ಭಟ್ಕಳ: ಪೊಲೀಸರ ಮಕ್ಕಳಿಗಾಗಿ ನಡೆದ ಕ್ರೀಡಾಕೂಟದಲ್ಲಿ ಸಂಭ್ರಮಿಸಿದ ಚಿಣ್ಣರು

ಭಟ್ಕಳ, ಡಿ. 3: ವರ್ಷಪೂರ್ತಿ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪೊಲೀಸರಿಗೆ ತಮ್ಮ ಮಕ್ಕಳ ಕ್ರೀಡಾ ಪ್ರತಿಭೆಗಳನ್ನು ಕಣ್ಣಾರೆ ಕಾಣುವ ಅವಕಾಶ ಇರುವುದಿಲ್ಲ. ಆದರೆ ಪೊಲೀಸರ ಮಕ್ಕಳಿಗಾಗಿಯೇ ಕ್ರೀಡಾಕೂಟ ನಡೆಸುವುದರ ಮೂಲಕ ಪೊಲೀಸರು ತಮ್ಮ ಮಕ್ಕಳ ಪ್ರತಿಭೆಗಳನ್ನು ಕಣ್ಣಾರೆ ಕಾಣುವಂತಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಆಹ್ಮದ್ ಮುಲ್ಲಾ ಹೇಳಿದರು.
ಅವರು ಇಲ್ಲಿನ ಪೊಲೀಸ್ ಪೆರೇಡ್ ಮೈದಾನದಲ್ಲಿ ಭಟ್ಕಳ ಉಪ ವಿಭಾಗದ ಪೊಲೀಸರ ಮಕ್ಕಳಿಗಾಗಿ ಎರ್ಪಡಿಸಲಾಗಿದ್ದ ಒಂದು ದಿನದ ಕ್ರೀಡಾ ಕೂಟವನ್ನು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಗತ್ತಿನಲ್ಲಿರುವ ಎಲ್ಲಾ ಜೀವಿಗಳಲ್ಲಿ ಮಾನವ ಅತ್ಯಂತ ಶ್ರೇಷ್ಟ ಜೀವಿಯಾಗಿದ್ದಾನೆ. ಪ್ರತಿಯೋರ್ವರಿಗೂ ಅತ್ಯಂತ ಮುಕ್ತವಾಗಿ ಅವಕಾಶ ದೊರೆಯುವಂತೆ ಮಾಡಿದಾಗ ಮಾತ್ರ ನಿಜವಾದ ಪ್ರತಿಭೆ ಹೊರಬರಲು ಸಾಧ್ಯವಾಗುವುದು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಅವರಿಗೆ ಅವಕಾಶ ಮಾಡಿಕೊಡಬೇಕು ಎಂದ ಅವರು, ಕ್ರೀಡಾ ಕೂಟದಲ್ಲಿ ಮಕ್ಕಳು ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು ತಮ್ಮ ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಲು ಕರೆ ನೀಡಿದರು.
ಕ್ರೀಡಾಕೂಟದಲ್ಲಿ ಮಕ್ಕಳಿಗೆ ಯಾವುದೇ ಕಟ್ಟುನಿಟ್ಟಿಲ್ಲದೇ ಭಾಗವಹಿಸುವ ಅವಕಾಶವಿದೆ. ಮಕ್ಕಳಲ್ಲಿ ಉದ್ದಜಿಗಿತ, ಓಟದಲ್ಲಿ, ಶಾಟ್ಪುಟ್ನಲ್ಲಿ ಆಸಕ್ತಿ ಇರುತ್ತದೆ. ಅವರವರ ಆಸಕ್ತಿಗನುಗುಣವಾಗಿ ಆಟವಾಡಲು ನಿಮಗೆ ಸಾಧ್ಯವಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ತಮ್ಮ ಸಂಸಾರದೊಂದಿಗೆ ಬೆರೆಯಲು ಅವಕಾಶ ದೊರೆಯುವುದು ಅತ್ಯಂತ ಕಡಿಮೆ ಇಂತಹ ಪರಿಸ್ಥಿತಿಯಲ್ಲಿ ಇಡೀ ಸಬ್ ಡಿವಿಜನ್ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು, ಅವರ ಮನೆಯವರು, ಮಕ್ಕಳು ಬಂದು ಒಂದು ದಿನ ಕಾಲ ಕಳೆದು ಹೋಗಲು ಅನುವು ಮಾಡಿಕೊಟ್ಟ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯಷ್ಟೇ ಮುಖ್ಯ ಕ್ರೀಡಾ ಪ್ರಗತಿಯಾಗಿದೆ. ಪೊಲೀಸರು ಒಂದು ದಿನವಾದರೂ ತಮ್ಮ ಪತ್ನಿ, ಮಕ್ಕಳೊಂದಿಗೆ ಮುಕ್ತವಾಗಿ ಭಾವಹಿಸಲಿ ಎನ್ನುವ ಕಾರಣದಿಂದ ಇಲಾಖೆ ಕ್ರೀಡಾ ಕೂಟವನ್ನು ಎರ್ಪಡಿಸುತ್ತಿದ್ದು ಎಲ್ಲರೂ ಅತ್ಯಂತ ಸಂತಸದಿಂದ ಭಾಗವಹಿಸಿದ್ದಾರೆ. ಕ್ರೀಡಾಕೂಟದಲ್ಲಿ ಮಕ್ಕಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ನಮ್ಮ ಉಪ ವಿಭಾಗಕ್ಕೆ ಉತ್ತಮ ಹೆಸರು ತರಲಿ ಎಂದರು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ವಿಭಾಗದ ಉಪಾಧೀಕ್ಷಕ ವೆಲೆಂಟೈನ್ ಡಿಸೋಜ ವಹಿಸಿದ್ದರು. ವೇದಿಕೆಯಲ್ಲಿ ಭಟ್ಕಳ ವೃತ್ತ ನಿರೀಕ್ಷಕ ಗಣೇಶ ಕೆ.ಎಲ್., ಉಪ ವಿಭಾಗದ ಉಪ ನಿರೀಕ್ಷರುಗಳು ಉಪಸ್ಥಿತರಿದ್ದರು.
ಸಿ.ಪಿ.ಐ. ಗಣೇಶ ಕೆ.ಎಲ್. ಸ್ವಾಗತಿಸಿದರು. ಮಾರುತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ನಗರ ಠಾಣೆಯ ಉಪನಿರೀಕ್ಷಕ ಕುಸುಮಾಧರ ವಂದಿಸಿದರು. ಕಾರ್ಯಕ್ರಮದಲ್ಲಿ ಭಟ್ಕಳ ಉಪವಿಭಾಗದ ಠಾಣೆಗಳ ಸಿಬ್ಬಂದಿಗಳ ಮಕ್ಕಳು ಭಾಗವಹಿಸಿದ್ದರು.