ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸರಕಾರಿ ಶಾಲೆ ಅಗತ್ಯ: ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಪಿಡಿಒ ಅಶ್ವಿನಿ

ದಾವಣಗೆರೆ, ಡಿ.9: ಮಕ್ಕಳ ಭಾಗವಹಿಸುವಿಕೆಯ ಭಾಗವಾಗಿ ಶಾಲೆಗಳಲ್ಲಿ ಶೈಕ್ಷಣಿಕ ಪ್ರವಾಸ, ಪೌಷ್ಟಿಕ ಆಹಾರ ಪೂರೈಕೆಯೊಂದಿಗೆ ಮಕ್ಕಳ ಭೌತಿಕ ಹಾಗೂ ಬೌದ್ಧಿಕ ಪ್ರಗತಿಗೂ ಆದ್ಯತೆ ನೀಡುವ ಮೂಲಕ ಮಕ್ಕಳ ಹಕ್ಕು ಪೋಷಣೆಗೆ ಸರಕಾರಿ ಶಾಲೆಗಳಲ್ಲಿ ಪೂರಕ ವಾತಾವರಣ ಇದೆ ಎಂದು ಪಿಡಿಒ ಅಶ್ವಿನಿ ದಿವಾಕರ್ ಹೇಳಿದ್ದಾರೆ.
ತಾಲೂಕಿನ ನಾಗರಸನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಕುಕ್ಕುವಾಡ ಗ್ರಾಪಂ ವತಿಯಿಂದ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಸಕಲ ಸೌಲಭ್ಯವಿರುವ ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರೂ ಇದ್ದು, ಗುಣಾತ್ಮಕ ಶಿಕ್ಷಣ ಸಿಗುತ್ತಿದೆ. ಶಾಲಾ ಭೌತಿಕ ಅಭಿವೃದ್ಧಿಗೂ ಸರಕಾರ ಉತ್ತಮ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ನಾಗರಾಜ್ ಮಾತನಾಡಿದರು. ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮನ್ವಯ ವೇದಿಕೆ ಅಧ್ಯಕ್ಷ ಪರಮೇಶ್ವರಪ್ಪ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಸಭೆಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ ಶಾಲೆ ಹಾಗೂ ಗ್ರಾಮಗಳಲ್ಲಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲಾಯಿತು. ಶಾಲಾ ಮಕ್ಕಳು ಶಾಲೆಗೆ ಗ್ರಂಥಾಲಯ, ಕುಡಿಯುವ ನೀರಿನ ಶುದ್ಧೀಕರಣ ಘಟಕ, ಕ್ರೀಡೋಪಕರಣ ಪೂರೈಸುವುದು, ಶಾಲಾ ಕಂಪೌಂಡ್ ನಿರ್ಮಿಸುವಂತೆ ಗ್ರಾಪಂಗೆ ಮನವಿ ಮಾಡಿದರು. ಇದಕ್ಕೂ ಮೊದಲು ಪ್ರೌಢಶಾಲೆ ಮಕ್ಕಳು ಅಣಕು ಅಧಿವೇಶನ ನಡೆಸಿದರು. ಸಭೆಯಲ್ಲಿ ನಾಗರಸನಹಳ್ಳಿ ಪ್ರಾಥಮಿಕ ಶಾಲಾ ಮಕ್ಕಳು ಶಿಕ್ಷಕ ಹನುಮಂತಪ್ಪ, ಪೌಢಶಾಲಾ ಸಮಿತಿ ಅಧ್ಯಕ್ಷ ಭಾಸ್ಕರಾಚಾರ್, ಉಪಾಧ್ಯಕ್ಷ ಜಡಗನಹಳ್ಳಿ ನಿಂಗಪ್ಪ, ಗ್ರಾಪಂ ಸದಸ್ಯರಾದ ನೀಲಮ್ಮ, ಯಶೋಧಮ್ಮ ದೇವೇಂದ್ರಪ್ಪ ಸೇರಿದಂತೆ ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಸರಕಾರಿ ಶಾಲಾ ಮಕ್ಕಳು ಪ್ರತಿಭಾವಂತರಾಗಿದ್ದು, ಶಾಲಾ ಅಭಿವೃದ್ಧಿಗಾಗಿ ಪೋಷಕರು ಸಹಕರಿಸಬೇಕು. ಶಾಲಾ ಸಭೆ ಸಮಾರಂಭಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಶಾಲೆಯ ಆಗು-ಹೋಗುಗಳ ವಿಷಯಗಳಲ್ಲಿ ಭಾಗಿಯಾಗಬೇಕು ಹಾಗೂ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರೊಂದಿಗೆ ಕೈಜೋಡಿಸಬೇಕು.
ಸುರೇಶ್, ಗ್ರಾಪಂ ಸದಸ್ಯ







