"ಉದ್ಯಮವಾಗಿರುವ ಮಾಧ್ಯಮ ಕ್ಷೇತ್ರ ಬಂಡವಾಳಶಾಹಿಗಳನ್ನು ಪ್ರತಿನಿಧಿಸುತ್ತಿರುವುದು ದುರಂತ"
ಹಿರಿಯ ಪತ್ರಕರ್ತ ಪಿ.ಸಾಯಿನಾಥ್

ತುಮಕೂರು,ಡಿ.08: ದೇಶದಲ್ಲಿರುವ ಎಲ್ಲ ವರ್ಗದ ಜನರೂ ನಾವೆಲ್ಲ ರೈತರು ಎಂದು ಹೇಳಿಕೊಳ್ಳಬೇಕಾದ ಅಗತ್ಯ ಒದಗಿಬಂದಿದೆ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.
ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ವತಿಯಿಂದ ತುಮಕೂರು ನಗರದ ಮಾಕಂ ಕಲ್ಯಾಣ ಮಂದಿರದಲ್ಲಿ ನಡೆದ 'ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ' ಕುರಿತು ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ವರ್ಗವನ್ನು ವಿಸ್ತರಿಸಬೇಕಾಗಿದೆ. ರೈತರು ಎಂಬ ಪದದ ವ್ಯಾಪ್ತಿಯಲ್ಲಿ ಭೂರಹಿತ ರೈತರು, ಗೇಣಿ ರೈತರು, ಭೂಮಿ ಇರುವ ರೈತರು, ರೈತ ಮಹಿಳೆಯರು, ಆದಿವಾಸಿ ರೈತರು, ಕೂಲಿ ಮಾಡುವ ರೈತರು ಹೀಗೆ ರೈತರ ನೆಲೆಯನ್ನು ವಿಸ್ತರಿಸುತ್ತಾ ಹೋಗಬೇಕು. ಆಮೂಲಕ ರೈತರ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದರು.
ವಿದ್ಯಾರ್ಥಿಗಳು, ಬರಹಗಾರರು, ವೈದ್ಯರು ಸಾಹಿತಿಗಳ ಎದುರು ಹಲವಾರು ಸವಾಲುಗಳಿವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಅಭಿವ್ಯಕ್ತಿಗೆ ಆತಂಕ ಸೃಷ್ಟಿಯಾಗಿದೆ. ಲೇಖಕರನ್ನು ಹತ್ಯೆ ಮಾಡುವಂತಹ ಕೆಲಸ ನಡೆದಿದೆ. ದಾಬೋಲ್ಕರ್, ಪನ್ಸಾರೆ, ಎಂ.ಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ದುಷ್ಟಶಕ್ತಿಗಳು ಹತ್ಯೆಮಾಡಿದ್ದಾರೆ. ಸ್ವಚ್ಛಂದವಾಗಿದ್ದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸವಾಲು ಎದುರಾಗಿದೆ. ಕಾರ್ಪೋರೇಟ್ ಸಂಸ್ಥೆಗಳ ಬದಲು ಲಾಭರಹಿತ ಸಂಸ್ಥೆಗಳನ್ನು ಬೆಂಬಲಿಸಬೇಕಾಗಿದೆ. ಕಾರ್ಪೋರೇಟ್ ಸಂಸ್ಥೆಗಳ ಒಡೆತನ ಕೆಲವೇ ವ್ಯಕ್ತಿಗಳಿಗೆ ಸೇರಿದೆ. ಹಾಗಾಗಿ ನಾವು ಕಾರ್ಪೋರೇಟ್ ಅಲ್ಲದ ಸಂಸ್ಥೆಗಳನ್ನು ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಪಿ.ಸಾಯಿನಾಥ್ ತಿಳಿಸಿದರು.
ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದೊದಗಿದೆ. ಸ್ವಾತಂತ್ರ್ಯ ನಮ್ಮ ಕೈಯಲ್ಲಿ ಇಲ್ಲವಾಗಿದೆ. ಖಾಸಗಿತನವು ಇಲ್ಲದಾಗಿದೆ. ಎಲ್ಲವೂ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿದೆ. ಆಧಾರ್ ಇದಕ್ಕೆ ಸ್ಪಷ್ಟ ಉದಾಹರಣೆ ಎಂದ ಅವರು, ಕಾರ್ಫೋರೇಟ್ ಶಕ್ತಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಹಿಡಿತಕ್ಕೆ ತೆಗೆದುಕೊಂಡು ಎಲ್ಲವನ್ನೂ ನಿಯಂತ್ರಿಸುತ್ತಿವೆ. ಇದು ಆತಂಕಕಾರಿ ಬೆಳವಣಿಗೆ. ಇವುಗಳ ವಿರುದ್ಧ ಯುವ ಮನಸ್ಸುಗಳು ಸೆಟೆದು ನಿಲ್ಲಬೇಕಿದೆ ಎಂದರು.
ಮಹತ್ವದ ಮಾಧ್ಯಮ ಮತ್ತು ಒಳ್ಳೆಯ ಮಾಧ್ಯಮವೆಂದು ಎರಡು ಬಗೆಗಳಿವೆ. ಜನರ ಕಷ್ಟ ಸುಖಗಳನ್ನು, ಜನರ ನಾಡಿ ಮಿಡಿತವನ್ನು ಪ್ರತಿನಿಧಿಸುವುದೇ ಈ ಮಾಧ್ಯಮದ ಕೆಲಸವಾಗಿದೆ. ಇದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗ್ ಉದಾಹರಣೆಯಾಗಿದ್ದಾರೆ. ಒಳ್ಳೆಯ ಮಾಧ್ಯಮ ಸಮಾಜದಲ್ಲಿ ಚರ್ಚೆಯನ್ನು ಹುಟ್ಟು ಹಾಕುತ್ತದೆ. ದೌರ್ಬಲ್ಯಗಳನ್ನು ಜನರ ಮುಂದಿಡುತ್ತದೆ. ಆಗ ಜನರ ಸಮಸ್ಯೆಗಳೇನೆಂಬುದು ಆಳುವವರಿಗೆ ಮತ್ತು ಅವರನ್ನು ಬೆಂಬಲಿಸುವ ಕಾರ್ಪೋರೇಟ್ ಸಂಸ್ಥೆಗಳಿಗೆ ತಿಳಿಯುತ್ತದೆ. ಆದರೆ ಜಾಗತೀಕರಣ, ಖಾಸಗೀಕರಣದ, ಉದಾರೀಕರಣದ ಫಲವಾಗಿ ಉದ್ಯಮವಾಗಿರುವ ಮಾಧ್ಯಮ ಕ್ಷೇತ್ರ ಜನಸಾಮಾನ್ಯರನ್ನು ಪ್ರತಿನಿಧಿಸುವ ಬದಲು, ಬಂಡವಾಳಶಾಹಿಗಳನ್ನು ಪ್ರತಿನಿಧಿಸುತ್ತಿರುವುದು ದುರಾದೃಷ್ಟಕರ. ಲಾಭಕ್ಕೆ ಆಸೆ ಪಡದ, ಉದ್ಯಮವಾಗಲು ಹಾತೊರೆಯದ, ಸಮಾಜಮುಖಿ ಮಾಧ್ಯಮ ಕ್ಷೇತ್ರ ಬೆಳೆಸಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ಬರಗೂರು ರಾಮಚಂದ್ರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಪ್ರೊ.ಕೆ.ದೊರೈರಾಜು, ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪ್ರೊ.ರಾಜಪ್ಪ ದಳವಾಯಿ, ಸುಕನ್ಯಾ ಮತ್ತಿತರರು ಉಪಸ್ಥಿತರಿದ್ದರು.







