ಫಾರ್ಮಾಲಿನ್ ಲೇಪದ ಮೀನುಗಳ ಬಗ್ಗೆ ಜಂಟಿ ಇಲಾಖಾ ಪರೀಕ್ಷೆ: ಉಡುಪಿ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ನಿರ್ಧಾರ

ಉಡುಪಿ, ಡಿ.4: ಫಾರ್ಮಾಲಿನ್ ಲೇಪದ ಆರೋಪದಡಿ ಮಲ್ಪೆಯ ಮೀನುಗಳಿಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಗ್ರಾಹಕರು ಹಾಗೂ ಹೊರ ರಾಜ್ಯದವರಲ್ಲಿ ವಿಶ್ವಾಸ ಮೂಡಿಸಲು ಉಡುಪಿಯ ಮೀನುಗಾರಿಕೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಮಲ್ಪೆ ಬಂದರಿನಲ್ಲಿ ಮೀನುಗಳ ಪರೀಕ್ಷೆ ನಡೆಸುವ ಕುರಿತು ಇಂದು ಉಡುಪಿ ತಾಪಂ ಸಭಾಂಗಣದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಯಿತು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ಎರಡೂ ಇಲಾಖೆ ಯವರು ಆಗಾಗ ಮಲ್ಪೆ ಬಂದರಿಗೆ ಭೇಟಿ ನೀಡಿ ಕೇಂದ್ರ ಸರಕಾರ ನೀಡಿರುವ ಕಿಟ್ ಮೂಲಕ ಮೀನುಗಳಲ್ಲಿ ಫಾರ್ಮಾಲಿನ್ ಅಂಶ ಇದೆಯೇ ಎಂಬುದರ ಬಗ್ಗೆ ಪರೀಕ್ಷಿಸಿ ಪ್ರಮಾಣಪತ್ರ ನೀಡಬೇಕು. ಇದರಿಂದ ಮಲ್ಪೆಯ ಮೀನುಗಳಲ್ಲಿ ಫಾರ್ಮಾಲಿನ್ ಅಂಶಗಳಿಲ್ಲ ಎಂಬುದು ಸಾಬೀತಾಗಿ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದು ತಿಳಿಸಿದರು.
ಮತ್ಸಾಶ್ರಯ ಯೋಜನೆಯಡಿ 2017-18ನೆ ಸಾಲಿನಲ್ಲಿ ತಾಲೂಕಿಗೆ 120 ಮನೆಗಳು ಮಂಜೂರಾಗಿದ್ದು, ಇನ್ನಷ್ಟೇ ಅನುದಾನ ಬಿಡುಗಡೆಯಾಗಬೇಕಾ ಗಿದೆ. 2018-19ನೆ ಸಾಲಿನಲ್ಲಿ ಯಾವುದೇ ಮನೆಗಳು ಮಂಜೂರಾಗಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಮತ್ಸಾಶ್ರಯ ಯೋಜನೆಯ ಮನೆಗಳ ಅನುಷ್ಠಾನವನ್ನು ರಾಜೀವ ಗಾಂಧಿ ವಸತಿ ನಿಗಮದ ಬದಲು ಈ ಹಿಂದಿನಂತೆ ಮೀನುಗಾರಿಕೆ ಇಲಾಖೆಯೇ ಮಾಡಬೇಕು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕೆಂದು ರಘುಪತಿ ಭಟ್ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಅಭಿವೃದ್ಧಿಗೆ ಮಂಜೂರು: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಮೊದಲ ಹಂತದ ಬ್ರಹ್ಮಾವರದಿಂದ ಹೆಬ್ರಿವರೆಗಿನ 21.95 ಕಿ.ಮೀ. ಉದ್ದದ 11 ಮೀಟರ್ ಅಗಲದ ರಸ್ತೆ ಕಾಮಗಾರಿಗೆ 35.15ಕೋಟಿ ರೂ. ಮಂಜೂರಾಗಿದೆ. ಎರಡನೆ ಹಂತದಲ್ಲಿ ಕೆ.ಜಿ.ರೋಡ್- ಕುಕ್ಕೆಹಳ್ಳಿ ರಸ್ತೆಗೆ 6 ಕೋಟಿ ರೂ. ಹಾಗೂ ಮೂರನೆ ಹಂತದಲ್ಲಿ ಕೆಂಜೂರು- ನಾಲ್ಕೂರು- ಶಿರೂರು ರಸ್ತೆಗೆ 8.5ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.
173 ಕಿ.ಮೀ. ರಸ್ತೆಗಳ ಪೈಕಿ 30ಕಿ.ಮೀ. ರಸ್ತೆಗಳ ಹೊಂಡ ಮುಚ್ಚುವ ಕಾರ್ಯ ನಡೆದಿದ್ದು, ಉಳಿದ ರಸ್ತೆಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸ ಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ನಾಲ್ಕೂರು ಹಾಗೂ ಆರೂರು ಗ್ರಾಪಂ ವ್ಯಾಪ್ತಿಯಲ್ಲಿ ಪಶು ಚಿಕಿತ್ಸಾಲಯ ಸ್ಥಾಪಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಶಾಸಕ ರಘುಪತಿ ಭಟ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಗೆ ಗೈರು ಹಾಜರಾದ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಶಾಸಕ ಕೆ.ರಘುಪತಿ ಭಟ್, ಅಧಿಕಾರಿಗಳಿಗೆ ತಾಲೂಕು ಕೆಡಿಪಿ ಸಭೆ ಮುಖ್ಯ ಅಲ್ಲವೇ. ಇದಕ್ಕಿಂತ ಬೇರೆ ಸಭೆಗಳು ಅವರಿಗೆ ಮುಖ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು. ಮುಂದೆ ಹಿರಿಯ ಅಧಿಕಾರಿಗಳು ಸಭೆಗೆ ಹಾಜರಾಗ ದಿದ್ದರೆ ಗಂಭೀರ ಚರ್ಚೆ ಹಾಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಹಣ್ಣಿನ ಸಸಿಗಳಿಗೆ ಆದ್ಯತೆ: ಆಹಾರ ಹುಡುಕಿಕೊಂಡು ನಾಡಿಗೆ ಬರುತ್ತಿ ರುವ ಮಂಗಗಳ ಹಾವಳಿ ಕಡಿಮೆ ಮಾಡಲು ಅರಣ್ಯ ಪ್ರದೇಶ ಹಾಗೂ ಖಾಲಿ ಜಾಗಗಳಲ್ಲಿ ಅಕೇಶಿಯಾ ಬದಲು ಹಣ್ಣು ಹಂಪಲುಗಳ ಗಿಡಗಳನ್ನು ನೆಡಬೇಕು ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ ಒತ್ತಾಯಿಸಿದರು.
