ಮಂಡ್ಯ: ಡಿ.5 ರಿಂದ ಭತ್ತ ಖರೀದಿಗೆ ನೋಂದಣಿ ಆರಂಭ
ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 1,750 ರೂ. ದರ ನಿಗದಿ

ಮಂಡ್ಯ, ನ.30: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತ ಖರೀದಿಗೆ ಸರಕಾರ ಪ್ರತಿ ಕ್ವಿಂಟಾಲ್ಗೆ 1750 ರೂ.ದರ ನಿಗದಿಪಡಿಸಿದ್ದು, ಈ ಸಂಬಂಧ ಅಧಿಕಾರಿಗಳು ನೋಂದಣೆ ಪ್ರಕ್ರಿಯೆ ಹಾಗೂ ಖರೀದಿ ಪ್ರಾರಂಭಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಖರೀದಿ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಭತ್ತ ಖರೀದಿಗೆ ಡಿ.5 ರಿಂದ 15ರವರೆಗೆ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಆಯ್ದ ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತ್, ಕರ್ನಾಟಕ ರಾಜ್ಯ ಉಗ್ರಾಣ ಮತ್ತು ಎ.ಪಿ.ಎಂ.ಸಿ ಆವರಣದಲ್ಲಿ ನೋಂದಣಿ ಕಾರ್ಯ ನಡೆಯಲಿದೆ. ಡಿ.16 ರಿಂದ 2019ರ ಮಾ.31ರವರೆಗೆ ನೋಂದಾಯಿತ ರೈತರಿಂದ ಭತ್ತವನ್ನು ಖರೀದಿಸಿ ಅಕ್ಕಿ ಗಿರಣಿಗಳಲ್ಲಿ ಭತ್ತ ಶೇಖರಿಸುವ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.
ರೈತರಿಂದ ಖರೀದಿಸಲಾಗುವ ಭತ್ತವನ್ನು ಜಿಲ್ಲೆಯಲ್ಲಿರುವ 257 ಅಕ್ಕಿ ಗಿರಣಿ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗುವುದು. ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಖರೀದಿಸಲಾಗುವುದು. ಸಾಮಾನ್ಯ ಭತ್ತವನ್ನು ಮಾತ್ರ ರೈತರಿಂದ ಖರೀದಿಗೆ ಸರಕಾರ ಅನುಮತಿ ನೀಡಿದ್ದು, ಜಿಲ್ಲೆಯಲ್ಲಿ ಕಾರ್ಯನಿರತವಾಗಿರುವ ಅಕ್ಕಿ ಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೊಂದಾಯಿಸಿಕೊಂಡು ಹಲ್ಲಿಂಗ್ ಮತ್ತು ಶೇಖರಣಾ ಸಾಮರ್ಥ್ಯ ಕ್ಕೆ ಅನುಗುಣವಾಗಿ ಸಂಗ್ರಹಣಾ ಕಾರ್ಯ ನಿರ್ವಹಿಸಲಾಗುವುದು ಎಂದು ಅವರು ವಿವರಿಸಿದರು.
ಭತ್ತವನ್ನು ರೈತರು ತಮ್ಮ ಚೀಲಗಳಲ್ಲಿ ತಂದು ಅಕ್ಕಿ ಗಿರಣಿಗೆ ಸಲ್ಲಿಸುವ ಪ್ರತಿ ಕ್ವಿಂಟಾಲ್ ಚೀಲಗಳಿಗೆ 6 ರೂ.ನಂತೆ ಖರೀದಿ ಏಜೆನ್ಸಿಗಳು ಪಾವತಿ ಮಾಡಬೇಕು. ರೈತರಿಂದ ಭತ್ತವನ್ನು ಪಡೆದ ನಂತರ ಅಕ್ಕಿ ಗಿರಣಿ ಮಾಲಕರು ಮಾಹಿತಿಯನ್ನು ಆನ್ಲೈನ್ನಲ್ಲಿ ನಮೂದಿಸಬೇಕು. ಖರೀದಿ ಏಜೆನ್ಸಿಗಳು ಭತ್ತವನ್ನು ಸರಬರಾಜು ಮಾಡಿದ ರೈತರ ಬ್ಯಾಂಕ್ ಖಾತೆಗೆ ಮೂರು ದಿನಗಳೊಳಗಾಗಿ ಹಣವನ್ನು ವರ್ಗಾವಣೆ ಮಾಡಬೇಕು ಎಂದು ಅವರು ಸೂಚಿಸಿದರು.
