ಆರ್ಥಿಕತೆಗಿಂತ ನಮ್ಮದು ಅತ್ಯಂತ ವಿಶಾಲವಾದ ಹಾಗು ಸದೃಢವಾಗಿದೆ. ಆದರೂ, ನಾವು ಚೀನಾ ದೊಡ್ಡ ದೇಶ ಎನ್ನುತ್ತಿರುವುದು ವಿಪರ್ಯಾಸ. ಇಚ್ಛಾಶಕ್ತಿಯಿದ್ದರೆ ಅದರ ಜತೆಗೆ ತಂತ್ರಜ್ಞಾನವೂ ಬೆಳೆಯುತ್ತದೆ ಹಾಗೂ ಹಣವೂ ಸಿಗುತ್ತದೆ. ಅಲ್ಲದೆ, ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು.
ನಮ್ಮಲ್ಲಿ ಬಂಡವಾಳ ಹೂಡಿಕೆ ಮಾಡಲು ಯಾರನ್ನೂ ಬೇಡಿಕೊಳ್ಳಬಾರದು. ಕರ್ನಾಟಕದಲ್ಲಿ ಹೂಡಿಕೆ ಮಾಡಿ, ಅದಕ್ಕೆ ರಕ್ಷಣೆ ಮತ್ತು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ನಾವು ನೀಡುತ್ತೇವೆ. ನಿಮಗೆ ಲಾಭ ಬೇಕಾದರೆ ನಮ್ಮಲ್ಲಿ ಬಂದು ಹೂಡಿಕೆ ಮಾಡಿ ಎಂದು ಕರೆಯಬೇಕು. ಆಗ ದೇಶ-ವಿದೇಶಗಳಿಂದ ಹೂಡಿಕೆದಾರರು ಹುಡುಕಿಕೊಂಡು ಕರ್ನಾಟಕಕ್ಕೆ ಬರುತ್ತಾರೆ. ಪ್ರಧಾನಿ ಮೋದಿ ವಿದೇಶಗಳಿಗೆ ಹೋಗಿ ಅವರಲ್ಲಿ ಹೇಳಿರುವುದೂ ಇದೇ. ಭಿಕ್ಷೆ ಬೇಡಲಿಲ್ಲ ಎಂದು ಅವರು ನುಡಿದರು.
ದೇಶ ಹಾಗೂ ರಾಜ್ಯದಲ್ಲಿ ಹೂಡಿಕೆ ಮಾಡಲು ಬರುವ ಹೂಡಿಕೆದಾರರಿಗೆ ಅತ್ಯಂತ ಸಣ್ಣ ವಸ್ತುವನ್ನೂ ಇದು ಇಲ್ಲಿ ಬಿಟ್ಟರೆ ಬೇರೆ ಎಲ್ಲಿಯೂ ಸಿಗುವುದಿಲ್ಲ ಎನ್ನುವಂತೆ ನಂಬಿಸಬೇಕು. ಆಗ ಮಾತ್ರ ಹೂಡಿಕೆದಾರರು ಹೆಚ್ಚು ಬೆಂಬಲಿಸಲು ಸಾಧ್ಯವಾಗುತ್ತದೆ ಎಂದ ಅವರು, ಸಬ್ಸಿಡಿ, ಗ್ರಾಂಟ್ಗಳ ಹಿಂದೆ ಹೋಗುವವರು ಉದ್ಯಮಿಗಳಾಗುವುದಿಲ್ಲ ಎಂದರು.
ವಿಶ್ವಾಸ ಮತ್ತು ನಂಬಿಕೆ ಜೊತೆ ಹೆಜ್ಜೆಯಿಡಬೇಕು. ಮುಂದಿನ ದಿನಗಳಲ್ಲಿ ಭಾರತದಲ್ಲಿ ನಾಲ್ಕನೇ ತಲೆಮಾರಿನ ಕೈಗಾರಿಕಾ ಕ್ರಾಂತಿಗೆ ಸಿದ್ಧವಾಗುತ್ತಿದ್ದು, ಆ ಕಡೆಗೆ ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ಉಪಾಧ್ಯಕ್ಷ ಸಿ.ಆರ್.ಜನಾರ್ಧನ್ ಸೇರಿದಂತೆ ಹಲವರಿದ್ದರು.