ಚಿತ್ರರಂಗದಿಂದ ನಿರ್ದೇಶಕ ಪ್ರೇಮ್ ರನ್ನು ನಿಷೇಧಿಸಲು ನಿರ್ಮಾಪಕ ಶ್ರೀನಿವಾಸ್ ಆಗ್ರಹ
ಬೆಂಗಳೂರು, ಡಿ.14: ನಿರ್ದೇಶಕ ಪ್ರೇಮ್ ಸಿನಿಮಾ ಮಾಡುವುದಾಗಿ ನನ್ನ ಹತ್ತಿರದಿಂದ ಹಣ ಪಡೆದು ಸಿನಿಮಾ ನಿರ್ಮಿಸಿಲ್ಲ ಹಾಗೂ ಹಣವನ್ನೂ ವಾಪಸ್ಸು ನೀಡಿಲ್ಲ, ಸತಾಯಿಸುತ್ತಿದ್ದಾನೆ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಆರೋಪಿಸಿದ್ದಾರೆ.
ಈ ಸಂಬಂಧ ನಿರ್ದೇಶಕ ಪ್ರೇಮ್ ಕಚೇರಿ ಎದುರು ದರಣಿ ನಡೆಸಿದ ನಿರ್ಮಾಪಕ ಶ್ರೀನಿವಾಸ್, ನನಗೆ ಮೋಸ ಮಾಡಲು ಮುಂದಾಗಿರುವ ಪ್ರೇಮ್ರನ್ನು ಚಿತ್ರರಂಗದಿಂದ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎಂಬ ಕಾರಣಕ್ಕೆ ಚಂದ್ರಾ ಲೇಔಟ್ ಪೊಲೀಸರು ಹಾಗೂ ನಿರ್ಮಾಪಕ ಕೆ.ಮಂಜು ಸ್ಥಳಕ್ಕೆ ಧಾವಿಸಿ ಶ್ರೀನಿವಾಸ್ಗೆ ಸಮಾಧಾನ ಮಾಡಲಾಯಿತು. ಆದರೂ, ಯಾವುದೇ ಪ್ರಯೋಜನವಾಗಿಲ್ಲ.
ವಿಷಯ ತಿಳಿದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮಾ.ಹರೀಶ್ ಪ್ರೇಮ್ ಆಫೀಸ್ ಕಡೆ ದೌಡಾಯಿಸಿ ಬಂದಿದ್ದರು. ಇನ್ನು ಕೆ.ಮಂಜು ನಿರ್ಮಾಪಕ ಸಂಘದ ಅಧ್ಯಕ್ಷ ಹಾಗೂ ಶಾಸಕ ಮುನಿರತ್ನರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿಸಿದ್ದರು. ಈ ವೇಳೆ ನಾನು ಅಧಿವೇಶನದಲ್ಲಿದ್ದು, ಡಿ.20 ರಂದು ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿ ಸಮಸ್ಯೆಯನ್ನು ಬಗೆಹರಿಸೋಣ ಎಂದು ಭರವಸೆ ನೀಡಿದರು. ಅನಂತರ ಶ್ರೀನಿವಾಸ್ ಧರಣಿ ಹಿಂಪಡೆದಿದ್ದಾರೆ.
ಇದೇ ವೇಳೆ ಪ್ರೇಮ್ ನನಗೆ ಹಣ ನೀಡದಿದ್ದಲ್ಲಿ ಚಿತ್ರರಂಗದಿಂದ ನಿಷೇಧ ಮಾಡಿ ಎಂದು ಮುನಿರತ್ನರಿಗೆ ಅವರು ಮನವಿ ಮಾಡಿದರು. ಹಣ ನೀಡದೆ ಸತಾಯಿಸುತ್ತಿರುವ ಜೊತೆಗೆ ನನ್ನ ಕಾರು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಪ್ರೇಮ್ ನಿಂದಿಸಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂಬ ಬೇಡಿಕೆಯನ್ನು ನಿರ್ಮಾಪಕರ ಸಂಘದ ಅಧ್ಯಕ್ಷರ ಬಳಿ ದೂರು ನೀಡಿದ್ದಾರೆ.
ಶ್ರೀನಿವಾಸ್ ವಿರುದ್ಧ ದೂರು
ನನ್ನ ಕಚೇರಿಯ ಎದುರು ಧರಣಿ ನಡೆಸಿ, ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಪ್ರೇಮ್ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ.