ಮನುವಾದವನ್ನು ಹೇರಲು ಸಂವಿಧಾನವನ್ನು ಸುಡಲಾಗುತ್ತಿದೆ: ಸಿದ್ದರಾಮಾನಂದಪುರಿ ಸ್ವಾಮಿ
![ಮನುವಾದವನ್ನು ಹೇರಲು ಸಂವಿಧಾನವನ್ನು ಸುಡಲಾಗುತ್ತಿದೆ: ಸಿದ್ದರಾಮಾನಂದಪುರಿ ಸ್ವಾಮಿ ಮನುವಾದವನ್ನು ಹೇರಲು ಸಂವಿಧಾನವನ್ನು ಸುಡಲಾಗುತ್ತಿದೆ: ಸಿದ್ದರಾಮಾನಂದಪುರಿ ಸ್ವಾಮಿ](https://www.varthabharati.in/sites/default/files/images/articles/2018/12/9/167174.jpg)
ಬೆಂಗಳೂರು, ಡಿ.9: ಶೂದ್ರ ಸಮುದಾಯಕ್ಕೆ ಬಹುದೊಡ್ಡ ಶಕ್ತಿ ಕುರುಬ ಸಮಾಜವಾಗಿದೆ. ತುಳಿತಕ್ಕೊಳಗಾದವರ ಧ್ವನಿಯಾಗಿರುವ ಕುರುಬ ಸಮುದಾಯವನ್ನು ಅಣ್ಣನ ಸ್ಥಾನದಲ್ಲಿ ನೋಡುತ್ತದೆ ಎಂದು ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ಆಯೋಜಿಸಿದ್ದ, ಸಂತಕವಿ ಕನಕದಾಸರ 541 ಜಯಂತಿಯಲ್ಲಿ, ಸಾವಿನಾಚೆ-ಒಂದು ಜಿಜ್ಞಾಸೆ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಶೋಷಣೆಗೊಳಗಾದ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಜತೆಯಲ್ಲಿಯೇ ಮುನ್ನೆಡೆಸಿಕೊಂಡು ಕುರುಬ ಸಮಾಜ ಹೋಗುತ್ತಿದ್ದು, ಶಕ್ತವಾದ ಸಮಾಜವನ್ನು ಸಂಘಟಿಸುವ ಮೂಲಕ ನಮ್ಮ ತುತ್ತಿನಲ್ಲಿ ನಿಮ್ಮಗೂ ಒಂದು ತುತ್ತು ಇದೆ ಎಂದು ತುಳಿತಕ್ಕೊಳಗಾದವರನ್ನು ಕರೆದೊಯ್ಯಬೇಕು ಹಾಗೂ ಶೂದ್ರರ ಶಕ್ತಿಯಲ್ಲಿ ಐಕ್ಯತೆಯನ್ನು ಕಟ್ಟಬೇಕೆಂದು ಹೇಳಿದರು.
ಭಕ್ತನೂ ದೇವರನ್ನು ಕಂಡು ಕೊಳ್ಳಬಹುದೆಂದು ಶೂದ್ರ ಜನತೆಗೆ ತೋರಿಸಿ ಕೊಟ್ಟು, ದೇವರಿಗೆ, ದೇವಸ್ಥಾನವನ್ನು ನಿರಾಕರಣೆ ಮಾಡು ಎಂದು ಹೇಳಿ. ದೇವಸ್ಥಾನ ಹಾಗೂ ಭಕ್ತನ ನಡುವಿನ ತಡೆಗೋಡೆಯನ್ನು ಓಡೆದವರು ಕನಕದಾಸರು. ಅಲ್ಲದೆ, ಕನಕನಿಗೆ ಒಲಿದ ಆದಿಕೇಶವನಿಂದ ಕೃಷ್ಣ ಮಠ ಪ್ರಸಿದ್ಧಿಯಾಯಿತು ಹಾಗೂ ಕುರುಬರು ಮೊದಲು ಕೃಷ್ಣನನ್ನು ಬಯಲು ಪೂಜೆ ಮಾಡುತ್ತಿದ್ದರು ಎಂದರು.
ಕನಕದಾಸರ ಸಾಹಿತ್ಯವನ್ನು ಅರಿಯಲು ಸೂಕ್ಷ್ಮ ಗ್ರಹಿಕೆ ಬಹಳ ಮುಖ್ಯವಾಗುತ್ತದೆ. ದೊರೆಯಾಗಿ ಗುಲಾಮನಾಗುವುದಕ್ಕಿಂತ, ದಾಸನಾಗಿ ದೊರೆಯಾಗುವುದೇ ಲೇಸು ಎಂದು ಧ್ಯಾನಿ-ಜ್ಞಾನಿಗಳಾಗಿ ದಾಸರು ಬದುಕಿದರು. ಕೃಷ್ಣ ಜಗತ್ ಪ್ರಸಿದ್ಧಿ ಪಡೆಯಲು ಕನಕದಾಸರು ಬರಬೇಕಾಯಿತು, ಕುರುಬರನ್ನು ಸಂಘಟಿಸುವುದಕ್ಕೆ ಕನಕ ಜಯಂತಿ ಬರಬೇಕಾಯಿತು ಎಂದರು.
