ಜಮ್ಮು-ಕಾಶ್ಮೀರದ ಖಾಯಂ ನಿವಾಸಿ ನಿಯಮಗಳನ್ನು ಬದಲಿಸಲು ರಾಜ್ಯಪಾಲರ ಪ್ರಯತ್ನ: ಪಕ್ಷಗಳ ಆರೋಪ
![ಜಮ್ಮು-ಕಾಶ್ಮೀರದ ಖಾಯಂ ನಿವಾಸಿ ನಿಯಮಗಳನ್ನು ಬದಲಿಸಲು ರಾಜ್ಯಪಾಲರ ಪ್ರಯತ್ನ: ಪಕ್ಷಗಳ ಆರೋಪ ಜಮ್ಮು-ಕಾಶ್ಮೀರದ ಖಾಯಂ ನಿವಾಸಿ ನಿಯಮಗಳನ್ನು ಬದಲಿಸಲು ರಾಜ್ಯಪಾಲರ ಪ್ರಯತ್ನ: ಪಕ್ಷಗಳ ಆರೋಪ](/images/placeholder.jpg)
ಶ್ರೀನಗರ,ಡಿ.2: ರಾಜ್ಯದಲ್ಲಿ ಖಾಯಂ ನಿವಾಸಿ ಪ್ರಮಾಣಪತ್ರವನ್ನು ನೀಡುವ ವಿಧಿವಿಧಾನಗಳನ್ನು ಬದಲಿಸಲು ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಪ್ರಯತ್ನಿಸುತ್ತಿದ್ದಾರೆಂದು ಕಾಶ್ಮೀರ ಕಣಿವೆಯಲ್ಲಿನ ರಾಜಕೀಯ ಪಕ್ಷಗಳು ಆರೋಪಿಸಿವೆ. ಖಾಯಂ ನಿವಾಸಿಸ್ಥಾನಮಾನವನ್ನು ನೀಡಲು ನಿಯಮಾವಳಿಗಳನ್ನು ಸರಳಗೊಳಿಸುವ ಪ್ರಯತ್ನಗಳು ನಡೆದಿವೆ ಮತ್ತು ರಾಜ್ಯಪಾಲರು ಈ ಬಗ್ಗೆ ಅಭಿಪ್ರಾಯಗಳನ್ನು ಕೋರಿ ಆಡಳಿತಾತ್ಮಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಖಾಯಂ ನಿವಾಸಿ ಸ್ಥಾನಮಾನವು ಕಾಶ್ಮೀರ ಕಣಿವೆಯಲ್ಲಿ ಅತ್ಯಂತ ಸೂಕ್ಷ್ಮ ವಿಷಯವಾಗಿದೆ.
ಖಾಯಂ ನಿವಾಸಿ ಸ್ಥಾನಮಾನವು ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿರುವ ಸಂವಿಧಾನದ 35ಎ ವಿಧಿಯೊಂದಿಗೆ ತಳುಕು ಹಾಕಿಕೊಂಡಿದೆ. ಅದು ಜಮ್ಮು-ಕಾಶ್ಮೀರದ ಖಾಯಂ ನಿವಾಸಿಗಳಾಗಲು ಅರ್ಹರಾಗಿರುವ ಜನರನ್ನು ವರ್ಗೀಕರಿಸುತ್ತದೆ.
ಈ ವಿಷಯವೀಗ ಕಾಶ್ಮೀರ ಕಣಿವೆಯಲ್ಲಿನ ರಾಜಕೀಯ ನಾಯಕರನ್ನು ಒಂದುಗೂಡಿಸಿದೆ. ಸರಳೀಕರಣದ ನೆಪದಲ್ಲಿ ನಿಯಮಗಳನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ಇದು ಹೊರಗಿನವರು ರಾಜ್ಯದಲ್ಲಿ ನಿವಾಸಿ ಸ್ಥಾನಮಾನವನ್ನು ಪಡೆಯಲು ಅವಕಾಶ ಕಲ್ಪಿಸಬಹುದು ಮತ್ತು ರಾಜ್ಯದ ಜನಸಂಖ್ಯಾ ಸ್ವರೂಪವನ್ನು ಬದಲಿಸುತ್ತದೆ ಎಂದಿರುವ ಅವರು,ಪ್ರಸ್ತುತ ಉಸ್ತುವಾರಿ ಅಧಿಕಾರವನ್ನು ಹೊಂದಿರುವ ರಾಜ್ಯಪಾಲರು ಪಾಲುದಾರರೊಂದಿಗೆ ಚರ್ಚಿಸದೆ ಯಾವುದೇ ಬದಲಾವಣೆಯನ್ನು ಮಾಡುವಂತಿಲ್ಲ ಎಂದು ವಾದಿಸಿದ್ದಾರೆ.