ಮುಂದಿನ ಸಂಸತ್ ಅಧಿವೇಶನದಲ್ಲಿ ಮಾನಸಿಕ ಆರೋಗ್ಯ ನೀತಿ ಮಸೂದೆ ಮಂಡನೆ: ಸದಾನಂದ ಗೌಡ
![ಮುಂದಿನ ಸಂಸತ್ ಅಧಿವೇಶನದಲ್ಲಿ ಮಾನಸಿಕ ಆರೋಗ್ಯ ನೀತಿ ಮಸೂದೆ ಮಂಡನೆ: ಸದಾನಂದ ಗೌಡ ಮುಂದಿನ ಸಂಸತ್ ಅಧಿವೇಶನದಲ್ಲಿ ಮಾನಸಿಕ ಆರೋಗ್ಯ ನೀತಿ ಮಸೂದೆ ಮಂಡನೆ: ಸದಾನಂದ ಗೌಡ](https://www.varthabharati.in/sites/default/files/images/articles/2018/12/8/167030.jpg)
ಬೆಂಗಳೂರು, ಡಿ.8: ಮಾನಸಿಕ ಆರೋಗ್ಯ ನೀತಿ ಮಸೂದೆಯನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದರು.
ಶನಿವಾರ ನಿಮ್ಹಾನ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ನ್ಯೂರಾಲಜಿ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಜನಸಾಮಾನ್ಯರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ ಎಂದರು.
ಪ್ರಸ್ತುತ ರೇಡಿಯಾಲಜಿ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದು, ಇದರಿಂದ ರೋಗಿಗಳಿಗೆ ದೊರೆಯಬಹುದಾದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರೇಡಿಯಾಲಜಿ ತಂತ್ರಜ್ಞರು ಹೆಚ್ಚು ಪರಿಶ್ರಮ ವಹಿಸಿ ಕಾರ್ಯನಿರ್ವಹಿಸಬೇಕೆಂದು ಅವರು ಆಶಿಸಿದರು.
ನಿಮಾನ್ಸ್ ಸಂಸ್ಥೆಯು ಕರ್ನಾಟಕ ಹೊರತು ಪಡಿಸಿ ಇತರ ರಾಜ್ಯ ಹಾಗೂ ದೇಶಗಳಲ್ಲೂ ತನ್ನ ಸೇವೆಗಾಗಿ ಪ್ರಸಿದ್ದಿಯಾಗಿದೆ. ನಿಮಾನ್ಸ್ನಲ್ಲಿ ಇನ್ನು ಹೆಚ್ಚು ಸೇವೆ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದು ಅವರು ಕರೆ ನೀಡಿದರು.
ರೇಡಿಯೋಲಾಜಿ ತಂತ್ರಜ್ಞರ ಭರವಸೆ ಈಡೇರಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದರು. ವೇದಿಕೆಯಲ್ಲಿ ಮಾಜಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ನಿಮಾನ್ಸ್ ನಿರ್ದೇಶಕ ಗಂಗಾಧರ್ ಇತರೆ ವೈದ್ಯರು ಉಪಸ್ಥಿತರಿದ್ದರು.