ನನಗಿಂತ ದೊಡ್ಡ ಸಮೀಕ್ಷಕರಿಲ್ಲ,ಬಿಜೆಪಿ ಗೆಲ್ಲಲಿದೆ: ಶಿವರಾಜ್ ಸಿಂಗ್ ಚೌಹಾಣ್
![ನನಗಿಂತ ದೊಡ್ಡ ಸಮೀಕ್ಷಕರಿಲ್ಲ,ಬಿಜೆಪಿ ಗೆಲ್ಲಲಿದೆ: ಶಿವರಾಜ್ ಸಿಂಗ್ ಚೌಹಾಣ್ ನನಗಿಂತ ದೊಡ್ಡ ಸಮೀಕ್ಷಕರಿಲ್ಲ,ಬಿಜೆಪಿ ಗೆಲ್ಲಲಿದೆ: ಶಿವರಾಜ್ ಸಿಂಗ್ ಚೌಹಾಣ್](https://www.varthabharati.in/sites/default/files/images/articles/2018/12/8/167089.jpg)
ಭೋಪಾಲ,ಡಿ.8: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನ.28ರಂದು ಮತದಾನ ನಡೆದಿದ್ದು,ಫಲಿತಾಂಶವು ಡಿ.11ರಂದು ಪ್ರಕಟಗೊಳ್ಳಲಿದೆ.
ತಾನು ಹಗಲು ರಾತ್ರಿ ಜನರೊಡನೆ ಸಂವಾದ ನಡೆಸುತ್ತಿರುತ್ತೇನೆ,ಹೀಗಾಗಿ ತನಗಿಂತ ದೊಡ್ಡ ಜನಾಭಿಪ್ರಾಯ ಸಮೀಕ್ಷಕರಿಲ್ಲ. ಆದ್ದರಿಂದಲೇ ಬಿಜೆಪಿಯು ರಾಜ್ಯದಲ್ಲಿ ಮುಂದಿನ ಸರಕಾರವನ್ನು ರಚಿಸುತ್ತದೆ ಎಂದು ತಾನು ಪೂರ್ಣ ವಿಶ್ವಾಸದೊಂದಿಗೆ ಹೇಳಬಲ್ಲೆ ಎಂದು ದಾತಿಯಾ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಚೌಹಾಣ್ ಹೇಳಿದರು.
‘‘ಸಮಾಜದ ಪ್ರತಿಯೊಂದೂ ವರ್ಗವು ಚುನಾವಣೆಯಲ್ಲಿ ನಮ್ಮನ್ನು ಆಶೀರ್ವದಿಸಿದೆ ಮತ್ತು ನಾವು ಗೆಲುವಿನ ಹಾದಿಯಲ್ಲಿದ್ದೇವೆ. ಈ ಬಾರಿ ನಾವು 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲತ್ತೇವೆ ’’ ಎಂದರು.
ತನ್ಮಧ್ಯೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಅಭಿಷೇಕ ಮನು ಸಿಂಘ್ವಿ ಅವರು ,ಎಲ್ಲ ಐದೂ ರಾಜ್ಯಗಳಲ್ಲಿ ಬಿಜೆಪಿ ಸೋಲಲಿದೆ. ಚುನಾವಣೋತ್ತರ ಸಮೀಕ್ಷೆಯನ್ನು ನಾವು ಸಂಪೂರ್ಣವಾಗಿ ನಂಬುವುದಿಲ್ಲವಾದರೂ ಅವು ಬರಲಿರುವ ಫಲಿತಾಂದ ಸುಳಿವನ್ನು ನೀಡುತ್ತಿವೆ ಎಂದು ಹೇಳಿದರು.