ಆನ್ಲೈನ್ ನೋಂದಣಿ ಮಾಡಲು ರೈತರು ಆಧಾರ್ ಕಾರ್ಡ್, ಆರ್.ಟಿ.ಸಿ, ಎಜೆಎಸ್ಕೆಯಿಂದ ಪಡೆದ ಬೆಳೆ ದೃಢೀಕರಣ ಪತ್ರ ಹಾಗೂ ಬ್ಯಾಂಕ್ ಪಾಸ್ ಪುಸ್ತಕವನ್ನು ತರಬೇಕು. ತಾಲೂಕುಗಳಲ್ಲಿ ತಹಶೀಲ್ದಾರ್ ಮೇಲುಸ್ತುವಾರಿಯಲ್ಲಿ ನಡೆಯುವ ಭತ್ತ ಖರೀದಿ ಕಾರ್ಯಕ್ಕೆ ಗ್ರೇಡರ್ ಗಳನ್ನು ಕೃಷಿ ಇಲಾಖೆ ನೇಮಕ ಮಾಡಬೇಕು. ನೋಂದಣಿ ಹಾಗೂ ಖರೀದಿಗೆ ಸಂಬಂಧಪಟ್ಟ ಮಾಹಿತಿ ಬಗ್ಗೆ ಅಗತ್ಯ ಪ್ರಚಾರ ಕೈಗೊಳ್ಳಬೇಕು ಎಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಕುಮದಾ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 27 ನೋಂದಣಿ ಕೇಂದ್ರವನ್ನು ತೆರೆಯಲು ಕ್ರಮವಹಿಸಲಾಗಿದೆ ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾ ಸುಲೋಚನಾ, ವಿವಿಧ ಇಲಾಖೆ ಅಧಿಕಾರಿಗಳು, ಅಕ್ಕಿ ಗಿರಣಿ ಮಾಲೀಕರು ಹಾಗೂ ಇತರರು ಭಾಗವಹಿಸಿದ್ದರು.
ನೋಂದಣಿ ಕೇಂದ್ರಗಳ ವಿವರ:
ಮಂಡ್ಯ ತಾಲೂಕಿನಲ್ಲಿ ಕೆರಗೊಡು, ದುದ್ದ, ಬಸರಾಳು, ಕೊತ್ತತ್ತಿ ರೈತ ಸಂಪರ್ಕ ಕೇಂದ್ರ, ಉಮ್ಮಡಹಳ್ಳಿ ಹಾಗೂ ಯಲಿಯೂರಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಆವರಣ. ಮದ್ದೂರು ತಾಲೂಕಿನಲ್ಲಿ ಎ.ಪಿ.ಎಂ.ಸಿ ಆವರಣ, ಕೆ.ಎಂ.ದೊಡ್ಡಿ, ಕೊಪ್ಪ, ಕೆಸ್ತೂರು ಗ್ರಾಮ ಪಂಚಾಯತ್, ಚಾಮನಹಳ್ಳಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಆವರಣ.
ಮಳವಳ್ಳಿ ತಾಲೂಕಿನಲ್ಲಿ ಎ.ಪಿ.ಎಂ.ಸಿ ಆವರಣ ಮತ್ತು ಕಿರುಗಾವಲು ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಆವರಣ. ಕೆ.ಆರ್.ಪೇಟೆ ತಾಲೂಕಿನಲ್ಲಿ ತಾಲೂಕು ಕೇಂದ್ರದಲ್ಲಿರುವ ಎ.ಪಿ.ಎಂ.ಸಿ ಆವರಣ, ಕಿಕ್ಕೇರಿ ಎ.ಪಿ.ಎಂ.ಸಿ ಆವರಣ, ಬೂಕನಕೆರೆ, ಅಕ್ಕಿ ಹೆಬ್ಬಾಳು, ತೆಂಡಕೆರೆ ರೈತ ಸಂಪರ್ಕ ಕೇಂದ್ರ.
ಪಾಂಡವಪುರ ತಾಲೂಕಿನಲ್ಲಿ ಎ.ಪಿ.ಎಂ.ಸಿ ಆವರಣ, ಜಕ್ಕನಹಳ್ಳಿ, ಚಿನಕುರಳಿ ರೈತ ಸಂಪರ್ಕ ಕೇಂದ್ರ, ಕ್ಯಾತನಹಳ್ಳಿ ಗ್ರಾಮ ಪಂಚಾಯತ್ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬರುವ ಎ.ಪಿ.ಎಂ.ಸಿ ಕಚೇರಿ, ಅರಕೆ, ಬೆಳಗೊಳ, ಕೆ.ಶೆಟ್ಟಹಳ್ಳಿ ರೈತ ಸಂಪರ್ಕ ಕೇಂದ್ರ.







