ಕೌಟುಂಬಿಕ ಪ್ರಕರಣಗಳಿಗೆ ಪಿಐಎಲ್ ದುರುಪಯೋಗ ಸಲ್ಲದು: ಹೈಕೋರ್ಟ್
![ಕೌಟುಂಬಿಕ ಪ್ರಕರಣಗಳಿಗೆ ಪಿಐಎಲ್ ದುರುಪಯೋಗ ಸಲ್ಲದು: ಹೈಕೋರ್ಟ್ ಕೌಟುಂಬಿಕ ಪ್ರಕರಣಗಳಿಗೆ ಪಿಐಎಲ್ ದುರುಪಯೋಗ ಸಲ್ಲದು: ಹೈಕೋರ್ಟ್](https://www.varthabharati.in/sites/default/files/images/articles/2018/12/2/166142.jpeg)
ಬೆಂಗಳೂರು, ಡಿ.2: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಭೂತ ಹಕ್ಕುಗಳ ರಕ್ಷಣೆಗೆ ಹೊರತು ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಅಸ್ತ್ರವಲ್ಲ. ಸತ್ಯಾಂಶ ಮರೆಮಾಜಿ ಕೌಟುಂಬಿಕ ಪ್ರಕರಣಗಳಿಗೆ ಪಿಐಎಲ್ ಬಣ್ಣ ಹಚ್ಚುವುದನ್ನು ಸಹಿಸಲಾಗದು ಎಂದು ಹೈಕೋರ್ಟ್ ಖಡಕ್ ಮಾತುಗಳಲ್ಲಿ ಹೇಳಿದೆ.
ಸ್ವ ಹಿತಾಸಕ್ತಿ ಅಥವಾ ವೈಯಕ್ತಿಕ ಲಾಭದ ಉದ್ದೇಶ ಹೊಂದಿರುವ ಇಂತಹ ಅರ್ಜಿಗಳನ್ನು ಮಾನ್ಯ ಮಾಡಿದರೆ, ಅದಕ್ಕೆ ಕೊನೆಯೆ ಇಲ್ಲ. ಪ್ರತಿಯೊಂದು ವಾಜ್ಯವನ್ನು ಕಕ್ಷಿದಾರರ ತೃಪ್ತಿಗೆ ಇತ್ಯರ್ಥಪಡಿಸುತ್ತಾ ಹೋದರೆ ಪಿಐಎಲ್ನ ಸ್ವರೂಪಕ್ಕೆ ಧಕ್ಕೆ ಆಗಲಿದೆ. ಅದರ ಪರಿಣಾಮ ಇಡೀ ನ್ಯಾಯಾಂಗ ಮೇಲಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಆನೇಕಲ್ ತಾಲೂಕಿನ ಜಿಗಣಿಯ ಎನ್.ಅನುಷಿಯಾ ಅವರ ಪತಿ ಎಂ.ಸುರೇಶ್ ನಡುವಿನ ಕೌಟುಂಬಿಕ ಪ್ರಕರಣಗಳು ನಾನಾ ಕೋರ್ಟ್ಗಳಲ್ಲಿ ಬಾಕಿ ಇವೆ. ಅವುಗಳನ್ನು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ಪರಿಹರಿಸಿಕೊಳ್ಳುವ ಬದಲು ಆಕೆ ನ್ಯಾಯದಾನ ವ್ಯವಸ್ಥೆಯಲ್ಲಿ ತಕ್ಷಣವೇ ಸುಧಾರಣೆಗಳನ್ನು ತರಬೇಕು. ಜೊತೆಗೆ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಬೇಕು. ಮಹಿಳೆಯರ, ರಕ್ಷಣೆಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಿಐಎಲ್ ಸಲ್ಲಿಸಿದ್ದರು. ಸಿಜೆ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಸುಜಾತಾ ಅವರಿದ್ದ ವಿಭಾಗೀಯ ಪೀಠ, ದುರುದ್ದೇಶದಿಂದ ಕೂಡಿರುವ ವಾಸ್ತವಾಂಶ ಮರೆಮಾಚಿ, ವೈಯಕ್ತಿಕ ದ್ವೇಷ ಅಥವಾ ಸೇಡು ತೀರಿಸಿಕೊಳ್ಳಲು ಸಲ್ಲಿಸಿರುವ ಪಿಐಎಲ್ ಅನ್ನು ಪುರಸ್ಕರಿಸಲಾಗದು ಎಂದಿದೆ.
ಕೌಟುಂಬಿಕ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಅವರು ಪಿಐಎಲ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಲಾಗದು ಎಂದು ಪೀಠ ಹೇಳಿದೆ. ಮೊದಲನೆ ಅರ್ಜಿದಾರರಾದ ಎನ್.ಅನುಷಿಯಾಗೆ ವ್ಯಾಜ್ಯ ಇರುವುದು ಪತಿ ಎಂ.ಸುರೇಶ್ ಜೊತೆ. ಆಕೆ ಅವರ ವಿರುದ್ಧ ಐಪಿಸಿ, ಮಹಿಳೆಯರ ದೌರ್ಜನ್ಯ ತಡೆ ಕಾಯಿದೆ ಹಾಗೂ ವರದಕ್ಷಿಣೆ ತಡೆ ಕಾಯಿದೆ ಅಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೋರ್ಟ್ನಲ್ಲಿ 8 ಪ್ರಕರಣಗಳನ್ನು ಹೂಡಿದ್ದಾರೆ. ಅವುಗಳು ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಬೇಕು. ಆದರೆ, ಆಕೆ ಪರ್ಯಾಯ ವಿಧಾನದ ಮೂಲಕ ಅಂದರೆ ಪಿಐಎಲ್ ಸಲ್ಲಿಸಿ, ಹಲವು ಪರಿಹಾರಗಳನ್ನು ಕೇಳಿದ್ದರು. ಇದಕ್ಕೆ ಕೇಂದ್ರ ಸರಕಾರಿ ವಕೀಲೆ ಎ.ಡಿ.ವಿಜಯ ಆಕ್ಷೇಪ ಎತ್ತಿ ಇದು ಪಕ್ಕಾ ಕೌಟುಂಬಿಕ ಮತ್ತು ಆಸ್ತಿ ಜಗಳ. ಅರ್ಜಿದಾರರು ಪತಿಯ ಮೇಲೆ ಹಲವು ಆರೋಪ ಮಾಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದ್ದರು. ಅದನ್ನು ಬೆಂಬಲಿಸಿದ್ದ ಸರಕಾರಿ ವಕೀಲ ಡಿ.ನಾಗರಾಜ್, ಸುಪ್ರೀಂಕೋರ್ಟ್ನ ತೀರ್ಪು ಉಲ್ಲೇಖಿಸಿ, ಅರ್ಜಿದಾರರು ಪರ್ಯಾಯ ವಿಧಾನದ ಮೂಲಕ ಪರಿಹಾರ ಕಂಡುಕೊಳ್ಳ ಬಯಸಿರುವ ಅರ್ಜಿಯನ್ನು ಮಾನ್ಯ ಮಾಡಬಾರದೆಂದು ವಾದ ಮಂಡಿಸಿದ್ದರು. ಈ ಅಂಶಗಳನ್ನು ಪರಿಗಣಿಸಿರುವ ಹೈಕೋರ್ಟ್, ಪಿಐಎಲ್ ವಜಾಗೊಳಿಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದರೇನು, ಅದರ ಮೂಲಸ್ವರೂಪವೇನು ಎಂದು ವಿಸ್ತೃತವಾಗಿ ವಿವರಿಸಿದೆ.