ಲಂಕಾ ಬಿಕ್ಕಟ್ಟು: ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್
ಕೊಲಂಬೊ, ಡಿ. 8: ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆ ನಡೆಸುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರ ವಿವಾದಾತ್ಮಕ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ತೀರ್ಪನ್ನು ದೇಶದ ಸುಪ್ರೀಂ ಕೋರ್ಟ್ ಶುಕ್ರವಾರ ಕಾದಿರಿಸಿದೆ.
ಅಧ್ಯಕ್ಷರು ಅಕ್ಟೋಬರ್ 26ರಂದು ಪ್ರಧಾನಿ ರನಿಲ್ ವಿಕ್ರಮೆಸಿಂಘೆಯನ್ನು ವಜಾಗೊಳಿಸಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ಅವರ ಸ್ಥಾನಕ್ಕೆ ನೇಮಿಸಿರುವುದನ್ನು ಸ್ಮರಿಸಬಹುದಾಗಿದೆ. ಅಧ್ಯಕ್ಷರ ಈ ಆದೇಶಗಳ ಹಿನ್ನೆಲೆಯಲ್ಲಿ ಈಗ ದ್ವೀಪರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ನೆಲೆಸಿದೆ.
ಸುಪ್ರೀಂ ಕೋರ್ಟ್ ನಾಲ್ಕು ದಿನಗಳ ಕಾಲ ನಿರಂತರವಾಗಿ 13 ಅರ್ಜಿಗಳ ವಿಚಾರಣೆ ನಡೆಸಿತು. ಶುಕ್ರವಾರ ವಿಚಾರಣೆ ಸುಪ್ರೀಂ ಕೋರ್ಟ್ನ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ದೀರ್ಘವಾದುದು ಎಂಬುದಾಗಿ ಹೇಳಲಾಗಿದೆ.
ವಿಕ್ರಮೆಸಿಂಘೆಯನ್ನು ವಜಾಗೊಳಿಸುವ ಹಾಗೂ ಸಂಸತ್ತನ್ನು ವಿಸರ್ಜಿಸುವ ಅಧ್ಯಕ್ಷರ ನಿರ್ಧಾರಗಳು ಸಂವಿಧಾನದ ಉಲ್ಲಂಘನೆಯಾಗಿವೆ ಎಂದು ಹೇಳುವ 13 ಅರ್ಜಿಗಳನ್ನು ವಿವಿಧ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ಸಲ್ಲಿಸಿವೆ.