ಮಡಿಕೇರಿ: ಐವರಿಂದ ಕಡವೆ ಬೇಟೆ; ಓರ್ವನ ಬಂಧನ

ಮಡಿಕೇರಿ ಡಿ.2 : ಐದು ಮಂದಿಯ ತಂಡ ಮೀಸಲು ಅರಣ್ಯದಲ್ಲಿ ಕಡವೆಗೆ ಗುಂಡು ಹೊಡೆದು ಬೇಟೆಯಾಡಿ ಮಾಂಸವನ್ನು ಹಂಚಿ ಕೊಂಡಿರುವ ಘಟನೆ ವಿರಾಜಪೇಟೆ ಸಮೀಪದ ತೋರ ಗ್ರಾಮದಲ್ಲಿ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ.
ಅಲ್ಲದೆ ಆತನ ಬಳಿ ಇದ್ದ 20 ಕೆ.ಜಿ ಮಾಂಸ ಹಾಗೂ ಬಂದೂಕನ್ನು ವಶಪಡಿಸಿಕೊಂಡಿದ್ದು, ಉಳಿದ ನಾಲ್ಕು ಮಂದಿ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ತೋರ ಗ್ರಾಮದ ಬಳಿಯ ಮಾಕುಟ್ಟ ಮೀಸಲು ಅರಣ್ಯದಲ್ಲಿ ಐದು ಮಂದಿಯ ತಂಡ ಬೇಟೆಗೆಂದು ತೆರಳಿ ಕಡವೆಗೆ ಒಂಟಿ ನಳಿಕೆಯ ಕೋವಿಯಿಂದ ಗುಂಡು ಹೊಡೆದು ಕಡವೆಯನ್ನು ಕೊಂದಿತ್ತೆನ್ನಲಾಗಿದೆ.
ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ವಿರೇಂದ್ರ ಎಂಬಾತನನ್ನು ಬಂಧಿಸಿದ್ದು, ಆತನಿಂದ ಸುಮಾರು 20 ಕೆ.ಜಿ.ಮಾಂಸ ಮತ್ತು ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ವಿರೇಂದ್ರನಿಂದ ಮಾಹಿತಿ ಪಡೆದ ಅರಣ್ಯಧಿಕಾರಿಗಳು ಇದೀಗ ಐದು ಜನರ ಮೇಲೆ ವನ್ಯಮೃಗಗಳ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಾಲು ಮಾಡಿದ್ದು, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗೆ ಶೋಧ ನಡೆಸುತ್ತಿರುವುದಾಗಿ ವಲಯ ಅರಣ್ಯಧಿಕಾರಿ ಕಂಬೆಯಂಡ ಗೋಪಾಲ್ ತಿಳಿಸಿದ್ದಾರೆ.
ಇದೀಗ ಅರೋಪಿ ವಿರೇಂದ್ರನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಅದೇಶಿಸಿದ್ದಾರೆ.
ಕಾರ್ಯಾಚರಣೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಿಸ್ತುರಾಜ್, ಸಹ ಅರಣ್ಯ ಸಂರಕ್ಷಣಾಧಿಕಾರಿ ರೋಶಿನಿ, ವಲಯ ಅರಣ್ಯಧಿಕಾರಿ ಕೆ.ಗೋಪಾಲ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎನ್.ಪ್ರಶಾಂತ್ಕುಮಾರ್, ಆಶೋಕ್, ಹಾಗು ಆರ್.ಆರ್.ಟಿ ಸಿಬ್ಬಂದಿಗಳು ಭಾಗವಹಿಸಿದ್ದರು.







