ಕೃಷಿ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಬೇಕು: ಕೃಷಿ ವಿವಿ ಕುಲಸಚಿವ ಡಾ.ಮಹಾಬಲೇಶ್ವರ ಹೆಗಡೆ
‘ಕೃಷಿಯಲ್ಲಿ ದೂರ ಶಿಕ್ಷಣ’ ರಾಜ್ಯ ಮಟ್ಟದ ಕಾರ್ಯಾಗಾರ
ಬೆಂಗಳೂರು, ನ.30: ರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ಪ್ರಾಮಾಣಿಕ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಮಹಾಬಲೇಶ್ವರ ಹೆಗಡೆ ಹೇಳಿದ್ದಾರೆ.
ಶುಕ್ರವಾರ ನಗರದ ಕೃಷಿ ವಿವಿ ವಿಸ್ತರಣಾ ನಿರ್ದೇಶನಾಲಯದ ಸಿಬ್ಬಂದಿ ತರಬೇತಿ ಘಟಕದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಕೃಷಿಯಲ್ಲಿ ದೂರ ಶಿಕ್ಷಣ’ ವಿಷಯ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೃಷಿ ಅಭಿವೃದ್ಧಿ ಪೂರಕವಾದ ಯೋಜನೆಗಳು ಸರಕಾರದಿಂದ ಮತ್ತಷ್ಟು ಹೆಚ್ಚಾಗಬೇಕು. ಆದರೆ, ಇಂದಿನ ದಿನಗಳಲ್ಲಿ ಸರಕಾರಗಳು ವಿವಿಧ ಹಂತದಲ್ಲಿ ಕೃಷಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳು ಜಾರಿಯಾಗುತ್ತಿದ್ದರೂ, ಅಧಿಕಾರಿಗಳು ಅದನ್ನು ಜನರಿಗೆ ತಲುಪಿಸುವಲ್ಲಿ ಸೋಲುತ್ತಿದ್ದಾರೆ. ಹೀಗಾಗಿ, ಅಧಿಕಾರಿಗಳಲ್ಲಿ ಬದ್ಧತೆ ಇರಬೇಕಾಗುತ್ತದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಹಲವಾರು ರೀತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ಹೀಗಾಗಿ, ರೈತರು ಅಧಿಕ ಇಳುವರಿಯನ್ನು ಪಡೆಯಲು ಅನುಕೂಲವಾಗುತ್ತಿದೆ. ಆದರೆ, ರೈತ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಕೃಷಿ ವ್ಯವಸ್ಥೆ ಅವ್ಯವಸ್ಥೆಯಾಗಲು ಇಂದಿನ ಮಾರುಕಟ್ಟೆಯ ಜಾಲವೇ ಕಾರಣವಾಗಿದೆ. ಮಾರುಕಟ್ಟೆ ವ್ಯವಸ್ಥೆ ನಿಯಂತ್ರಣವಾಗದಿದ್ದಲ್ಲಿ ಕೃಷಿ ಕ್ಷೇತ್ರ ಉಳಿಸಲು ಕಷ್ಟ ಎಂದು ನುಡಿದರು.
ವಿಶ್ವದ ಹಲವು ದೇಶಗಳಲ್ಲಿ ತಮ್ಮಲ್ಲಿರುವ ಸಂಪನ್ಮೂಲವನ್ನೇ ಬಳಕೆ ಮಾಡಿಕೊಂಡು ಪ್ರಗತಿಯತ್ತ ಮುನ್ನಡೆಯುತ್ತಿದ್ದಾರೆ. ಆದರೆ, ಭಾರತದಲ್ಲಿ ನಮ್ಮಲ್ಲಿರುವ ಸಂಪನ್ಮೂಲಗಳನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂದು ನಮ್ಮಲ್ಲಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡಿದ್ದರೆ ವಿಶ್ವದ ಎಲ್ಲೆಡೆ ನಾವು ವಿಸ್ತರಣೆಯಾಗಲು ಸಾಧ್ಯವಾಗುತ್ತಿತ್ತು. ಆದುದರಿಂದಾಗಿ, ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿಯು ಎಲ್ಲ ಕಡೆಗೆ ವಿಸ್ತರಣೆಯಾಗಬೇಕು ಎಂದು ಆಶಿಸಿದರು.
