ಘನತ್ಯಾಜ್ಯ ನಿರ್ವಹಣೆಗೆ ನಿಟ್ಟೆ ಗ್ರಾಪಂ ಮಾದರಿ: ನರಸಿಂಹ ಮೊಗೇರ್

ಉಡುಪಿ, ಡಿ.1: ಕಾರ್ಕಳ ತಾಲೂಕು ನಿಟ್ಟೆ ಗ್ರಾಪಂ ಕಚೇರಿ ವಠಾರದಲ್ಲೇ ಎಲ್ಲಾ ತರದ ಘನ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಂಗಡಿಸಿ, ಸಮರ್ಪಕವಾಗಿ ನಿರ್ವಹಿಸಿ, ಸಂಪನ್ಮೂಲವಾಗಿ ಪರಿವರ್ತಿಸುವ, ಉದ್ಯೋಗ ಸೃಷ್ಟಿಸುವ, ಆದಾಯ ತರುವ, ಘನ ತ್ಯಾಜ್ಯ ನಿರ್ವಹಣಾ ಘಟಕವು ಉಡುಪಿ ಜಿಲ್ಲೆಯ ಹೊಸ ಅವಿಷ್ಕಾರವಾಗಿದ್ದು, ಅನುಕರಣೆಗೆ ಯೋಗ್ಯವಾದ ಮಾದರಿ ಘಟಕವಾಗಿದೆ ಎಂದು ಮಹಾತ್ಮಾಗಾಂಧೀ ನರೇಗಾ ಓಂಬುಡ್ಸ್ಮೆನ್ ನರಸಿಂಹ ಮೊಗೇರ್ ಅಭಿಪ್ರಾಯಪಟ್ಟಿದ್ದಾರೆ.
ನಿಟ್ಟೆ ಗ್ರಾಪಂ ವಠಾರದಲ್ಲಿರುವ ಘನ ದ್ರವ ಸಂಪನ್ಮೂಲ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಮಹಾತ್ಮಾ ಗಾಂಧೀ ನರೇಗಾ ಓಂಬುಡ್ಸ್ಮೆನ್ ನರಸಿಂಹ ಮೊಗೇರ್, ಮಾಜಿ ಓಂಬುಡ್ಸ್ಮೆನ್ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕ ಚೇತನ್ ಕುಮಾರ್ರನ್ನು ಒಳಗೊಂಡ ತಂಡವು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ತ್ಯಾಜ್ಯ ನಿರ್ವಹಣಾ ಕಾರ್ಯ ತಂಡದ ಸದಸ್ಯರೊಂದಿಗೆ ಮಾಹಿತಿ ಪಡೆದುಕೊಂಡಿತು.
ಗ್ರಾಮದ 800 ಮನೆಗಳಿಂದ ಎಲ್ಲಾ ವಿಧದ ತ್ಯಾಜ್ಯಗಳನ್ನು ಸಂಗ್ರಹಿಸಿ ಸಮರ್ಪಕವಾಗಿ ನಿರ್ವಹಿಸಿ ಸಂಪನ್ಮೂಲವಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ವಿಶೇಷ ಪ್ರೇರೇಪಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಕಾರ್ಯಕರ್ತ ರೊಂದಿಗೆ ಹಾಲು ಕರೆಯುವ ಹಸು, ಕೋಳಿಗಳು ಪಾಲುದಾರರಾಗಿರುವುದು ವಿಶ್ವಕ್ಕೆ ಮಾದರಿಯಾಗಿದೆ ಎಂದು ಓಂಬುಡ್ಸ್ಮೆನ್ ತಂಡ ಅಭಿಪ್ರಾಯ ಪಟ್ಟಿದೆ.