ರೈತರು ಹನಿ ನೀರಾವರಿ ಬಳಕೆಗೆ ಹೆಚ್ಚು ಒತ್ತು ನೀಡಬೇಕು: ಸಂಸದೆ ಶೋಭಾ

ಚಿಕ್ಕಮಗಳೂರು, ಡಿ.4: ಹನಿ ನೀರಾವರಿ ಪದ್ದತಿ ಯೋಜನೆಯನ್ನು ಸ್ಥಳಿಯ ರೈತರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ರೈತರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಕಿವಿಮಾತು ಹೇಳಿದರು.
ತರೀಕೆರೆ ತಾಲೂಕಿನ ನರಸೀಪುರದಲ್ಲಿ ಜೈನ್ ಡ್ರಿಪ್ ಇರಿಗೇಷನ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ರೈತರ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಹನಿ ನೀರಾವರಿ ಪದ್ದತಿ ಯೋಜನೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಲಸಂಪನ್ಮೂಲವನ್ನು ಉಳಿಸುವ ಉದ್ದೇಶ ಕಡಿಮೆ ನೀರನ್ನು ಬಳಸಿ ಹೆಚ್ಚು ಬೆಳೆಯನ್ನು ಬೆಳೆಯಲು ಅನುಕೂಲವಾಗುವ ಹನಿ ನೀರಾವರಿ ಪದ್ದತಿ ಯೋಜನೆಗೆ ಕೇಂದ್ರ ಸರ್ಕಾರ ಶೇ.90 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.10 ರಷ್ಟು ಅನುದಾನ ನೀಡುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗದ ರೈತರಿಗೆ ಹನಿ ನೀರಾವರಿ ಪದ್ದತಿಯನ್ನು 287 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಆರ್ಥಿಕವಾಗಿ ಸಬಲರಾಗಬೇಕೆಂದರು.
ಈ ಭಾಗದ ರೈತರು ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಂದ ಅಂತರ್ಜಲ ಕುಸಿತ ಉಂಟಾಗಲಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಗೆ ವಿರೋಧಿಸಿದ್ದರು. ಅವರಿಗೆ ತೊಂದರೆ ಉಂಟಾಗಬಾರದೆಂಬ ಉದ್ದೇಶದಿಂದ ಸರ್ಕಾರವೇ 2009ರಲ್ಲಿ ಹನಿ ನೀರಾವರಿ ಯೋಜನೆ ಪದ್ದತಿಯನ್ನು ಜಾರಿಗೆ ತಂದಿದ್ದು, ಆದರೆ ಕಳೆದ ನಾಲ್ಕೂವರೆ ವರ್ಷಗಳಿಂದ ಈ ಯೋಜನೆ ಅಭಿವೃದ್ಧಿ ಕಾರ್ಯ ಕುಸಿತಗೊಂಡಿತ್ತು. ಸ್ಥಳಿಯ ಶಾಸಕ ಡಿ.ಎಸ್.ಸುರೇಶ್ ಈ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದ ಫಲವಾಗಿ ಇಂದು ಈ ಕಾಮಗಾರಿ ಚಾಲನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಒಟ್ಟು 16394 ಎಕರೆಗೆ ಹನಿ ನೀರಾವರಿ ಯೋಜನೆ ಪದ್ದತಿಯನ್ನು ಅಳವಡಿಸಲಾಗುತ್ತಿದ್ದು, 13883 ರೈತರಿಗೆ ಅನುಕೂಲವಾಗಲಿದೆ. ಮೊದಲನೆ ಹಂತದ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಲು ಮತ್ತು ಪೂರ್ಣಗೊಳಿಸಲು ಎರಡು ವರ್ಷದ ಅವಧಿಯನ್ನು ನಿಗಧಿಗೊಳಿಸಲಾಗಿದ್ದು, ಜೈನ್ ಡ್ರಿಪ್ ಇರಿಗೇಷನ್ ಕಂಪನಿಯು ಈ ಕಾರ್ಯವನ್ನು ಮಾಡುತ್ತಿದ್ದು, ನಂತರದ ಐದು ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ. ಈ ಯೋಜನೆಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಪ್ರತಿ ತಿಂಗಳು ಕಂಪನಿಯು ಹಾಗೂ ಸಂಬಂಧಿಸಿದ ಅಭಿಯಂತರರು ಮಾಹಿತಿಯನ್ನು ನೀಡಬೇಕೆಂದು ತಿಳಿಸಲಾಗಿದೆ ಎಂದರು.