ಇಸ್ರೇಲ್ನಂತಹ ಸಣ್ಣ ದೇಶ ಅಲ್ಲಿನ ಸಂಪನ್ಮೂಲ ಬಳಸಿಕೊಂಡು ಮಾದರಿಯಾಗಿದೆ. ನಾವಿಂದು ಹಸಿರು ಮನೆ ತಂತ್ರಜ್ಞಾನ ಅಳವಡಿಸಿಕೊಂಡರೆ ಕರ್ನಾಟಕ ಇಡೀ ದೇಶಕ್ಕೆ ಆಹಾರ ನೀಡುವಷ್ಟು ಇಳುವರಿ ಪಡೆಯಬಹುದಾಗಿತ್ತು. ಆದರೆ, ರೈತರು ಇಂದು ಆ ಕಡೆ ಗಮನ ನೀಡುತ್ತಿಲ್ಲ. ಹೀಗಾಗಿ, ನಮ್ಮಲ್ಲಿರುವ ಕೃಷಿ ವ್ಯವಸ್ಥೆಯನ್ನು ಸರಿಪಡಿಸಿಕೊಂಡರೆ ಭಾರತ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಕಡೆ ಎದ್ದು ನಿಲ್ಲಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಸ್.ಎಂ.ದೀಪಜ ಮಾತನಾಡಿ, ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳು ಹಲವು ರೀತಿಯ ಹೊಸ ಆವಿಷ್ಕಾರಗಳನ್ನು ಮಾಡುತ್ತಿವೆ. ಆದರೆ, ಅದು ಸಂಪೂರ್ಣವಾಗಿ ರೈತರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಆದರೂ, ಅಧಿಕಾರಿಗಳು ಹಾಗೂ ತಂತ್ರಜ್ಞರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಸಂಶೋಧನೆಗಳು ವಿಫಲವಾಗುತ್ತಿವೆ. ಹೀಗಾಗಿ, ವ್ಯವಸ್ಥಿತವಾಗಿ ವಿಸ್ತರಣಾ ಕೇಂದ್ರಗಳನ್ನು ಹೆಚ್ಚು ಬಲಪಡಿಸಬೇಕು ಹಾಗೂ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಬೇಕು ಎಂದರು.
ಕೃಷಿಯಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರಗಳನ್ನು ಸುರಿದು ಹೆಚ್ಚು ಇಳುವರಿ ಪಡೆಯುವ ಬದಲಿಗೆ ನಿರ್ಧರಿತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಅಧಿಕ ಇಳುವರಿ ಪಡೆಯಲು ಸಾಧ್ಯತೆ ಇದೆ. ಅಲ್ಲದೆ, ಹವಾಮಾನ, ಬೆಳೆ ನಿರ್ವಹಣೆ, ಕೀಟರೋಗ ಸೇರಿದಂತೆ ಮತ್ತಿತರೆ ವಿಷಯಗಳ ಕುರಿತು ರೈತರಿಗೆ ಸೂಕ್ತ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜು, ಆತ್ಮ ಯೋಜನೆ ಸಂಯೋಜಕ ಎನ್.ಬಸವರಾಜು, ದೂರ ಶಿಕ್ಷಣ ಘಟಕದ ಮುಖ್ಯಸ್ಥ ಡಾ.ಕೆ.ವೆಂಕಟರಂಗನಾಯ್ಕ ಉಪಸ್ಥಿತರಿದ್ದರು.
ಕೃಷಿ ವೃತ್ತಿ ಎಂಬುದು ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ಆದರೆ, ದೇಶದಲ್ಲಿ ಶೇ.65 ಕ್ಕೂ ಅಧಿಕ ಕೃಷಿಕರಿದ್ದು, ಎಲ್ಲರಿಗೂ ವೈಜ್ಞಾನಿಕ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಬದಲಿಗೆ, ವಿವಿಧ ಹಂತಗಳಲ್ಲಿ ರೈತರಿಗೆ ಕೃಷಿಗೆ ಪೂರಕವಾದ ಶಿಕ್ಷಣ ನೀಡಬೇಕಿದೆ.
-ಎಸ್.ಎಂ.ದೀಪಜ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ







