'ಕೇಂದ್ರ ಸರಕಾರದ ಧೋರಣೆ ದೇಶದ ರೈತರು, ಕಾರ್ಮಿಕರಿಗೆ ಮಾರಕ'
60ನೇ ಉಡುಪಿ ವಿಭಾಗೀಯ ಎಲ್ಲೈಸಿ ಸಮ್ಮೇಳನದಲ್ಲಿ ದಾಸ್

ಉಡುಪಿ, ಡಿ.8: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ ಧೋರಣೆಗಳು (ಪಾಲಿಸಿ) ದೇಶದ ರೈತರು ಹಾಗೂ ಕಾರ್ಮಿಕ ವರ್ಗಗಳಿಗೆ ಮಾರಕವಾಗಿವೆ. ಸರಕಾರದ ಈ ಜನವಿರೋಧಿ ನೀತಿಗಳ ವಿರುದ್ಧ ಸಾಮಾನ್ಯ ಜನರು ಧ್ವನಿ ಎತ್ತುವಂತಿಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಸಂವಿಧಾನವನ್ನೇ ತಿರುಚುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಹೈದರಾಬಾದ್ನ ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕ್ಲೆಮೆಂಟ್ ಕ್ಸೇವಿಯರ್ ದಾಸ್ ಹೇಳಿದ್ದಾರೆ.
ವಿಮಾ ನೌಕರರ ಸಂಘದ ಉಡುಪಿ ವಿಭಾಗದ ವತಿಯಿಂದ ಬ್ರಹ್ಮಗಿರಿಯ ಲಯನ್ಸ್ ಭವನದ ಎನ್.ಎಂ.ಎಸ್. ವೇದಿಕೆಯಲ್ಲಿ ಶನಿವಾರ ನಡೆದ 60ನೇ ವಿಭಾಗೀಯ ಸಮ್ಮೇಳನ ಹಾಗೂ 19ನೇ ಮಹಿಳಾ ಸಮಾವೇಶವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ದೊಡ್ಡ ದೊಡ್ಡ ಉದ್ಯಮಿಗಳ 30 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುವ ಪ್ರಧಾನಿ ಮೋದಿಗೆ, ರೈತರ ಸಾಲ ಮನ್ನಾಕ್ಕೆ ಹಣವಿಲ್ಲ. ಬ್ಯಾಂಕ್ ಸೇರಿದಂತೆ ಸಾರ್ವಜನಿಕ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಮಿಕ ವರ್ಗ ಮೋದಿ ಆಳ್ವಿಕೆಯಿಂದ ಬೇಸತ್ತಿದ್ದು, ಮುಂದಿನ ಜ. 8 ಮತ್ತು 9ರಂದು ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಬಂದ್ಗೆ ಕರೆ ಕೊಟ್ಟಿವೆ ಎಂದು ದಾಸ್ ನುಡಿದರು.
ನೋಟು ಅಮಾನ್ಯ ಮಾಡಿರುವುದು ಈ ದೇಶದ ಆರ್ಥಿಕತೆಗೆ ನೀಡಿರುವ ಅತಿ ದೊಡ್ಡ ಹೊಡೆತವಾಗಿದೆ. ಈ ಬಗ್ಗೆ ಹಿರಿಯ ಆರ್ಥಿಕ ತಜ್ಞರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃಷಿ ನಷ್ಟದ ಕುರಿತು ಕೃಷಿ ಸಚಿವಾಲಯವೇ ಸಂಸದೀಯ ಸಮಿತಿಗೆ ವರದಿ ಸಲ್ಲಿಕೆ ಮಾಡಿದೆ. ಇಂದು ದೇಶದ ಶೇ.55ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಕೈಯಲ್ಲಿದ್ದು, ಶೇ.90 ರಷ್ಟು ಮಂದಿ ಇನ್ನು ಕೂಡಾ ತಿಂಗಳಿಗೆ 10ಸಾವಿರಕ್ಕಿಂತ ಕಡಿಮೆ ಹಣ ದುಡಿಯುತಿದ್ದಾರೆ. ಈ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ಏನಾದರೂ ಮಾಡಲು ಪ್ರಯತ್ನಿಸ ಬೇಕೆಂದು ದಾಸ್ ಒತ್ತಾಯಿಸಿದರು.
ನೋಟು ಅಮಾನ್ಯ ಮಾಡಿರುವುದು ಈ ದೇಶದ ಆರ್ಥಿಕತೆಗೆ ನೀಡಿರುವ ಅತಿ ದೊಡ್ಡ ಹೊಡೆತವಾಗಿದೆ. ಈ ಬಗ್ಗೆ ಹಿರಿಯ ಆರ್ಥಿಕ ತಜ್ಞರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃಷಿ ನಷ್ಟದ ಕುರಿತು ಕೃಷಿ ಸಚಿವಾಲಯವೇ ಸಂಸದೀಯ ಸಮಿತಿಗೆ ವರದಿ ಸಲ್ಲಿಕೆ ಮಾಡಿದೆ. ಇಂದು ದೇಶದ ಶೇ.55ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಕೈಯಲ್ಲಿದ್ದು, ಶೇ.90 ರಷ್ಟು ಮಂದಿ ಇನ್ನು ಕೂಡಾ ತಿಂಗಳಿಗೆ 10ಸಾವಿರಕ್ಕಿಂತ ಕಡಿಮೆ ಹಣ ದುಡಿಯುತಿದ್ದಾರೆ. ಈ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ಏನಾದರೂ ಮಾಡಲು ಪ್ರಯತ್ನಿಸ ಬೇಕೆಂದು ದಾಸ್ ಒತ್ತಾಯಿಸಿದರು. ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ವಿಮಾ ನೌಕರರ ಸಂಘದ ಉಡುಪಿ ವಿಭಾಗ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಎಸ್. ಆಚಾರ್ಯ, ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಕೆ.ಆರ್. ಭಟ್, ವಿಮಾ ನೌಕರರ ಒಕ್ಕೂಟ ರಾಜ್ಯ ಸಂಚಾಲಕಿ ಎಚ್. ಆರ್. ಗಾಯತ್ರಿ, ಮಹಿಳಾ ಸಂಚಾಲಕಿ ಉಷಾಲತಾ ಶೆಟ್ಟಿ, ಉಪಾಧ್ಯಕ್ಷ ಮೊಹಮ್ಮದ್ ಮೆಹಬೂಬ್, ಕೆ. ವಿಶ್ವನಾಥ ಉಪಸ್ಥಿತರಿದ್ದರು.
ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಯು. ಗುರುದತ್ ವಂದಿಸಿದರು. ಡೆರಿಕ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ಸಮ್ಮೇಳನದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜೀವವಿಮಾ ಕಚೇರಿಗಳಿಂದ 150ಕ್ಕೂ ಅಧಿಕ ನೌಕರರು ಭಾಗವಹಿಸಿದ್ದಾರೆ.