ಬೆಂಗಳೂರು: ಗುಂಡು ಹಾರಿಸಿ ಕೊಲೆ ಆರೋಪಿಯ ಬಂಧನ
ಬೆಂಗಳೂರು, ಡಿ.4: ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪದಡಿ ಯುವಕನೋರ್ವನನ್ನು ಹೆಣ್ಣೂರು ಠಾಣಾ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿ ಚಾಲಕ ಕೇಶವ್ ಎಂಬುವವರ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಅಭಿಷೇಕ್(19) ಗುಂಡೇಟು ತಿಂದ ಯುವಕನಾಗಿದ್ದು, ಸದ್ಯ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಕಳೆದ ಹಲವು ದಿನಗಳ ಹಿಂದೆ ಹೆಣ್ಣೂರು ವ್ಯಾಪ್ತಿಯಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಹೆಣ್ಣೂರು ಠಾಣಾ ಪೊಲೀಸರಿಗೆ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿತ್ತು. ಆತ ಎಲ್ಲಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕುವಾಗ ಹೆಣ್ಣೂರು ಬಂಡೆ ಬಳಿ ಇರುವ ಬಗ್ಗೆ ಎಸ್ಸೈ ಕುಲಕರ್ಣಿ ಅವರಿಗೆ ಗೊತ್ತಾಗಿದ್ದು, ತಕ್ಷಣ ಅವರು ಕಾರ್ಯಾಚರಣೆ ಕೈಗೊಂಡಿದ್ದರು ಎನ್ನಲಾಗಿದೆ.
ಪೊಲೀಸರನ್ನು ಕಂಡ ಆರೋಪಿ ಅಭಿಷೇಕ್ ಅಲ್ಲಿಂದ ಓಡಲು ಪ್ರಾರಂಭಿಸಿದ. ಆತನನ್ನು ಬೆನ್ನಟ್ಟಿದ ಪೊಲೀಸ್ ಪೇದೆ ಸಂತೋಷ್ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ತಕ್ಷಣ ಎಚ್ಚೆತ್ತ ಎಸ್ಸೈ ಕುಲಕರ್ಣಿ ಅವರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