ಧರ್ಮ ಗುರುಗಳು ಪರಿಸರ ಸಂರಕ್ಷಣೆಗಾಗಿ ಮುಂಚೂಣಿಗೆ ಬರಬೇಕು: ಬಿ.ಎಲ್.ಶಂಕರ್
ನದಿಗಳನ್ನು ಉಳಿಸೋಣ ಬನ್ನಿ ಕಾರ್ಯಕ್ರಮ
![ಧರ್ಮ ಗುರುಗಳು ಪರಿಸರ ಸಂರಕ್ಷಣೆಗಾಗಿ ಮುಂಚೂಣಿಗೆ ಬರಬೇಕು: ಬಿ.ಎಲ್.ಶಂಕರ್ ಧರ್ಮ ಗುರುಗಳು ಪರಿಸರ ಸಂರಕ್ಷಣೆಗಾಗಿ ಮುಂಚೂಣಿಗೆ ಬರಬೇಕು: ಬಿ.ಎಲ್.ಶಂಕರ್](/images/placeholder.jpg)
ಬೆಂಗಳೂರು, ಡಿ.1: ರಾಜಕೀಯವು ವ್ಯಾಪಾರೀಕರಣಕ್ಕೆ ತುತ್ತಾಗಿದ್ದು, ಅದರ ಪುನರ್ ವ್ಯಾಖ್ಯಾನ ನಡೆಯಬೇಕಿದೆ. ನದಿ ಮೂಲಗಳನ್ನು ಉಳಿಸಬೇಕಾಗಿದೆ. ಇಲ್ಲವಾದಲ್ಲಿ ಮಲೆನಾಡಿನ ನದಿಗಳು ಬಯಲುಸೀಮೆಯ ನದಿಗಳಂತೆ ಬತ್ತಲಿವೆ. ಹೀಗಾಗಿ ಧರ್ಮ ಗುರುಗಳು ಪರಿಸರ ಸಂರಕ್ಷಣೆಗೆ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ನ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.
ಶನಿವಾರ ಗ್ರಾಮ ಸೇವಾ ಸಂಘವು ನಗರದ ಗಾಂಧಿ ಭವನದಲ್ಲಿ ವಿಜ್ಞಾನಿ ಸಂತ ಜಿ.ಡಿ ಅಗರವಾಲರ ಸ್ಮರಣಾರ್ಥ ಆಯೋಜಿಸಿದ್ದ ನದಿಗಳನ್ನು ಉಳಿಸೋಣ ಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಐವತ್ತು ವರ್ಷದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನದಿಗಳು ಕಲುಷಿತವಾಗಿದೆ. ಕೃಷಿಯಲ್ಲಿ ಬಳಕೆಯಾಗುವ ಕ್ರಿಮಿನಾಶಕ ಇಂದು ಮಲೆನಾಡಿಗೆ ಮಾರಕವಾಗಿದೆ. ಮಲೆನಾಡಿನ ಕಾಡುಗಳಲ್ಲಿ ಸ್ಥಳೀಯ ಮರಗಳನ್ನು ಮೂಲೆ ಗುಂಪು ಮಾಡಿ ಕೇವಲ ಲಾಭದಾಯಕ ಮರಗಳನ್ನು ಬೆಳೆಸಿ ಕಾಡನ್ನು ಹಾಳು ಮಾಡುವ ಕೆಲಸವನ್ನು ಅರಣ್ಯ ಇಲಾಖೆಯೇ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಸಭಾ ಸದಸ್ಯ ಪ್ರೊ.ಎಂ.ವಿ ರಾಜೀವ್ ಗೌಡ ಮಾತನಾಡಿ, ಅಕ್ರಮ ಮರಳು ಗಣಿಗಾರಿಕೆ ಪರಿಸರಕ್ಕೆ ಮಾರಕವಾಗಿದ್ದು, ಅದು ಮೊದಲು ನಿಲ್ಲಬೇಕಾಗಿದೆ. ಮರಳು ಗಣಿಗಾರಿಕೆಯಿಂದಾಗಿ ಮರಳು ಮೂಲಗಳು ನಾಶವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ಉಗಮ ಸ್ಥಾನದಲ್ಲೇ ಅಭಿವೃದ್ಧಿ ಹೆಸರಿನಲ್ಲಿ ರೈಲ್ವೇ ಹಳಿಗಳನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಕೈ ಹಾಕಿ ಕಾಡನ್ನು ನಾಶ ಮಾಡುತ್ತಿದ್ದೇವೆ. ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ನೋಡುತ್ತಿದ್ದೇವೆ ಹಾಗೂ ವೃಷಭಾವತಿಯಲ್ಲಿರುವ ರಾಸಾಯನಿಕಗಳು ಭಯ ಹುಟ್ಟಿಸುತ್ತದೆ. ಆ ನೀರಿನಲ್ಲಿ ಬೆಳೆಯುವ ತರಕಾರಿಯನ್ನು ಬೆಳೆದು ತಿನ್ನುತ್ತಿದ್ದೇವೆ. ಈ ದುಷ್ಪರಿಣಾಗಳ ಬಗ್ಗೆ ಎಲ್ಲರೂ ಜಾಣ ಕುರುಡರಂತೆ ವರ್ತಿಸುತ್ತಿದ್ದೇವೆಂದು ಅವರು ವಿಷಾದಿಸಿದರು.
ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಸರಳ ಜೀವನ ಮತ್ತು ಉನ್ನತ ಚಿಂತನೆ ಪರಿಸರವನ್ನು ಉಳಿಸುತ್ತದೆ. ಹಿರಿಯರು ಪ್ರಕೃತಿಯನ್ನು ದೇವರಂತೆ ನೋಡುತ್ತಿದ್ದರು, ಇಂದು ಅದು ಸಂಪತ್ತಾಗಿದೆ. ಇವತ್ತು ವಿಜ್ಞಾನಕ್ಕೂ ಧರ್ಮಕ್ಕೂ ಸಂಬಂಧ ಕಳಚಿಕೊಂಡಿದೆ. ಆದರೆ, ಇವು ಒಂದೇ ನಾಣ್ಯದ ಎರಡು ಮುಖಗಳು. ವಿಜ್ಞಾನ ಹಾಗೂ ಧರ್ಮ ಒಂದಾದರೆ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಪ್ರಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಬಸವರಾಜ್ ಪಾಟೀಲ್, ನೀರಿನ ತಜ್ಞ ವಿಶ್ವನಾಥ, ಲೋಕವಿದ್ಯಾ ಕಾರ್ಯಕರ್ತ ಅಭಿಜಿತ್ ಮಿತ್ರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಡಾ ವೂಡೇ ಪಿ. ಕೃಷ್ಣ, ಪರಿಸರ ತಜ್ಞ ಸಿ. ಯತಿರಾಜು ಮತ್ತಿತರರಿದ್ದರು.