‘‘ವಸುಂಧರಾ ರಾಜೆ ದಪ್ಪಗಾಗಿದ್ದಾರೆ ’’ಎಂಬ ಹೇಳಿಕೆಗೆ ವಿಷಾದಿಸಿದ ಶರದ್ ಯಾದವ್
![‘‘ವಸುಂಧರಾ ರಾಜೆ ದಪ್ಪಗಾಗಿದ್ದಾರೆ ’’ಎಂಬ ಹೇಳಿಕೆಗೆ ವಿಷಾದಿಸಿದ ಶರದ್ ಯಾದವ್ ‘‘ವಸುಂಧರಾ ರಾಜೆ ದಪ್ಪಗಾಗಿದ್ದಾರೆ ’’ಎಂಬ ಹೇಳಿಕೆಗೆ ವಿಷಾದಿಸಿದ ಶರದ್ ಯಾದವ್](https://www.varthabharati.in/sites/default/files/images/articles/2018/12/8/167061.jpg)
ಹೊಸದಿಲ್ಲಿ,ಡಿ.8: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ‘ದಪ್ಪಗಾಗಿದ್ದಾರೆ ’ ಎಂಬ ತನ್ನ ಹೇಳಿಕೆಗಾಗಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಮಾಜಿ ಜೆಡಿಯು ನಾಯಕ ಶರದ್ ಯಾದವ್ ಅವರು ಶನಿವಾರ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು. ಈ ಬಗ್ಗೆ ತಾನು ರಾಜೆಯವರಿಗೆ ಪತ್ರವನ್ನು ಬರೆಯುವುದಾಗಿಯೂ ಅವರು ತಿಳಿಸಿದರು.
‘‘ಅವರ(ರಾಜೆ) ಹೇಳಿಕೆಯನ್ನು ನಾನು ನೋಡಿದ್ದೇನೆ. ನನಗೆ ಅವರೊಂದಿಗೆ ಹಳೆಯ ಕೌಟುಂಬಿಕ ಸಂಬಂಧವಿದೆ. ನನ್ನ ಮಾತುಗಳು ಅವರಿಗೆ ನೋವನ್ನುಂಟು ಮಾಡಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆ. ಅವರಿಗೆ ಪತ್ರವನ್ನೂ ಬರೆಯುತ್ತೇನೆ ’’ ಎಂದು ಯಾದವ್ ಅವರು ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.
ಚುನಾವಣಾ ರ್ಯಾಲಿಯಲ್ಲಿ ತನ್ನ ಶರೀರವನ್ನು ಅವಹೇಳನ ಮಾಡಿದ್ದಕ್ಕೆ ಶುಕ್ರವಾರ ಯಾದವ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ರಾಜೆ ಅವರು,ಇದರಿಂದ ತನಗೆ ಅವಮಾನವಾಗಿದೆ. ಇದು ಮಹಿಳೆಯರಿಗೆ ಮಾಡಿರುವ ಅವಮಾನವಾಗಿದೆ ಮತ್ತು ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದರು.
ರಾಜಸ್ಥಾನದಲ್ಲಿ ಬಹಿರಂಗ ಚುನಾವಣಾ ಪ್ರಚಾರದ ಕೊನೆಯ ದಿನವಾಗಿದ್ದ ಬುಧವಾರ ಆಲ್ವಾರ್ನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಯಾದವ,ರಾಜೆ ಅವರು ದಪ್ಪಗಾಗಿದ್ದಾರೆ ಮತ್ತು ಜನರು ಅವರಿಗೆ ವಿಶ್ರಾಂತಿ ನೀಡಬೇಕು ಎಂದು ಹೇಳಿದ್ದರು. ಅದೊಂದು ತಮಾಷೆಯಾಗಿತ್ತಷ್ಟೇ ಎಂದು ಅವರು ಬಳಿಕ ಸಮಜಾಯಿಷಿ ನೀಡಿದ್ದರು.
ಯಾದವ್ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಇದೊಂದು ಅವಿವೇಕಿ ಮತ್ತು ಸ್ತ್ರೀದ್ವೇಷಿ ಹೇಳಿಕೆಯಾಗಿದೆ ಎಂದು ಹಲವರು ಕುಟುಕಿದ್ದರು.
ರಾಜೆಯವರನ್ನು ಬೆಂಬಲಿಸಿದ್ದ ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರೂ ಯಾದವ್ ಕ್ಷಮೆಯಾಚನೆಗೆ ಆಗ್ರಹಿಸಿದ್ದರು.