ನಾವು ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ: ಕೇಂದ್ರ ಸರಕಾರದ ವಿರುದ್ಧ ಆರೆಸ್ಸೆಸ್ ನಾಯಕ ಭಯ್ಯಾಜಿ ಜೋಶಿ ಆಕ್ರೋಶ
ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ದಿಲ್ಲಿಯಲ್ಲಿ ವಿಎಚ್ ಪಿಯಿಂದ ಬೃಹತ್ ರ್ಯಾಲಿ

ಹೊಸದಿಲ್ಲಿ, ಡಿ.9: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಈಡೇರಿಸದ ಕೇಂದ್ರ ಸರಕಾರದ ವಿರುದ್ಧ ಹಿರಿಯ ಆರೆಸ್ಸೆಸ್ ನಾಯಕ ಸುರೇಶ್ ಭಯ್ಯಾಜಿ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಅಗತ್ಯಬಿದ್ದರೆ ಈ ಬಗ್ಗೆ ಶಾಸನವೊಂದನ್ನು ಜಾರಿಗೊಳಿಸಬೇಕು ಎಂದವರು ಆಗ್ರಹಿಸಿದ್ದಾರೆ.
ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ವಿಎಚ್ ಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, “ಇಂದು ಅಧಿಕಾರದಲ್ಲಿರುವವರು ರಾಮ ಮಂದಿರ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಅವರು ಜನರ ಮಾತು ಕೇಳಬೇಕು ಹಾಗು ಜನರ ಬೇಡಿಕೆಯಾದ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕು” ಎಂದ ಅವರು, ಬಿಜೆಪಿಯನ್ನು ಹೆಸರಿಸದೆ “ನಾವು ಅದಕ್ಕಾಗಿ ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ. ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದೇವೆ. ದೇಶವು ರಾಮ ರಾಜ್ಯವನ್ನು ಬಯಸುತ್ತಿದೆ” ಎಂದವರು ಹೇಳಿದರು.
Next Story





