ಜಾನಪದದಿಂದ ಸಂಸ್ಕೃತಿಯ ಬೆಸುಗೆ: ಡಾ.ಬಾಲಾಜಿ

ಉಡುಪಿ, ಡಿ.16: ಪಾಶ್ಚಾತ್ಯ ಸಂಸ್ಕೃತಿ ಸಮಾಜ ಒಡೆಯಲು ಪ್ರೇರೆಪಿಸಿದರೆ, ಜಾನಪದ ಸಂಸ್ಕೃತಿ ಸಮಾಜವನ್ನು ಬೆಸೆಯುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದ್ದಾರೆ.
ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕನ್ನಡ ಜಾನಪದ ಪರಿಷತ್ನ ಉಡುಪಿ ಜಿಲ್ಲಾ ಘಟಕವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಜ್ಞಾತ ಕವಿಗಳಿಂದ ರಚಿಸಲ್ಪಟ ಅಮರ ಕಾವ್ಯವೇ ಜಾನಪದ. ಜಾನಪದ ಕಲಾವಿದರಲ್ಲಿ ಪಾರಂಪರಿಕ ಜ್ಞಾನ ಇದೆ. ಈ ಕಲಾವಿದರ ಜ್ಞಾನವು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗದಂತೆ, ವಿವಿಧ ಅಕಾಡೆಮಿಗಳು ಕಲಾವಿದರಿಗೆ ನೆರವು ನೀಡಬೇಕು. ಅಕಾಡೆಮಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಗ್ರಾಮೀಣ ಪ್ರತಿಭೆಗಳ ಬದುಕು ಕಟ್ಟಿಕೊಳ್ಳಲು ಆಧಾರವಾಗಬೇಕು ಎಂದರು.
ಈ ಸಂದರ್ಭದಲ್ಲಿ ಪಾಣಾರಾಟ ಮತ್ತು ಭೂತಕೋಲ ಕಲಾವಿದ ನಾಗ ರಾಜ ಪಾಣಾ ಹಾಗೂ ಡಾ.ಎಸ್.ಬಾಲಾಜಿ ಅವರನ್ನು ಸನ್ಮಾನಿಸಲಾಯಿತು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭುಜಂಗ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ನ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ರಾಜ್ಯ ಯುವ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ನ ಜಿಲ್ಲಾಧ್ಯಕ್ಷ ಡಾ.ಪ್ರಶಾಂತ್ ಕುಮಾರ್, ಮುಖ್ಯ ಶಿಕ್ಷಕ ಮಾಧವ ಅಡಿಗ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಸಿಂಹ ಗಾಣಿಗ ಉಪಸ್ಥಿತರಿದ್ದರು.