ಇದಕ್ಕೆ ಪ್ರತ್ರಿಯಿಸಿದ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ, ಇಲಾಖೆಯ ಸಸ್ಯ ಕ್ಷೇತ್ರಗಳಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಅಕೇಶಿಯಾ ಗಿಡ ಬೆಳೆಸುವುದನ್ನು ಸ್ಥಗಿತಗೊಳಿಸಲಾಗಿದೆ. ಈಗ ಎಲ್ಲ ಕಡೆ ಹಣ್ಣಿನ ಗಿಡಗಳನ್ನು ನೆಡಲಾಗುತ್ತಿದೆ. ಈಗಾಗಲೇ ನೆಡಲಾದ ಅಕೇಶಿಯಾ ಮರಗಳಿಗೆ 12-14ವರ್ಷಗಳಾದರೆ ಅವುಗಳನ್ನು ಕಟಾವು ಮಾಡಲಾಗುತ್ತಿದೆ. ಈಗ ಎಲ್ಲ ಕಡೆ ಅಕೇಶಿಯಾ ಮರಗಳು ಕಡಿಮೆಯಾಗುತ್ತಿದೆ ಎಂದರು.
ನಿವೇಶನ ಹಂಚಿಕೆ ಸಂಬಂಧ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ನಿವೇಶನಗಳನ್ನು ಗುರುತಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಭೆ ಕರೆದು ಚರ್ಚಿಸಬೇಕಾಗಿದೆ. ಇದಕ್ಕೆ ಅಧಿ ಕಾರಿಗಳು ಪ್ಲಾನ್ ಜೊತೆ ಹಾಜರಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು. ನಿವೇಶನ ಹಂಚಿಕೆಯ ಸಂದರ್ಭ ಎರಡು ಮೂರು ನಿವೇಶನವನ್ನು ಸರಕಾರಿ ಕಾರ್ಯಕ್ರಮಕ್ಕಾಗಿ ಮೀಸಲಿಡಬೇಕು. ಅಲ್ಲಿ ಸಮುದಾಯ ಭವನ, ಅಂಗನವಾಡಿಗಳನ್ನು ನಿರ್ಮಿಸಬಹುದಾಗಿದೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಸಲಹೆ ನೀಡಿದರು.
ಸಭೆಯಲ್ಲಿ ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಕಾರ್ಯನಿರ್ವಹಣಾಧಿಕಾರಿ ಕೆ.ರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ರಾಜ್, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಉಪಸ್ಥಿತರಿದ್ದರು.
ಸಾವಯವ- ರೈತರ ಸಂತೆ ಆರಂಭಿಸಿ
ದೊಡ್ಡಣಗುಡ್ಡೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಆರಂಭಿಸಿರುವ ಸಾವಯವ ಸಂತೆಯನ್ನು ಮತ್ತೆ ಆರಂಭಿಸಬೇಕು. ಅದರ ಜೊತೆ ವಾರಕ್ಕೆ ಒಂದು ದಿನ ನಿಗದಿ ಪಡಿಸಿ ರೈತರ ಸಂತೆಯನ್ನು ಕೂಡ ಅಲ್ಲೇ ಜಾಗ ಗುರುತಿಸಿ ಮಾಡ ಬೇಕು ಎಂದು ಶಾಸಕ ಕೆ.ರಘುಪತಿ ಭಟ್ ತೋಟಗಾರಿಕಾ ಇಲಾಖೆಯ ಅಧಿ ಕಾರಿಗಳಿಗೆ ಸೂಚನೆ ನೀಡಿದರು.
ರೈತರ ಪ್ರೋತ್ಸಾಹ ಇಲ್ಲದ ಕಾರಣ ಸವಾಯವ ಸಂತೆಯನ್ನು ಸ್ಥಗಿತಗೊಳಿಸ ಲಾಗಿದ್ದು, ರೈತ ಸಂತೆಗೆ ಆರಂಭಿಸುವ ಬಗ್ಗೆ ಎರಡು ಬಾರಿ ಅರ್ಜಿ ಆಹ್ವಾನಿಸಿ ದರೂ ರೈತರಿಂದ ಸರಿಯಾದ ಸ್ಪಂದನೆ ಬರಲಿಲ್ಲ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ದೊಡ್ಡಣಗುಡ್ಡೆ ಪರಿಸರಕ್ಕೆ ಸಾವಯವ ಸಂತೆ ಹಾಗೂ ವಾರದ ಸಂತೆ ಅತಿ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳ ಬೇಕು ಎಂದು ರಘುಪತಿ ಭಟ್ ತಿಳಿಸಿದರು.