ಮೋದಿಯ ಹುಡುಗಾಟದ ಹೇಳಿಕೆಗಳು ಬಿಜೆಪಿಗೆ ದುಬಾರಿಯಾದವು: ಶಿವಸೇನೆ
![ಮೋದಿಯ ಹುಡುಗಾಟದ ಹೇಳಿಕೆಗಳು ಬಿಜೆಪಿಗೆ ದುಬಾರಿಯಾದವು: ಶಿವಸೇನೆ ಮೋದಿಯ ಹುಡುಗಾಟದ ಹೇಳಿಕೆಗಳು ಬಿಜೆಪಿಗೆ ದುಬಾರಿಯಾದವು: ಶಿವಸೇನೆ](https://www.varthabharati.in/sites/default/files/images/articles/2018/12/12/167602.jpg)
ಮುಂಬೈ,ಡಿ.12: ಪ್ರಧಾನಿ ನರೇಂದ್ರ ಮೋದಿಯವರ ಹುಡುಗಾಟದ ಹೇಳಿಕೆಗಳು ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಿವೆ ಎಂದು ಬುಧವಾರ ಹೇಳಿರುವ ಮಿತ್ರಪಕ್ಷ ಶಿವಸೇನೆಯು,ತಾನು ಅಧಿಕಾರದಲ್ಲಿದ್ದ ಮೂರು ಪ್ರಮುಖ ರಾಜ್ಯಗಳಲ್ಲಿ ಸೋಲುಗಳಿಂದಾಗಿ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿಯ ಕನಸು ನುಚ್ಚುನೂರಾಗಿದೆ ಎಂದು ಹೇಳಿದೆ.
ಮಂಗಳವಾರದ ಚುನಾವಣಾ ಫಲಿತಾಂಶಗಳ ಬಳಿಕ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬದಿಗೊತ್ತಲ್ಪಟ್ಟಿದ್ದಾರೆ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ‘ಶೈನಿಂಗ್ ಸ್ಟಾರ್’ ಆಗಿದ್ದಾರೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ ತನ್ನ ಸಂಪಾದಕೀಯ ಲೇಖನದಲ್ಲಿ ಹೇಳಿದೆ.
ಛತ್ತೀಸ್ಗಡ,ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿಯ ಭದ್ರಕೋಟೆ ಕುಸಿದು ಬಿದ್ದಿದೆ ಮತ್ತು ತೆಲಂಗಾಣ ಹಾಗೂ ಮಿಝೊರಾಂ ರಾಜ್ಯಗಳಲ್ಲಿ ಅದರ ಸ್ಥಿತಿ ಕಾಂಗ್ರೆಸ್ಗಿಂತಲೂ ಹೀನಾಯವಾಗಿದೆ ಎಂದಿರುವ ಅದು,ಕಾಂಗ್ರೆಸ್ ಛತ್ತೀಸ್ಗಡವನ್ನು ಬಿಜೆಪಿಯಿಂದ ಕಿತ್ತುಕೊಂಡಿದೆ. ಅಲ್ಲಿ ಮುಖ್ಯಮಂತ್ರಿ ರಮಣ ಸಿಂಗ್ ಅವರು ಪ್ರಬಲರಾಗಿದ್ದರೂ ಬಿಜೆಪಿಯ ಚಾಣಕ್ಯ ಮಿದುಳುಗಳು ಚುನಾವಣೆಯಲ್ಲಿ ಅಜಿತ್ ಜೋಗಿಯವರಿಗೆ ಕುಮ್ಮಕ್ಕು ನೀಡುವ ಮೂಲಕ ವಿಭಜಿಸಿ ಆಳುವ ನೀತಿಯನ್ನು ಪ್ರಯತ್ನಿಸಿದ್ದವು. ಆದರೆ ಇದು ಬಿಜೆಪಿಗೇ ತಿರುಗೇಟು ನೀಡಿದೆ ಎಂದಿದೆ.
ಮಧ್ಯಪ್ರದೇಶದಲ್ಲಿ ‘ಮಾಮಾಜಿ’ ಶಿವರಾಜ ಸಿಂಗ್ ಚೌಹಾಣ್ ಅವರು ಪ್ರಧಾನಿ ಮೋದಿಯವರಿಗಿಂತ ಜನಪ್ರಿಯರಾಗಿದ್ದರೂ ಅವರನ್ನು ಬೋನಿಗೆ ಬೀಳಿಸುವ ಮೂಲಕ ಕಾಂಗ್ರೆಸ್ ಪಕ್ಷವು ಬಿಜೆಪಿಯ ರಥಕ್ಕೆ ತಡೆಯೊಡ್ಡಿದೆ ಎಂದಿರುವ ಶಿವಸೇನೆ,ರಾಜಸ್ಥಾನದಲ್ಲಿ ಕಾಂಗ್ರೆಸ್ ಸುಲಭವಾಗಿ 140 ಸ್ಥಾನಗಳನ್ನು ಗಳಿಸಬಹುದಿತ್ತು. ಆದರೆ ಅಂತರಿಕ ಕಲಹ ಅದನ್ನು 100ಕ್ಕೆ ಸೀಮಿತಗೊಳಿಸಿದೆ. ಅದು ಸರಕಾರ ರಚಿಸುವುದನ್ನು ಯಾರೂ ತಡೆಯಲಾರರು ಎಂದಿದೆ.
ಈ ಎಲ್ಲ ಐದೂ ರಾಜ್ಯಗಳು ಬಿಜೆಪಿ ಮುಕ್ತ ಭಾರತದ ಸ್ಪಷ್ಟ ಸಂದೇಶವನ್ನು ರವಾನಿಸಿವೆ. ಎಲ್ಲ ಚುನಾವಣೆಗಳನ್ನೂ ತಾನೇ ಗೆಲ್ಲುತ್ತೇನೆ ಮತ್ತು ಇತರ ಯಾವುದೇ ಪಕ್ಷವು ಬದುಕುಳಿಯುವುದಿಲ್ಲ ಎಂದು ಬಿಜೆಪಿ ಭಾವಿಸಿತ್ತು. ಆದರೆ ಈ ಗುಳ್ಳೆ ಈಗ ಒಡೆದಿದೆ. ಜನರನ್ನು ಮೂರ್ಖರನ್ನಾಗಿಸಿ ಯಾವಾಗಲೂ ಗೆಲ್ಲಲು ಸಾಧ್ಯವಿಲ್ಲ ಎಂದಿರುವ ಶಿವಸೇನೆ, ಮೋದಿ ಭಾವನಾತ್ಮಕ ವಿಷಯಗಳನ್ನೆತ್ತಲು ಬಯಸಿದ್ದರು,ಆದರೆ ಮತದಾರರು ಅದನ್ನು ತಿರಸ್ಕರಿಸಿದ್ದಾರೆ. ಆಗಸದಲ್ಲಿ ಹಾರಾಡುತ್ತಿದ್ದವರನ್ನು ಜನರು ಕೆಳಗಿಳಿಸಿದ್ದಾರೆ ಎಂದು ಕುಟುಕಿದೆ.