ಬಂಡಾಯ ಸಾಹಿತ್ಯ ಜಾಗೃತವಾದ ಮೇಲೆ ರಾಮಧಾನ್ಯ ಚರಿತೆ ಮನ್ನಣೆಗೆ ಬಂತು. ಪಂಡಿತರು ಮಾತ್ರ ಮಹಾಕಾವ್ಯ ಓದುತ್ತಾರೆ. ಅವರಿಗೆ ಮಾತ್ರ ಅಲಂಕಾರ ಅರ್ಥವಾಗುತ್ತದೆ. ಹೀಗಾಗಿ, ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಕನಕರು ಬರೆದರು. ಕೆಲವು ವಿಮರ್ಶಕರಿಗೆ ಕನಕ ಸಾಹಿತ್ಯ ಬೇಡವಾದರೂ, ಸಾಮಾನ್ಯರಿಗೆ ಹತ್ತಿರವಾಯಿತು. ಕನಕರ ದಂತಕಥೆ, ಪವಾಡ ಕಥೆಗಳೇ ಸಾಕು, ಅವರ ಚಾರಿತ್ರಿಕ ಇತಿಹಾಸ ಬೇಡ ಎಂದು ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಟ್ಟರು.
ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಕನಕದಾಸರನ್ನು ಅರ್ಥ ಮಾಡಿಕೊಳ್ಳಲು ಅವರ ಸಾಹಿತ್ಯವನ್ನು ಓದಬೇಕು. ಕನಕರನ್ನು ನೋವು ಈಗ ಭಿನ್ನ ನೆಲೆಗಟ್ಟಿನಲ್ಲಿ ನೋಡುತ್ತಿದ್ದೇವೆ. ವ್ಯಾಸರನ್ನು ಅವರು ಎಂದೂ ಗುರು ಎಂದು ಹೇಳಲಿಲ್ಲ ಹಾಗೂ ಅವರು ಎಂದಿಗೂ ನಾನು ಬ್ರಾಹ್ಮಣನಾಗುವುದಿಲ್ಲ ಎಂದು ಹೇಳಿದ್ದಾರೆ. ಬುದ್ಧ, ಬಸವಣ್ಣನ ಸಾಲಿನಲ್ಲಿ ಕನಕ ನಿಲ್ಲುತ್ತಾರೆ. ಅಲ್ಲದೆ, ಅವರ ಉದ್ದೇಶ ಜಗತ್ತಿಗೆ ಸತ್ಯವನ್ನು ತೋರಿಸುವುದಾಗಿತು ಎಂದು ತಿಳಿಸಿದರು.
ವಿಧಾನ ಪರಿಷತ್ತು ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ಕನಕದಾಸರ ಸಾಹಿತ್ಯವನ್ನು 12 ಸಂಪುಟಗಳಲ್ಲಿ ಜ.5ರಂದು ಹೊರತರಲಾಗುತ್ತಿದ್ದು, ರಾಜ್ಯದ ಮೂಲೆ ಮೂಲೆಗೂ ಕನಕ ಜಯಂತಿ ಪಸರಿಸಿದೆ. ಆದರೆ, ಇತ್ತೀಚಿಗೆ ಜಯಂತಿಗೆ ಜನರ ಆಗಮನ ಕಡಿಮೆ ಬರುತ್ತಿರುವುದು ಶೋಚನೀಯ. ಇನ್ನೂ ಜನಸಂಖ್ಯೆಗೆ ಅನುಗುಣವಾಗಿ ಜನಾಂಗಕ್ಕೆ ಹೆಚ್ಚು ಸೌಲಭ್ಯಗಳು ಲಭ್ಯವಾಗಬೇಕು ಎಂದು ಹೇಳಿದರು.
‘ದೇಶಭಕ್ತಿಯನ್ನೇ ಇತ್ತೀಚೆಗೆ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಮನುವಾದವನ್ನು ಹೇರಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ರೂಪಿಸಿದ ಜಾತ್ಯತೀಯ ಸಂವಿಧಾನವನ್ನು ಸುಟ್ಟು ಹಾಕುತ್ತಿದ್ದಾರೆ .
ಸಿದ್ದರಾಮಾನಂದಪುರಿ ಸ್ವಾಮಿ, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