ಜಿ.ಪಂ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗಳ ಕಾಲುವೆಗಳಿಂದಾಗಿ ರೈತರು ತಮ್ಮ ಜಮೀನುಗಳಲ್ಲಿ ಅಂತರ್ಜಲ ಕುಸಿಯುತ್ತದೆ ಎಂಬ ಆತಂಕಕ್ಕೊಳಗಾಗಿದ್ದರು. ಇದನ್ನು ದೂರ ಮಾಡಲು ಅಂದಿನ ಮುಖ್ಯಮಂತ್ರಿಗಳು ಹನಿ ನೀರಾವರಿ ಪದ್ದತಿಯನ್ನು ಜಾರಿಗೆ ತರುವುದರ ಮೂಲಕ ರೈತರ ಆತಂಕವನ್ನು ದೂರ ಮಾಡಿದರು ಎಂದು ತಿಳಿಸಿದರು.
ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ರೈತರು ಈ ಯೋಜನೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಕಂಪನಿಯ ಐದು ವರ್ಷ ನಿರ್ವಹಣೆ ಮುಗಿದ ನಂತರ ಕೋ ಆಪರೇಟಿವ್ ಸೊಸೈಟಿಗಳನ್ನು ಮಾಡಿಕೊಂಡು ರೈತರೇ ಇದರ ನಿರ್ವಹಣೆಯನ್ನು ಮಾಡಬೇಕೆಂದರು.
ಇದರ ನಿರ್ವಾಹಣೆಗೆ ಸರ್ಕಾರ ಹಣ ನೀಡಲಿದೆ ಅದರ ಜೊತೆಗೆ ರೈತರು ಸಹ ಹಣವನ್ನು ಕ್ರೋಢೀಕರಿಸಿಕೊಂಡು ಮಾಡುವುದರಿಂದ ಇದರ ನಿರ್ವಹಣೆ ಅತ್ಯಂತ ಸರಳವಾಗಿ ಮಾಡಲು ಸಾಧ್ಯವಾಗುತ್ತದೆ ಎಂದ ಅವರು ಹನಿ ನೀರಾವರಿ ಪದ್ದತಿ ಯೋಜನೆಯ ಅನುಷ್ಠಾನದ ಕಾಮಗಾರಿಗೆ ರೈತರು ಸಹಕರಿಸಿದಲ್ಲಿ ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತರೀಕೆರೆ ತಾ.ಪಂ ಅಧ್ಯಕ್ಷೆ ಪದ್ಮಾವತಿ ಸಂಜೀವಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ ವತಿಯಿಂದ ನೀಡುವ ಸಾಮಾಜಿಕ ಭದ್ರತೆಯ ಯೋಜನೆಗಳಾದ ಸಂಧ್ಯಾ ಸುರಕ್ಷಾ, ಪಿಂಚಣಿ ಸೌಲಭ್ಯ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ಗಳನ್ನು ನೀಡಲಾಯಿತು. ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಮಂಜುಳ, ಸ್ಥಾಯಿ ಸಮಿತಿ ಸದಸ್ಯ ಸುರೇಶ್ ಕುಮಾರ್, ಸ್ಥಳಿಯ ಪ್ರತಿನಿಧಿಗಳಾದ ಹಾಲನಾಯಕ್, ಕಲ್ಪನ, ಸತೀಶ್, ಕುಮಾರ್, ವಸಂತಕುಮಾರ್, ಸ್ಥಳಿಯ ಮುಖಂಡ ಆನಂದಪ್ಪ ಮತ್ತಿತರರು ಉಪಸ್ಥಿತರಿದ್ದರು.







