ವಿಕಲ ಚೇತನರ ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯದ ಬಗ್ಗೆ ಚಿಂತನೆ:ಯು.ಟಿ.ಖಾದರ್
ವಿಶ್ವ ವಿಕಲ ಚೇತನರ ದಿನಾಚರಣೆ
ಮಂಗಳೂರು, ಡಿ. 3: ವಿಕಲ ಚೇತನರ ಸಬಲೀಕರಣಕ್ಕಾಗಿ ಪ್ರತ್ಯೇಕ ಇಲಾಖೆ ಮತ್ತು ಸಚಿವಾಲಯವನ್ನು ಆರಂಭಿಸುವ ಬೇಡಿಕೆಯ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆದು ಪ್ರಯತ್ನಿಸುವುದಾಗಿ ರಾಜ್ಯ ವಸತಿ, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಮಧಿ ನಗರ ಮತ್ತು ವಿಕಲಚೇತನರಿಗೆ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಗರದ ಬೆಂದೂರ್ವೆಲ್ನಲ್ಲಿರುವ ಸಂತ ಸೆಬಾಸ್ಟಿನ್ ಸಭಾಭವನದಲ್ಲಿಂದು ಹಮ್ಮಿಕೊಂಡ ವಿಶ್ವ ವಿಕಲ ಚೇತನರ ದಿನಾಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಎಲ್ಲಾ ಮಕ್ಕಳಂತೆ ತಮ್ಮ ಮ್ಕಳು ಸ್ವಾಭಿಮಾನಿಗಳಾಗಿ ಬದುಕುವಂತಾಗಬೇಕು ಎನ್ನುವುದು ವಿಶೇಷ ಮಕ್ಕಳ ಹೆತ್ತವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಅವರ ಸಬಲೀಕರಣಕ್ಕಾಗಿ ಪ್ರತ್ಯೇಕ ಇಲಾಖೆ ಮತ್ತು ಸಚಿವಾಲಯವನ್ನು ಆರಂಭಿಸಬೇಕು ಎನ್ನುವು ಬೇಡಿಕೆಯ ಹಿನ್ನೆಲೆಯಲ್ಲಿ ಸರಕಾರದ ಹಂತದಲ್ಲಿ ಸಮಾಲೋಚನೆ ನಡೆಸುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ವಿಶೇಷ ಮಕ್ಕಳ ಶಾಲೆಗಳಿಗೆ ಸಂಬಂಧಿಸಿದಂತೆ ಈಗ ನೀಡುತ್ತಿರುವ ಅನುದಾನದಲ್ಲಿ ತಾರತಮ್ಯವಿದೆ ಅದನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಸಚಿವ ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ವಿಶೇಷ ಮಕ್ಕಳ ರಾಷ್ಟ್ರ ಮಟ್ಟದ ಕ್ರೀಡಾಕೂಟ
ಮಂಗಳೂರಿನಲ್ಲಿ ವಿಶೇಷ ಮಕ್ಕಳಿಗಾಗಿ ರಾಷ್ಟ್ರ ಮಟ್ಟದ ಕ್ರೀಡಾ ಕೂಟವನ್ನು ಸಂಘಟಿಸುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಕ್ಷೀರ ಭಾಗ್ಯ ಯೋಜನೆಯನ್ನು ಅನುದಾನ ರಹಿತ ವಿಶೇಷ ಶಾಲೆಗಳ ಮಕ್ಕಳಿಗೂ ವಿಸ್ತರಿಸಬೇಕು ಎನ್ನುವ ಬೇಡಿಕೆಯನ್ನು ಸರಕಾರದ ಹಂತದಲ್ಲಿ ಪರಿಗಣಿಸುವ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ವಿಕಲ ಚೇತನ ಎನ್ನುವುದು ಶಾಪವಲ್ಲ ಈ ಮಕ್ಕಳಿಗೆ ಎಲ್ಲಾ ಮಕ್ಕಳ ರೀತಿಯಲ್ಲಿ ಮುಂದೆ ಬರಲು ವಿಶೇಷ ಕಾಳಜಿ ಮತ್ತು ಅವಕಾಶ ಕಲ್ಪಿಸಬೇಕಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಶುಭ ಹಾರೈಸಿದರು.
ವಿಶೇಷ ಮಕ್ಕಳ ಶಾಲೆ ಗಳ ಬೇಡಿಕೆ:- ವಿಶೇಷ ಮಕ್ಕಳ ಶಾಲೆಗಳಲ್ಲಿ 18ವರ್ಷದವರೆಗಿ ನ ಮಕ್ಕಳಿಗೆ ಮಾತ್ರ ವಸತಿ ಸಹಿತ ಶಾಲೆ ನಡೆಸಲು ಅವಕಾಶ ಇತ್ತು ಅದನ್ನು 25 ವರ್ಷಕ್ಕೆ ಏರಿಸಲಾಗಿದೆ ಆದರೆ ಬಳಿಕ ಅವರ ಬಗ್ಗೆ ಯಾವೂದೇ ಆರೈಕೆ ಮಾಡುವ ವ್ಯವಸ್ಥೆ ಇಲ್ಲದಿದ್ದರೆ ಅವರು ವಿವಿಧ ರೀತಿಯ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಯೋಮಾನದ ಮಿತಿ ಇಲ್ಲದೆ ವಿಶೇಷ ಸಾಮರ್ಥ್ಯದ ಪುರುಷ ಅಥವಾ ಮಹಿಳೆಯನ್ನು ವಿಶೇಷ ವಸತಿ ಶಾಲೆಗಳಲ್ಲಿ ಸೇರಿಸಲು ಅವಕಾಶ ಕಲ್ಪಿಸಬೇಕು ಎಂದು ಸಂಘಟಕರಾದ ವಸಂತ್ ಕುಮಾರ್ ಶೆಟ್ಟಿ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲನ ಗೌಡ ಪಾಟೀಲ್ ಶುಭ ಹಾರೈಸಿದರು. ವಿಶ್ವ ವಿಕಲಚೇತನರ ದಿನದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕಸ್ತೂರಿ ಪಂಜ ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ , ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ, ಕಾರ್ಯಕ್ರಮದ ಪ್ರತಿನಿಧಿಗಳಿಗೆ ಉಪಹಾರದ ವ್ಯವಸ್ಥೆಗೆ ಸಹಾಯ ನೀಡಿದ ಗಣೇಶ್ ಶೆಟ್ಟಿ, ಅಂಗವಿಕಲರ ಒಕ್ಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ, ಕಲಾವಿದರ ತಂಡದ ಮುಖಂಡ ಜಗದೀಶ್ ಶೆಟ್ಟಿ, ಗಾಂಧಿನಗರದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜಗದೀಶ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಉಪ ನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು.
ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಯಮುನಾ ವಂದಿಸಿದರು. ಶಕ್ತಿನಗರದ ಸಾನಿಧ್ಯ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







