ಎಲ್ಲರನ್ನು ಒಗ್ಗೂಡಿಸುವ ಏಕಸೂತ್ರವೇ ವೇದ: ಪೇಜಾವರಶ್ರೀ
ಕ್ಷೇತ್ರೀಯ ವೇದ ಸಮ್ಮೇಳನ ಪ್ರಾರಂಭ

ಉಡುಪಿ, ಡಿ.4: ವೇದ ಅಪೌರುಷೇಯ. ಅದನ್ನು ಯಾರೂ ಮಾಡಿಲ್ಲ ಎಂದು ಹೇಳಲಾಗುತ್ತದೆ. ಶರೀರವಿಲ್ಲದ ದೇವರು ಈ ಜಗತ್ತಿನ ಸೃಷ್ಟಿ ಮಾಡಿದ್ದಾನೆ ಎಂಬುದನ್ನು ಈ ಭೂಮಿ ಮೇಲಿನ ಎಲ್ಲಾ ಧರ್ಮಗಳು ನಂಬುತ್ತವೆ. ಹೀಗಾಗಿ ಪುರುಷನೇ ಇಲ್ಲದ ವಾಕ್ಯಗಳು ಯಾಕೆ ಇರಬಾರದು ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಹೇಳಿದ್ದಾರೆ.
ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನದ ವತಿಯಿಂದ ಪರ್ಯಾಯ ಪಲಿಮಾರು ಮಠ, ಉಡುಪಿಯ ಎಸ್ಎಂಎಸ್ಪಿ ಸಂಸ್ಕೃತ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಮಂದಿರ ಇವುಗಳ ಸಂಯುಕ್ತ ಸಹಭಾಗಿತ್ವದಲ್ಲಿ ಡಿ.4ರಿಂದ 6ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸ ಲಾಗಿರುವ ಕ್ಷೇತ್ರೀಯ ವೇದ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ನಾಸ್ತಿಕರನ್ನು ಹೊರತು ಪಡಿಸಿ ಜಗತ್ತಿನ ಎಲ್ಲಾ ಧರ್ಮಗಳು ದೇವರ ಅಸ್ತಿತ್ವವನ್ನು ಒಪ್ಪಿಕೊಂಡಿವೆ. ಧರ್ಮವನ್ನು ನಂಬಿದ ಮೇಲೆ ಅಪೌರುಷವಾದ ವೇದವನ್ನು ಒಪ್ಪದೇ ಹೋದರೆ, ಧರ್ಮ-ಅಧರ್ಮ ತೀರ್ಮಾನ ಸಾಧ್ಯವಿಲ್ಲ. ವೈದಿಕತೆಯ ಜ್ಞಾನವಿಲ್ಲದೇ ಜಗತ್ತು ಇರಲು ಸಾಧ್ಯವಿಲ್ಲ. ಎಲ್ಲರನ್ನು ಒಂದು ಗೂಡಿಸುವುದೇ ವೇದ. ಅದೇ ಏಕಸೂತ್ರ. ಐಕ್ಯಮತಕ್ಕೆ ವೇದವೇ ಕಾರಣ ಎಂದು ಪೇಜಾವರಶ್ರೀ ತಿಳಿಸಿದರು.
