ರೈತರ ಸಾಲಮನ್ನಾ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ
"ಅಪನಂಬಿಕೆ ಹುಟ್ಟಿಸಿದವರಿಗೆ ಮೈತ್ರಿ ಸರಕಾರ ದಿಟ್ಟ ಉತ್ತರ"

ಬೆಂಗಳೂರು, ಡಿ. 8: ರಾಜ್ಯಾದ್ಯಂತ ಸುಮಾರು 44 ಲಕ್ಷ ಮಂದಿ ರೈತರ, 40 ಸಾವಿರ ಕೋಟಿ ರೂ.ಬೆಳೆ ಸಾಲಮನ್ನಾ ಹಿನ್ನೆಲೆಯಲ್ಲಿ ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಅಧಿಕೃತ ಚಾಲನೆ ನೀಡಿದರು.
ಶನಿವಾರ ದೊಡ್ಡಬಳ್ಳಾಪುರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸರಕಾರವು ಆಯವ್ಯಯದಲ್ಲಿ ಘೋಷಿಸಿದಂತೆ ರೈತರ ಸಾಲಮನ್ನಾ ಪ್ರಕ್ರಿಯೆಗೆ ಚಾಲನೆ ನೀಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದರೆ, ಅಲ್ಲಿ ನೆರೆದಿದ್ದ ಸಾವಿರಾರು ರೈತರು ಹರ್ಷೋದ್ಘಾರದಿಂದ ಸ್ವಾಗತಿಸಿದರು.
‘ಮೂರ್ನಾಲ್ಕು ವರ್ಷಗಳಿಂದ ಬರದ ದವಡೆಗೆ ಸಿಲುಕಿದ್ದ ರೈತರ ಸಾಲಮನ್ನಾ ಮಾಡಲು ಒತ್ತಾಯ ಬಂದ ಹಿನ್ನೆಲೆಯಲ್ಲಿ ಹಾಗೂ ರೈತರ ಸಂಕಷ್ಟಗಳನ್ನು ಅರಿತ ಮೈತ್ರಿ ಸರಕಾರ ಸಾಲಮನ್ನಾದಂಥ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಅಪನಂಬಿಕೆ ಹುಟ್ಟಿಸಿದವರಿಗೆ ದಿಟ್ಟ ಉತ್ತರ ನೀಡಿದೆ’ ಎಂದು ಕುಮಾರಸ್ವಾಮಿ ತಿಳಿಸಿದರು.
ರೈತರು ಸಾಲಮನ್ನಾ ಬಗ್ಗೆ ಯಾವ ಸಂಶಯಗಳಿಗೂ ಕಿವಿಗೊಡಬಾರದು. ರಾಜ್ಯ ಸರಕಾರ ಸಾಲಮನ್ನಾ ಪ್ರಕ್ರಿಯೆಯನ್ನು ನೋಡಿಕೊಳ್ಳಲೆಂದೇ ಪ್ರತ್ಯೇಕ ಸೆಲ್ ಸ್ಥಾಪಿಸಿ, ಒಬ್ಬ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ಗಳ ಜೊತೆ 10 ಸಭೆಗಳನ್ನು ನಡೆಸಿದ್ದರೂ, ಅವರ ಕಡೆಯಿಂದ ಸಹಕಾರ ದೊರೆತಿಲ್ಲ. ಕೇಂದ್ರ ಸರಕಾರಕ್ಕೆ ಈ ಕುರಿತು ಮಾಡಿರುವ ಮನವಿಯನ್ನು ಪರಿಗಣಿಸಲಾಗಿಲ್ಲ ಎಂದರು. ರೈತರಿಗೆ ಉತ್ತಮ ಮತ್ತು ನೆಮ್ಮದಿಯ ಬದುಕು ನಡೆಸಲು ರಾಜ್ಯ ಸರಕಾರ ಎಲ್ಲ ಸಹಕಾರ ನೀಡಲಿದೆ. ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳ ರೈತರ ಸಾಲಮನ್ನಾ ಮಾಡಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರೆ, ರಾಷ್ಟ್ರದಲ್ಲಿಯೇ ಇದೊಂದು ಐತಿಹಾಸಿಕ ನಿರ್ಧಾರ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಇದೊಂದು ಐತಿಹಾಸಿಕ ಕಾರ್ಯಕ್ರಮ. ಮೈತ್ರಿ ಸರಕಾರ ರೈತಪರ ಸರಕಾರ ಎನ್ನುವುದಕ್ಕೆ ಸಾಲಮನ್ನಾ ಯೋಜನೆಯೆ ಉತ್ತಮ ಉದಾಹರಣೆ. ಇನ್ನಾದರೂ ವಿರೋಧ ಪಕ್ಷದವರು ಕುಹಕವಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಆಯವ್ಯಯದಲ್ಲಿ ಘೋಷಿಸಿದಂತೆ ಸಾಲಮನ್ನಾ ಯೋಜನೆಗೆ ಚಾಲನೆ ನೀಡುವ ಮೂಲಕ ಸರಕಾರ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಇದನ್ನು ಅರಿತು ರೈತರು ತಾಳ್ಮೆಯಿಂದ ಸಹಕರಿಸಬೇಕು ಎಂದು ತಿಳಿಸಿದರು.
ಸಂಸದ ವೀರಪ್ಪ ಮೊಯ್ಲಿ ಮಾತನಾಡಿ, ಸಾಲಮನ್ನಾ ಇಡೀ ದೇಶದಲ್ಲಿಯೇ ಒಂದು ಮಾದರಿ ಕಾರ್ಯಕ್ರಮವಾಗಿದೆ. ಸರಕಾರ ತನ್ನ ಭರವಸೆಯನ್ನು ಈಡೇರಿಸಿ ರೈತರನ್ನು ಋಣಮುಕ್ತಗೊಳಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ರೈತರ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುವುದು ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿ ಸಚಿವ ಶಿವಶಂಕರರೆಡ್ಡಿ ಮಾತನಾಡಿ, ಸರಕಾರ ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿರುವುದಲ್ಲದೆ, ಹಲವು ಸಕಾರಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಮೊದಲ ಬಾರಿಗೆ ರೈತಪರ ಕಾರ್ಯಕ್ರಮ ರೂಪಿಸಲು ರೈತರ ಸಲಹೆಗಳನ್ನು ಪಡೆಯಲು ರೈತ ಸಲಹಾ ಸಮಿತಿ ರಚಿಸಲಾಗಿದೆ. ಅದರಂತೆಯೇ ರೈತರಿಗೆ ಪೂರಕವಾದ ಕಾರ್ಯಕ್ರಮ ರೂಪಿಸುತ್ತೇವೆ ಎಂದರು.







