ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಉನ್ನತ ಮಟ್ಟದ ಸಭೆ: ಸಚಿವೆ ಜಯಮಾಲಾ

ಉಡುಪಿ, ಡಿ.1: ಬ್ರಹ್ಮಾವರದಲ್ಲಿರುವ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ಏರ್ಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.
ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಕುರಿತು ಚರ್ಚಿಸಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಂಡು ಮತ್ತೆ ಹಿಂದಿನಂತೆ ವ್ಯವಹಾರ ನಡೆಸಬೇಕೆಂಬುದು ತನ್ನ ಆಶಯವಾಗಿದೆ. ಈಗಾಗಲೇ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರೂ ಕೂಡಾ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ರೈತರು ಮುಂದೆ ಬಂದರೆ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಇಂದಿನ ಸಭೆಯಲ್ಲಿ ಸಾಕಷ್ಟು ಮಾಹಿತಿಗಳು ದೊರಕಿದ್ದು, ಶೀಘ್ರವೇ ಈ ಬಗ್ಗೆ ಸಕ್ಕರೆ ಸಚಿವರು ಹಾಗೂ ಸಕ್ಕರೆ ಇಲಾಖೆ ಆಯುಕ್ತರೊಂದಿಗೆ ತಾನು ಸಮಾಲೋಚನೆ ನಡೆಸಲಿದ್ದೇನೆ. ಕಾರ್ಖಾನೆಯಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳ ರೈತರ ಹಿತಾಸಕ್ತಿಯೂ ಇರುವುದರಿಂದ ಉಭಯ ಜಿಲ್ಲೆಗಳ ಶಾಸಕರು, ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯನ್ನು ಕರೆದು ಚರ್ಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವರು ತಿಳಿಸಿದರು.
ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಕಾರ್ಖಾನೆಯ ಪುನಶ್ಚೇತನಕ್ಕೆ ಎಲ್ಲಾ ವಿಧದ ಬೆಂಬಲ ಹಾಗೂ ತಂತ್ರಜ್ಞಾನದ ನೆರವು ನೀಡಲು ಸರಕಾರ ಸಿದ್ಧವಿದೆ. ಇದರಿಂದ ಸಾಕಷ್ಟು ಉದ್ಯೋಗಗಳೂ ದೊರಕುವುದರಿಂದ ಜಿಲ್ಲೆಯ ಪ್ರಗತಿಗೆ ಪೂರಕವಾಗಲಿದೆ. ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತ ನಡುವೆ ಸಮನ್ವಯತೆ ಮುಖ್ಯ ವಾಗಿದೆ. ವಾರಾಹಿ ನೀರಾವರಿ ಯೋಜನೆ ಬಂದಿರುವುದರಿಂದ ಈ ಭಾಗದಲ್ಲಿ ಇನ್ನಷ್ಟು ಕಬ್ಬು ಬೆಳೆಯಲು ಅವಕಾಶವಿದೆ ಎಂದು ಸಚಿವೆ ಜಯಮಾಲಾ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಸಕ್ಕರೆ ಕಾರ್ಖಾನೆ ಯ ಪುನಶ್ಚೇತನಕ್ಕೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದ್ದು, ಈಗಿನ ಅಂದಾಜಿನಂತೆ ಸುಮಾರು 30 ಕೋಟಿ ರೂ.ಗಳ ಅಗತ್ಯವಿದೆ. ಕಾರ್ಖಾನೆ ಪುನಶ್ಚೇತನ, ನಂತರ ಕಬ್ಬು ಪೂರೈಕೆಯ ಸಾಧ್ಯತೆಗಳ ಬಗ್ಗೆ ಸಾಧ್ಯತಾ ಅಧ್ಯಯನ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ವಾರಾಹಿ ಯೋಜನೆಯ ಮೂಲ ಉದ್ದೇಶವೇ ಕಬ್ಬು ಬೆಳೆಗೆ ನೀರೊದಗಿಸು ವುದಾಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿದರೆ ರೈತರೂ ಮುಂದೆ ಬರಲಿದ್ದಾರೆ. ವರ್ಷದಲ್ಲಿ ಕನಿಷ್ಠ 6 ತಿಂಗಳು ಕಬ್ಬು ದೊರೆಯು ವಂತಾಗಬೇಕು ಎಂದರು.
ವಿಧಾನಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ ಮಾತನಾಡಿ, ಕಾರ್ಖಾನೆಯ ಆಸ್ತಿ ಮಾರಾಟಕ್ಕೆ ಅವಕಾಶ ನೀಡಬಾರದು. ರೈತರಿಗೆ ಪುನಶ್ಚೇತನ ಪೂರಕವಾ ಗಲಿದೆಯೇ ಎಂಬುದರ ಬಗ್ಗೆಯೂ ಅಧ್ಯಯನ ಮಾಡಬೇಕಿದೆ ಎಂದರೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಕಾರ್ಖಾನೆಯ ಪುನಶ್ಚೇತನಕ್ಕೆ ರೈತರ ಸಹಕಾರದ ಅಗತ್ಯವಿದೆ. ಸಾಕಷ್ಟು ಕಬ್ಬು ಪೂರೈಕೆ ಯಾಗುವುದು ಮುಖ್ಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಯಶೀಲ ಶೆಟ್ಟಿ, ಪ್ರಬಾರ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ಕುಮಾರ್, ರೈತ ಸಂಘಟನೆಗಳ ಮುಖಂಡರು, ಕಬ್ಬು ಬೆಳೆಗಾರರ ಪ್ರತಿನಿಧಿಗಳು ಉಪಸ್ಥಿತರಿದ್ದರು.
200 ಎಕರೆಯಲ್ಲಿ ಕಬ್ಬಿನ ಬೀಜ ಬಿತ್ತನೆ
ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವ ಕುರಿತು ಸಚಿವೆ ಜಯಮಾಲ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆ ಆಶಾದಾಯಕವಾಗಿತ್ತು. ಈ ಬಗ್ಗೆ, ಭವಿಷ್ಯದ ಗುರಿಯ ಕುರಿತು ತುಂಬಾ ಚರ್ಚೆಯಾಯಿತು. ಆದರೆ ಜಾಗದ ಮಾರಾಟಕ್ಕೆ ಜನಪ್ರತಿನಿಧಿಗಳು ವಿರೋಧ ಸೂಚಿಸಿದರು. ಅದು ಕಾರ್ಖಾನೆಯ ಆಡಳಿತ ಮಂಡಳಿಯ ಸರ್ವಸದಸ್ಯರ ಸಭೆಯಲ್ಲಾದ ಚರ್ಚೆಯಷ್ಟೇ ಎಂದು ನಾವು ಸ್ಪಷ್ಟಪಡಿಸಿದೆವು.
ಇನ್ನು ಆಡಳಿತ ಮಂಡಳಿ 200 ಎಕರೆ ಜಾಗದಲ್ಲಿ ಕಬ್ಬಿನ ಬೀಜ ಬಿತ್ತನೆಗೆ ಸಿದ್ಧತೆ ನಡೆಸಿದ್ದು, ಇದರಿಂದ ಮುಂದೆ 6,000 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಸಾಧ್ಯವಾಗಲಿದೆ ಹಾಗೂ 1.75 ಲಕ್ಷ ಟನ್ ಕಬ್ಬು ಉತ್ಪನ್ನ ವಾಗಲಿದೆ. ಎರಡು ವರ್ಷಗಳಲ್ಲಿ ಕಾರ್ಖಾನೆ ಪುನಶ್ಚೇತನ ಸಾದ್ಯವಾಗಿ ಕಬ್ಬು ಅರೆಯಲು ಸಿದ್ಧವಾದರೆ, ಅದರಿಂದ ಕಾರ್ಖಾನೆಯನ್ನು ನಡೆಸಲು ಸಾಧ್ಯವಾ ಗುವುದು. ಮುಂದೆ ಇದರಿಂದ ಕಬ್ಬು ಬೆಳೆಯುವ ಪ್ರದೇಶದ ವಿಸ್ತರಣೆಗೆ ಸಾಧ್ಯವಾಗಲಿದೆ ಎಂದು ಸಭೆಗೆ ವಿವರಿಸಿದ್ದೇನೆ.
-ಎಚ್. ಜಯಶೀಲ ಶೆಟ್ಟಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