ಹಿಂದೂ ಧರ್ಮದ ಮೂಲವೇ ವೇದ. ಎಲ್ಲಾ ಮತಸ್ಥರನ್ನು ಒಂದುಗೂಡಿಸುವ ಸೂತ್ರವೇ ವೇದವಾಗಿದ್ದು, ಜಗತ್ತೆಂಬ ವೃಕ್ಷದ ಎಲೆಗಳಾಗಿವೆ. ವರ್ಣರಹಿತ ವೃಕ್ಷ ನಿರ್ಜೀವವಾಗಿರುವಂತೆ ವೇದಗಳ ಅರಿವಿಲ್ಲದ ಬದುಕು ಶೂನ್ಯ. ಹೀಗಾಗಿ ಎಲ್ಲರಿಗೂ ವೇದವಿದ್ಯೆಯ ಜ್ಞಾನ ಅಗತ್ಯಗತ್ಯ ಎಂದು ಪೇಜಾವರಶ್ರೀ ಪ್ರತಿಪಾದಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು ಮಾತನಾಡಿ, ವೇದವು ಅಪೌರುಷೇಯವಾದ್ದರಿಂದ ಅದು ಎಂದೂ ಅಪ್ರಮಾಣವಾಗಲಾರದು. ವೇದಪಂಡಿತರ ಪರಿಶ್ರಮದಿಂದ ವೇದಗಳು ರಕ್ಷಿಸಲ್ಪಟ್ಟಿವೆ. ವೇದಪಾಠದ ಜೊತೆಗೆ ಅದರ ಅರ್ಥದ ಕುರಿತೂ ಗಮನ ಹರಿಸುವ ಅಗತ್ಯವಿದೆ.14ನೇ ಶತಮಾನದಲ್ಲಿ ಸಾಯಣಾಚಾರ್ಯರು ವೇದಗಳಿಗೆ ಭಾಷ್ಯವನ್ನು ಬರೆದಿದ್ದಾರೆ. ಇದರಲ್ಲಿ ಕರ್ಮಕಾಂಡಕ್ಕೆ ಪ್ರಾಧಾನ್ಯತೆ ಇದೆ. ಆಚಾರ್ಯ ಮಧ್ವರು ವೇದಕ್ಕೆ ಅಧ್ಯಾಪ್ಮಪರ, ವಿಷ್ಣುಪರ, ದೇವತಾಪರ ಹೀಗೆ ಮೂರು ಅರ್ಥಗಳಿವೆ ಎಂದು ನಿರೂಪಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಸಮಗ್ರ ವೇದದಿಂದ ಪ್ರತಿಪಾದ್ಯನಾದವನು ಭಗವಂತ ಎಂದು ಕೃಷ್ಣನೇ ಗೀತೆಯಲ್ಲಿ ಹೇಳಿದ್ದಾನೆ ಎಂದರು.
ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಉಪಕುಲಪತಿ ಪ್ರೊ. ಮುರಳೀಧರ ಶರ್ಮ, ಉಜ್ಜಯಿನಿ ಮಹರ್ಷಿ ಸಾಂದೀಪನಿ ವೇದವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ರವೀಂದ್ರ ಅಂಬಾದಾಸ ಮುಳೆ ಅವರು ಸಭೆಯ ನ್ನುದ್ದೇಶಿಸಿ ಮಾತನಾಡಿದರು.
ಹಿರಿಯ ವೇದ-ಶಾಸ್ತ್ರ ಪಂಡಿತರಾದ ಶೃಂಗೇರಿಯ ವಿದ್ವಾನ್ ವಿನಾಯಕ ಉಡುಪ ಇವರನ್ನು ಸನ್ಮಾನಿಸಲಾಯಿತು. ವಿದ್ವಾಂಸರಾದ ಕೇರಳದ ಪ್ರೊ.ರಾಮಕೃಷ್ಣ ಭಟ್ ಉಪಸ್ಥಿತರಿದ್ದರು.
ಉಡುಪಿ ಎಸ್ಎಂಎಸ್ಪಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್.ಲಕ್ಷ್ಮೀನಾರಾಯಣ ಭಟ್ಟ ಅತಿಥಿಗಳನ್ನು ಸ್ವಾಗತಿಸಿದರೆ, ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಡಾ.ಆನಂದತೀರ್ಥ ವಿ.ನಾಗಸಂಪಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕೃತ ಕಾಲೇಜಿನ ವೇದಾಂತ ಪ್ರಾಧ್ಯಾಪಕ ಪ್ರೊ.ಷಣ್ಮುಖ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ, ನ್ಯಾಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಸತ್ಯನಾರಾಯಣ ವೆಂಕಟರಾವ್ ವಂದಿಸಿದರು.